ಎಂಡೋಪೀಡಿತ ಮಕ್ಕಳಿಗೆ ಸಿಗದ ಗೃಹಾಧಾರಿತ ಶಿಕ್ಷಣ
ಸಂತ್ರಸ್ತರನ್ನು ಮುಖ್ಯವಾಹಿನಿಗೆ ತರಲು ಆಯುಕ್ತಾಲಯ ಶಿಫಾರಸು
Team Udayavani, Jun 2, 2019, 6:00 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರ ಪ್ರಕಾರ ದೈಹಿಕ ಮತ್ತು ಮಾನಸಿಕ ನ್ಯೂನತೆಯುಳ್ಳ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಗೃಹಾಧಾರಿತ ಶಿಕ್ಷಣ ನೀಡಬೇಕಿದೆ. ಆದರೆ ದಕ್ಷಿಣ ಕನ್ನಡ, ಉಡುಪಿ ಸಹಿತ ರಾಜ್ಯದ ಎಂಡೋಪೀಡಿತ ಜಿಲ್ಲೆಗಳಲ್ಲಿ ಈ ವರೆಗೂ ಸಮರ್ಪಕವಾಗಿ ಜಾರಿಯಾಗಿಲ್ಲ. 10 ಸಾವಿರಕ್ಕೂ ಹೆಚ್ಚು ಎಂಡೋಪೀಡಿತರು ರಾಜ್ಯದಲ್ಲಿದ್ದಾರೆ. ಇವರಲ್ಲಿ ಶೇ.30ರಷ್ಟು ಮಕ್ಕಳು. ಇವರು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಮುಖ್ಯ ವಾಹಿನಿಗೆ ತರುವಲ್ಲಿ ಸರಕಾರ ಹಿಂದುಳಿ ದಿರುವುದು ಅಂಗವಿಕಲರ ಅಧಿನಿಯಮ ಆಯುಕ್ತಾಲಯ ಅಧ್ಯಯನದಿಂದ ಗೊತ್ತಾಗಿದೆ.
2016ರ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಪ್ರಕಾರ ಎಂಡೋಪೀಡಿತರ ಪುನರ್ವಸತಿ ಸರಕಾರದ ಜವಾಬ್ದಾರಿ. ಆದರೆ ಮುಖ್ಯವಾಗಿ ಎಂಡೋಪೀಡಿತ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಗೃಹಾಧಾರಿತ ಶಿಕ್ಷಣ ಸಿಗುತ್ತಿಲ್ಲ ಎಂಬುದನ್ನು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಸದ್ಯ ಕೆಲವು ಪುನರ್ವಸತಿ ಕೇಂದ್ರಗಳಲ್ಲಿ ಶಿಕ್ಷಣ ನೀಡುತ್ತಿದ್ದು, ಇಲ್ಲಿಯೂ ಸೂಕ್ತ ಸಲಕರಣೆ, ಸಿಬಂದಿ ಇಲ್ಲದಿರುವುದು ಕಂಡುಬಂದಿದೆ.
ಮನೆಗೇ ಶಿಕ್ಷಕರು
ವಿಶೇಷ ತರಬೇತಿ ಪಡೆದ ಶಿಕ್ಷಕರು ಅಂಗ ವಿಕಲ ಮಗುವಿನ ಮನೆಗೆ ತೆರಳಿ ಕೌಶಲಾಧಾರಿತ ಶಿಕ್ಷಣ ನೀಡಬೇಕು. ಆದರೆ ಈ ಕಾರ್ಯಕ್ರಮ ಸೂಕ್ತವಾಗಿ ಜಾರಿಯಾಗದೇ ಶೇ. 70ರಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಆರೋಗ್ಯ ಇಲಾಖೆ ವೈಫಲ್ಯ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೂ ಎಂಡೋಸಂತ್ರಸ್ತರ ಪುನಃಶ್ಚೇತನಕ್ಕೆ ಹಿಂದೇಟು ಹಾಕುತ್ತಿದ್ದು, ಥೆರಪಿಸ್ಟ್ ಸೇವೆ, ಸೂಕ್ತ ಸಲಕರಣೆ ಒದಗಿಸಿಲ್ಲ ಎಂಬುದು ಪರಿಶೀಲನೆಯಿಂದ ತಿಳಿದು ಬಂದಿದೆ.
ಆಯುಕ್ತಾಲಯದ ಪ್ರಮುಖ ಮಾರ್ಗಸೂಚಿ ಎಂಡೋಪೀಡಿತ ಪ್ರದೇಶಗಳ ಮನೆ ಗಣತಿ, ಸಂತ್ರಸ್ತರ ಪಟ್ಟಿ ತಯಾರಿ. ಸಂತ್ರಸ್ತರ ಮನೆಗಳನ್ನು ಅಂಗವಿಕಲ ಸ್ನೇಹಿಗೊಳಿಸಿ ಸ್ವಾವಲಂಬನೆ ಕಲ್ಪಿಸುವುದು.
ಗೃಹಾಧಾರಿತ ಶಿಕ್ಷಣದ ಜತೆಗೆ ಸಂಪನ್ಮೂಲ ಕೇಂದ್ರಗಳಿಗೆ ತೆರಳಲು ಸಾರಿಗೆ ಸೌಲಭ್ಯ. ಪರಿಶೀಲನೆ ಮತ್ತು ಮಾಸಿಕ ಸಭೆ ಮೂಲಕ ಸರಕಾರಿ ಕಾರ್ಯಕ್ರಮಗಳನ್ನು ಸಂತ್ರಸ್ತ ಕುಟುಂಬಗಳಿಗೆ ತಿಳಿಸುವುದು.
ಎಂಡೋಸಲ್ಫಾನ್ನಿಂದ ಅಂಗವೈಕಲ್ಯಕ್ಕೆ ತುತ್ತಾದವರಿಗೆ ಸೂಕ್ತ ಸೌಲಭ್ಯವಿಲ್ಲ ಎಂಬ ಕುರಿತು ಸಾಕಷ್ಟು ದೂರುಗಳು ಆಯು ಕ್ತಾಲಯಕ್ಕೆ ಬರುತ್ತಿದ್ದವು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿವಿಧ ಇಲಾಖೆ ಸೂಕ್ತ ಪುನಃಶ್ಚೇತನ ಕಾರ್ಯಕ್ರಮ ಕೈಗೊಳ್ಳದಿರು ವುದು ತಿಳಿದುಬಂದಿದೆ. ಸರಕಾರಕ್ಕೆ ಅಗತ್ಯ ಮಾರ್ಗಸೂಚಿಯನ್ನು ನೀಡಲಾಗಿದೆ.
-ವಿ.ಎಸ್.ಬಸವರಾಜು, ಆಯುಕ್ತರು, ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಆಯುಕ್ತಾಲಯ.
ಜಯಪ್ರಕಾಶ್ ಬಿರಾದಾರ್