ರಾಜ್ಯಕ್ಕೆ BSY ವಾಪಸ್; ಗರಿಗೆದರಿದ ಸಂಪುಟ ವಿಸ್ತರಣೆ-ಮಂತ್ರಿಗಿರಿ ಸಿಗದ್ದಕ್ಕೆ ನೋವಾಗಿದೆ!
ಒಬ್ಬರಿಗೆ ಸಚಿವ ಸ್ಥಾನ ಕೊಟ್ಟು, ಮತ್ತೊಬ್ಬರಿಗೆ ಕೊಡದಿದ್ದರೆ ಅನ್ಯಾಯ ಮಾಡಿದಂತಾಗುತ್ತದೆ.
Team Udayavani, Jan 24, 2020, 4:35 PM IST
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿದೇಶ ಪ್ರವಾಸದಿಂದ ಹಿಂದಿರುಗಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ವಿಚಾರ ಗರಿಗೆದರಿದೆ. ಇನ್ನು ಮೂರು ದಿನಗಳಲ್ಲಿಯೇ ಸಚಿವ ಸಂಪುಟ ವಿಸ್ತರಿಸುವುದಾಗಿ ಬಿಎಸ್ ವೈ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಗೆದ್ದವರಿಗೆ ಸಚಿವ ಸ್ಥಾನ ದೊರಕಲಿದೆ. ಆದರೆ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಬಿಎಸ್ ವೈ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಆರು ದಿನಗಳ ಪ್ರವಾಸ ಮುಗಿಸಿ ಶುಕ್ರವಾರ ಮಧ್ಯಾಹ್ನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೆಂಗಳೂರಿಗೆ ಆಗಮಿಸಿದ್ದಾರೆ.
ಮಂತ್ರಿಗಿರಿ ಸಿಗದಿದ್ದಕ್ಕೆ ನೋವಾಗಿದೆ: ಬಿಸಿ ಪಾಟೀಲ್
ನಮಗೆ ಮಂತ್ರಿ ಸ್ಥಾನ ಸಿಗದಿರುವುದಕ್ಕೆ ನೋವಾಗಿದೆ. ನಮಗಿಂತ ಹೆಚ್ಚು ರಾಜ್ಯದ ಜನತೆಗೆ ನೋವಾಗಿದೆ ಎಂದು ಬಿಜೆಪಿ ಶಾಸಕ ಬಿಸಿ ಪಾಟೀಲ್ ಟಿವಿ ಚಾನೆಲ್ ವೊಂದರ ಜತೆ ಮಾತನಾಡುತ್ತ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಶೀಘ್ರವೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಎಲ್ಲಾ 17 ಮಂದಿಗೂ ಸಚಿವ ಸ್ಥಾನ ಕೊಡಬೇಕು: ಆರ್ ಶಂಕರ್
ಒಬ್ಬರಿಗೆ ಸಚಿವ ಸ್ಥಾನ ಕೊಟ್ಟು, ಮತ್ತೊಬ್ಬರಿಗೆ ಕೊಡದಿದ್ದರೆ ಅನ್ಯಾಯ ಮಾಡಿದಂತಾಗುತ್ತದೆ. 17 ಶಾಸಕರ ರಾಜೀನಾಮೆಯಿಂದಾಗಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಹೀಗಾಗಿ 17 ಜನರಿಗೂ ಮಂತ್ರಿ ಸ್ಥಾನ ಕೊಡಬೇಕು ಎಂದು ಮಾಜಿ ಶಾಸಕ ಆರ್.ಶಂಕರ್ ತಿಳಿಸಿದ್ದಾರೆ.
ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹೇಳುತ್ತಿದ್ದರೂ ಆ ಹೇಳಿಕೆ ಬಗ್ಗೆ ಸಚಿವಾಕಾಂಕ್ಷಿಗಳಲ್ಲಿ ವಿಶ್ವಾಸ ಇದ್ದಂತೆ ಇಲ್ಲ. ಮತ್ತೊಂದೆಡೆ ಹನ್ನೊಂದು ಶಾಸಕರ ಪೈಕಿ ಆರು ಮಂದಿಗಷ್ಟೇ ಸಚಿವ ಸ್ಥಾನ ನೀಡಲು ಚಿಂತನೆ ನಡೆದಿದೆ. ಆರು ಸಚಿವರು ಯಾರಾಗಬೇಕು ಎಂಬ ಬಗ್ಗೆ ಅವರಲ್ಲೇ ಚರ್ಚಿಸಿ ನಿರ್ಧರಿಸಿ ಹೆಸರು ತಿಳಿಸಲಿ ಎಂಬ ಸಂದೇಶವೂ ರವಾನೆಯಾಗಿದೆ ಎಂದು ಹೇಳಲಾಗುತ್ತಿದೆ.