ಲೈಬ್ರರಿಯಲ್ಲಿ ಕಾಡು, ಓದುಗರ ದೌಡು : ಕಲಾವಿದನ ಕೈಚಳಕದಿಂದ ಲೈಬ್ರರಿಯ ಚಹರೆ ಬದಲು
ಪ್ರತಿನಿತ್ಯ ಗ್ರಂಥಾಲಯಕ್ಕೆ ಸಹಸ್ರಾರು ಓದುಗರ ಆಗಮನ
Team Udayavani, Apr 25, 2022, 7:00 AM IST
ವಿಶಾಖಪಟ್ಟಣ: ಸುತ್ತ ದಟ್ಟ ಕಾಡು. ನಡುವೆ ಪುಸ್ತಕ ಹಿಡಿದು, ಓದುತ್ತಾ ಕುಳಿತರೆ ಅದಕ್ಕಿಂತ ಧ್ಯಾನದ ಸುಖ ಬೇರೊಂದಿಲ್ಲ. ಗ್ರಂಥಾಲಯ ದೊಳಗೆ ಪೇಂಟಿಂಗ್ ಮೂಲಕ ಇಂಥ ಕಾಡು ಸೃಷ್ಟಿಸಿ, ಅಪಾರ ಓದುಗರನ್ನು ಸೆಳೆಯುವಲ್ಲಿ ಸಫಲವಾದ ವಿಶಾಖಪಟ್ಟಣದ ಮಿಯಾವಾಕಿ ಲೈಬ್ರರಿ ಈಗ ದೇಶಕ್ಕೇ ಮಾದರಿ!
ಹೌದು. ಡಿಜಿಟಲ್ ಯುಗದಲ್ಲಿ ಸಾರ್ವಜನಿಕ ಗ್ರಂಥಾಲಯಗಳತ್ತ ಓದುಗರು ಬರುತ್ತಿಲ್ಲ ಎಂಬ ಕೊರಗು ಇಲ್ಲಿನ ಗ್ರಂಥಾಲಯಕ್ಕೂ ಇತ್ತು. ಆದರೆ, ಧೃತಿಗೆಡಲಿಲ್ಲ. ಜಪಾನಿ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾವಾಕಿಯ ಕಲ್ಪನೆಯಂತೆ, ಪೇಂಟಿಂಗ್ ಮೂಲಕ ಗ್ರಂಥಾಲಯದ ಗೋಡೆಯ ಮೇಲೆ ಮರಗಿಡಗಳನ್ನು ರಚಿಸಿ, ಬಣ್ಣಗಳ ಮಿನಿಕಾಡನ್ನೇ ಸೃಷ್ಟಿಸಲಾಯಿತು. ವಿಶೇಷವಾಗಿ ಈ ಕೃತಕ ಕಾಡಿನ ತಂತ್ರ ಮಕ್ಕಳನ್ನು ಸೆಳೆಯುವಲ್ಲಿ ಸಫಲವಾಯಿತು. ಕಲಾವಿದನ ಕೈಚಳಕದ ಬಳಿಕ ಪ್ರತಿನಿತ್ಯ ಈ ಲೈಬ್ರರಿಗೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಓದುಗರು ಆಗಮಿಸುತ್ತಿದ್ದಾರೆ.
ಕೃತಕ ಪರಿಸರ ಹೇಗಿದೆ?: ಬೆಟ್ಟ, ಹಸುರು ಮರ, ಅದರ ಮೇಲೆ ಪಕ್ಷಿಗಳು, ಒಂದು ನದಿ, ಅದರ ನೀರನ್ನು ತಣ್ಣಗೆ ಕುಡಿಯಲು ಬಂದ ಜಿಂಕೆ, ಅದರ ಹಿಂದೆಯೇ ಒಂದು ಹುಲಿ… ಹೀಗೆ ಪ್ರಕೃತಿಯ ರಮ್ಯ ಪರಿಸರವನ್ನು ಲೈಬ್ರರಿಯೊಳಗೆ ಚಿತ್ರಿಸಿ, ಮಕ್ಕಳನ್ನು ಆಕರ್ಷಿಸಲಾಗಿದೆ.
70 ಸಾವಿರ ಪುಸ್ತಕಗಳು!: ಗ್ರಂಥಾಲಯದಲ್ಲಿ ಒಟ್ಟು 70 ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದು, 30ಕ್ಕೂ ಅಧಿಕ ಮ್ಯಾಗಜಿನ್ಗಳ ಚಂದಾದಾರಿಕೆ ಮಾಡಿಕೊಳ್ಳಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದಂತೆ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರುಗೊಳ್ಳುವ ಅಭ್ಯರ್ಥಿಗಳಿಗಾಗಿ ಇ-ಲೈಬ್ರರಿ ಒದಗಿಸಲಾಗಿದೆ. ಆನ್ಲೈನ್ ಅಣಕು ಪರೀಕ್ಷೆ, ಇ- ಕಿಯೋಸ್ಕ್ಗಳು ಇಲ್ಲಿನ ಇನ್ನೊಂದು ವಿಶೇಷ.