ಧಾರಾಕಾರ ಮಳೆ: ಲೋಂಡಾದಲ್ಲಿ ಭೂಕುಸಿತ; ರೈಲ್ವೇ ಸಂಚಾರ ತಾತ್ಕಾಲಿಕ ಸ್ಥಗಿತ
Team Udayavani, Aug 4, 2019, 7:48 PM IST
ಸಾಂದರ್ಭಿಕ ಚಿತ್ರ
ಬೆಳಗಾವಿ: ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಲೋಂಡಾ ಬಳಿ ರೈಲ್ವೆ ಹಳಿ ಪಕ್ಕದಲ್ಲಿ ಭೂ ಕುಸಿತ ಉಂಟಾಗಿದೆ. ಇದರಿಂದ ಕರ್ನಾಟಕ ಹಾಗೂ ಗೋವಾ ಮಧ್ಯೆ ರೈಲು ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಭೂ ಕುಸಿತವಾಗಿದ್ದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ರೈಲ್ವೆ ಅಧಿಕಾರಿಗಳು ದುರಸ್ತಿಗೆ ಮುಂದಾಗಿದ್ದಾರೆ. ಈ ಕಾಮಗಾರಿ ರವಿವಾರ ರಾತ್ರಿ ವೇಳೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.
ಮಧ್ಯಾಹ್ನ 1 ಗಂಟೆಗೆ ಪುಣೆ ಎರ್ನಾಕುಲಂ ರೈಲ ತೆರಳಿದ ನಂತರ ಈ ಘಟನೆ ನಡೆದಿದ್ದು ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದಂತಾಗಿದೆ. ಭೂ ಕುಸಿತದಿಂದಾಗಿ ಮೀರಜ್ ಹಾಗೂ ಗೋವಾದ ಕ್ಯಾಸಲ್ ರಾಕ್ ಬಳಿ ಸಂಚರಿಸುವ ರೈಲನ್ನು ಬೆಳಗಾವಿವರೆಗೆ ಮಾತ್ರ ಓಡಿಸಲಾಗುವದು. ಇದೇ ರೈಲು ಆ. 5 ರಂದು ಬೆಳಗಾವಿಯಿಂದ ಮೀರಜ್ ಗೆ ಸಂಚರಿಸಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.