ಗಿರೀಶ್ ಕಾರ್ನಾಡ್ ಇನ್ನಿಲ್ಲ : ವಿಧಿವಿಧಾನ ಇಲ್ಲದೆ ಸರಳ ಅಂತ್ಯಕ್ರಿಯೆ
Team Udayavani, Jun 11, 2019, 6:00 AM IST
ಬೆಂಗಳೂರು: ಜ್ಞಾನಪೀಠ ಪುರಸ್ಕೃತ ಸಾಹಿತಿ, ಮೇರು ರಂಗಕರ್ಮಿ, ಚಿತ್ರ ನಿರ್ದೇಶಕ ಗಿರೀಶ್ ಕಾರ್ನಾಡ್ (81) ಅವರನ್ನು ನಾಡು ಕಳಕೊಂಡಿದೆ. ಬಹುದಿನಗಳ ಅನಾರೋಗ್ಯವು ಸೋಮವಾರ ಬೆಳಗ್ಗೆ 8 ಗಂಟೆಗೆ ಅವರ ಉಸಿರನ್ನು ಸ್ತಬ್ಧವಾಗಿಸಿತು.
ವೈಚಾರಿಕ ನೆಲೆಗಟ್ಟಿನ ಮೇಲೆ ಸಾಹಿತ್ಯ ರಚಿಸುತ್ತಾ, ಕನ್ನಡದ ಕಲಾಶಕ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಹಬ್ಬಿಸಿದ್ದ ಕಾರ್ನಾಡ್, ಸಿನೆಮಾ ರಂಗದಲ್ಲೂ ವಿಶೇಷ ಛಾಪು ಮೂಡಿಸಿದ್ದರು. ಪತ್ನಿ ಡಾ| ಸರಸ್ವತಿ ಗಣಪತಿ, ಪುತ್ರಿ ಶಾಲ್ಮಲೀ ಮತ್ತು ಪುತ್ರ ರಘು ಕಾರ್ನಾಡ್ ಸಹಿತ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
ಕಾರ್ನಾಡ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನ ಲ್ಯಾವೆಲ್ಲೇ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಜನರು, ಗಣ್ಯರು ದೌಡಾಯಿಸಿದರು.
ಆದರೆ ಕಾರ್ನಾಡ್ ನಿವಾಸದಲ್ಲಿ ಆಯ್ದ ಆಪ್ತರಿಗೆ ಮತ್ತು ಸಾಹಿತ್ಯ ಲೋಕದ ಹಿರಿಯರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ಕವಿ ಕೆ.ಎಸ್. ನಿಸಾರ್ ಅಹಮದ್, ವಿಮರ್ಶಕ ರಾಮಚಂದ್ರ ಗುಹಾ, ಕವಿ ಮತ್ತು ಚಿತ್ರ ಸಾಹಿತಿ ಜಯಂತ್ ಕಾಯ್ಕಿಣಿ ಸಹಿತ ಕೆಲವು ಗಣ್ಯರು ಅಂತಿಮ ದರ್ಶನ ಪಡೆದರು.
ಅಪರಾಹ್ನ ಬೈಯಪ್ಪನಹಳ್ಳಿ ಸಮೀಪದ ಕಲ್ಪಹಳ್ಳಿಯ ಚಿತಾಗಾರದಲ್ಲಿ ಸಾರ್ವಜನಿಕರಿಗೆ ಮತ್ತು ಗಣ್ಯರಿಗೆ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ನೀಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಹಿರಿಯ ರಂಗಭೂಮಿ ಕಲಾವಿದೆ ಬಿ. ಜಯಶ್ರೀ, ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ, ಹಿರಿಯ ಚಿತ್ರ ಕಲಾವಿದ ಸುರೇಶ್ ಹೆಬ್ಳೀಕರ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್ ಸೇರಿದಂತೆ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಅಪರಾಹ್ನ 2.30ರ ವೇಳೆ ಸರಳ ರೀತಿಯಲ್ಲಿ, ವಿದ್ಯುತ್ ಚಿತಾಗಾರದಲ್ಲಿ ಕಾರ್ನಾಡ್ ಅವರ ಪಾರ್ಥಿವ ಶರೀರದ ವಿಲೀನವಾಯಿತು.
ಕಾರ್ನಾಡ್ ಮನವಿಗೆ ಸ್ಪಂದಿಸಿದ ಕುಟುಂಬ
ಅನಾರೋಗ್ಯದಿಂದ ಬಳಲುತ್ತಿದ್ದಾಗಲೇ ಗಿರೀಶ್ ಕಾರ್ನಾಡ್ ತಾನು ಸಾವಿಗೀಡಾದ ಬಳಿಕ ಯಾವುದೇ ಧರ್ಮದ ಸಂಪ್ರದಾಯದಲ್ಲಿ ಅಂತ್ಯ ಸಂಸ್ಕಾರ ಮಾಡ ದಂತೆ, ಪಾರ್ಥಿವ ಶರೀರಕ್ಕೆ ಹೂಗುತ್ಛ ಹಾಕದಂತೆ ಮತ್ತು ಪಾರ್ಥಿವ ಶರೀರದ ಮೆರವಣಿಗೆ ಮಾಡದಂತೆ ಕುಟುಂಬದವರಲ್ಲಿ ಮನವಿ ಮಾಡಿದ್ದರು.
ಮನವೊಲಿಸಲು ಮುಂದಾದ ಸಚಿವರು
ಕಲ್ಪಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್ ಅವರು ಕಾರ್ನಾಡ್ರಿಗೆ ಸರಕಾರದ ವತಿಯಿಂದ ಸಕಲ ಗೌರವ ನೀಡುವ ಸಂಬಂಧ ಕುಟುಂಬಸ್ಥರ ಮನವೊಲಿಕೆಗೆ ಮುಂದಾದರು. ಆದರೆ ಅವರ ಕುಟುಂಬದವರು ಇದಕ್ಕೆ ನಿರಾಕರಿಸಿದರು ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್ “ಉದಯವಾಣಿ’ಗೆ ತಿಳಿಸಿದರು.
ನುಡಿದಂತೆ ನಡೆದ ವ್ಯಕ್ತಿ
ಗಿರೀಶ್ ಕಾರ್ನಾಡ್ರ ನಿವಾಸದ ಮುಂದೆ ಮತ್ತು ಕಲ್ಪಹಳ್ಳಿ ಚಿತಾಗಾರದಲ್ಲಿ ಅವರ ನಾಟಕ ಸಾಹಿತ್ಯದ ಗುಣಗಾನ ನಡೆದಿತ್ತು. ತಮಗೆ ತಪ್ಪು ಎಂದು ಅನಿಸಿದ್ದನ್ನು ನೇರವಾಗಿ ಪ್ರತಿಭಟಿಸುವ ಗುಣ ಅವರದ್ದಾಗಿತ್ತು. ಹಲವಾರು ರೀತಿಯ ವಿರೋಧದ ನಡುವೆಯೂ ಕಾರ್ನಾಡ್ರು ನುಡಿದಂತೆ ನಡೆದರು ಎಂದು ಹಿರಿಯ ಕವಿ ಕೆ.ಎಸ್. ನಿಸಾರ್ ಅಹಮದ್ ಕಾರ್ನಾಡ್ರ ವ್ಯಕ್ತಿತ್ವವನ್ನು ಸ್ಮರಿಸಿದರು.
ಲೇಖಕ, ನಟ ಹಾಗೂ ಭಾರತೀಯ ರಂಗಕಲೆಯ ಮೇರು ವ್ಯಕ್ತಿತ್ವ ಗಿರೀಶ್ ಕಾರ್ನಾಡ್ ನಿಧನದ ಸುದ್ದಿ ಕೇಳಿ ದುಃಖವಾಯಿತು. ಇವರ ಅಗಲಿಕೆಯಿಂದ ನಮ್ಮ ಸಾಂಸ್ಕೃತಿಕ ಲೋಕ ಬಡವಾಗಿದೆ. ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ.
– ರಾಮನಾಥ ಕೋವಿಂದ್, ರಾಷ್ಟ್ರಪತಿ
ಗಿರೀಶ್ ಕಾರ್ನಾಡ್ ತಮ್ಮ ನಟನೆಯಿಂದ ಜನಮಾನಸದಲ್ಲಿ ಎಂದಿಗೂ ನೆಲೆಸಿರುತ್ತಾರೆ. ಅವರು ಕೆಲವು ವಿಚಾರಗಳ ಬಗ್ಗೆ ಅತ್ಯಂತ ಆಸ್ಥೆಯಿಂದ ಮಾತನಾಡುತ್ತಿದ್ದರು. ಅವರ ಕೃತಿಗಳು ಎಂದಿಗೂ ಜನರಿಗೆ ನೆನಪಿನಲ್ಲಿರುತ್ತವೆ. ಅವರ ನಿಧನ ದುಃಖ ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. -ನರೇಂದ್ರ ಮೋದಿ, ಪ್ರಧಾನಿ
ಸರಕಾರಿ ಗೌರವ, ಮಂತ್ರ -ಅಂತಿಮ ವಿಧಿವಿಧಾನವಿಲ್ಲದೇ ದಹನ ಕ್ರಿಯೆ ನಡೆಯಬೇಕು ಎಂಬುದು ಗಿರೀಶ್ ಕಾರ್ನಾಡ್ ಅವರ ಇಚ್ಛೆಯಾಗಿತ್ತಂತೆ. ಗಿರೀಶ್ ಕಾರ್ನಾಡ್ ಅವರಲ್ಲಿ ನಾನು ಮೆಚ್ಚುತ್ತಿದ್ದ ಗುಣವೆಂದರೆ ಅವರಲ್ಲಿ ಹಿಪೋಕ್ರಸಿ ಇರಲಿಲ್ಲ, ಈ ಗುಣವನ್ನು ಮೆಚ್ಚಲೇಬೇಕು. ಅವರದ್ದು ದೊಡ್ಡ ವ್ಯಕ್ತಿತ್ವ. -ಎಸ್.ಎಲ್. ಭೈರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್