ಸಂಸದರ ವೇತನಕ್ಕೆ ಕೋವಿಡ್ 19 ಕತ್ತರಿ
ಸಂಸದರು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರ ವೇತನ ಶೇ. 30 ಕಡಿತ
Team Udayavani, Apr 7, 2020, 6:30 AM IST
ಹೊಸದಿಲ್ಲಿ/ಬೆಂಗಳೂರು: ಕೋವಿಡ್ 19 ಸೋಂಕು ನಿಗ್ರಹಕ್ಕೆ ಈಗಾಗಲೇ ನಾನಾ ಕ್ರಮ ತೆಗೆದುಕೊಂಡಿರುವ ಕೇಂದ್ರ ಸರಕಾರವು ಈಗ ಪರಿಹಾರೋಪಾಯಗಳಿಗಾಗಿ ಹಣ ಹೊಂದಿಸುವ ಕೆಲಸಕ್ಕೆ ಕೈಹಾಕಿದೆ. ಸಂಸದರ ವೇತನ ಕಡಿತ ಮತ್ತು ಅವರ ಎಂಪಿ ಲಾಡ್ ಫಂಡ್ ಅನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದೇಶದ ಎಲ್ಲ ಸಂಸದರ ವೇತನದಲ್ಲಿ ಶೇ.30 ಕಡಿತ ಮಾಡಲಾಗಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ವಿಧೇಯಕ ಹೊರಡಿಸಲು ನಿರ್ಧರಿಸಲಾಗಿದೆ.
ಸಂಸದರ ಜತೆಗೆ ಒಂದು ವರ್ಷ ಕಾಲ ಪ್ರಧಾನಿ, ರಾಷ್ಟ್ರ ಪತಿ, ಉಪರಾಷ್ಟ್ರಪತಿಗಳ ವೇತನವೂ ಶೇ.30ರಷ್ಟು ಕಡಿತವಾಗಲಿದೆ. ರಾಜ್ಯ ಪಾಲರು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿ ನೆಂಟ್ ಗವರ್ನರ್ಗಳೂ ತಮ್ಮ ತಮ್ಮ ವೇತನವನ್ನು ಶೇ.30ರಷ್ಟು ಕಡಿತ ಮಾಡಿಕೊ ಳ್ಳುವಂತೆ ಹೇಳಿದ್ದಾರೆ.
7,900 ಕೋ.ರೂ. ಉಳಿತಾಯ
ಎರಡು ವರ್ಷಗಳ ಕಾಲ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಸ್ಥಗಿತ ಮಾಡಿರುವುದರಿಂದಾಗಿ ಕೇಂದ್ರ ಸರರ್ಕಾರದ ಬೊಕ್ಕಸಕ್ಕೆ 7,900 ಕೋ. ರೂ. ಉಳಿತಾಯವಾಗಲಿದೆ. ಇದನ್ನು ಕೋವಿಡ್ 19 ನಿಯಂತ್ರಣಕ್ಕಾಗಿ ಬಳಸಲಾಗುತ್ತದೆ ಎಂದು ಕೇಂದ್ರ ಹೇಳಿದೆ.
14ಕ್ಕೆ ಲಾಕ್ ಡೌನ್ ತೆರವು?
ದೇಶಾದ್ಯಂತ ಕೋವಿಡ್ 19 ಪ್ರಕರಣಗಳಲ್ಲಿ ಭಾರೀ ಏರಿಕೆಯಾಗುತ್ತಿದ್ದರೂ ಕೇಂದ್ರ ಸರಕಾರ ಲಾಕ್ಡೌನ್ ತೆರವು ಮಾಡುವ ಬಗ್ಗೆ ಸುಳಿವು ನೀಡಿದೆ. ಪ್ರಧಾನಿ ಮೋದಿ ಸೋಮವಾರ ತಮ್ಮ ಸಂಪುಟದ ಸಚಿವರ ಜತೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಲಾಕ್ಡೌನ್ ಅನ್ನು ಭಾಗಶಃ ತೆರವು ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ. ಕೋವಿಡ್ 19 ಕಷ್ಟಕಾಲದಲ್ಲಿ ನಾವೀಗ ಸ್ವಾವಲಂಬನೆ ಸಾಧಿಸಬೇಕಿದೆ. ಮೇಕ್ ಇನ್ ಇಂಡಿಯಾ ಮೂಲಕ ನಮಗೆ ಬೇಕಾದ ವಸ್ತುಗಳನ್ನು ತಯಾರಿಸಿಕೊಳ್ಳಲು ಇದು ಸಕಾಲ . ಅಷ್ಟೇ ಅಲ್ಲ, ಹಾಟ್ಸ್ಪಾಟ್ಗಳನ್ನು ಹೊರತುಪಡಿಸಿ, ಉಳಿದೆಡೆ ನಿಧಾನಗತಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆಯುವ ಬಗ್ಗೆ ಯೋಜನೆ ರೂಪಿಸುವಂತೆ ಮೋದಿ ಸೂಚಿಸಿದ್ದಾರೆ.
ಜತೆಗೆ ರೈತರ ಕಲ್ಯಾ ಣದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವಂತೆಯೂ ಮೋದಿ ಸೂಚಿಸಿದ್ದು, ರೈತರ ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಬಿತ್ತನೆ ಕಾರ್ಯಕ್ಕೆ ಮುಂದಾಗುವಂತೆ ಮಾಡಿ ಎಂದು ಸಚಿವರಿಗೆ ಸಲಹೆ ನೀಡಿದ್ದಾರೆ. ಒಟ್ಟಾರೆಯಾಗಿ ದೇಶದ ಆರ್ಥಿಕ ವ್ಯವ ಸ್ಥೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸಮರೋಪಾದಿಯಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ.
ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ ಸಚಿವ ಪ್ರಕಾಶ್ ಜಾಬ್ಡೇಕರ್, ಯಾವುದೇ ಖಚಿತ ಮಾಹಿತಿ ನೀಡಲು ನಿರಾಕರಿಸಿದರು. ಇಡೀ ಜಗತ್ತಿನ ಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಉನ್ನತ ಸಮಿತಿಯ ಅಧಿಕಾರಿಗಳೂ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಸರಿಯಾದ ಸಮಯದಲ್ಲಿ ರಾಷ್ಟ್ರೀಯ ಹಿತಾಸಕ್ತಿಯಿಂದ ಸರಿಯಾದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
ಒಂದು ಊಟ ಬಿಡಿ
ಕೋವಿಡ್ 19 ಕಷ್ಟದಲ್ಲಿರುವವರ ನೆರವಿಗೆ ನಿಲ್ಲುವಂತೆ ಕಾರ್ಯಕರ್ತರಿಗೆ ಕರೆ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಒಂದು ಹೊತ್ತಿನ ಊಟ ಬಿಡುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಪ್ರತೀ ಬಿಜೆಪಿ ಕಾರ್ಯಕರ್ತನೂ 40 ಮಂದಿಯಿಂದ ಕಡೇ ಪಕ್ಷ 100 ದೇಣಿಗೆ ಮತ್ತು 40 ಮನೆಗಳಿಗೆ ಭೇಟಿ ನೀಡಿ ಆರೋಗ್ಯ ಸಿಬಂದಿಗೆ ಕೃತಜ್ಞತೆ ಹೇಳುವ ಪತ್ರಕ್ಕೆ ಸಹಿ ಹಾಕಿಸಿಕೊಂಡು ಬನ್ನಿ ಎಂದೂ ಕರೆ ನೀಡಿದ್ದಾರೆ. ಈ ಸಂದರ್ಭ ಸಾಮಾ ಜಿಕ ಅಂತರ ಪಾಲಿಸಲೇಬೇಕು ಎಂದೂ ಸೂಚಿಸಿದ್ದಾರೆ.
ಈ ಟ್ವೀಟ್ ಅನ್ನು ಪ್ರಧಾನಿ ಮೋದಿ ಅವರೂ ಹಂಚಿಕೊಂಡಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮಾರ್ಗದರ್ಶನಗಳನ್ನು ಎಲ್ಲ ಕಾರ್ಯಕರ್ತರು ಅನುಸರಿಸಬೇಕು. ಈ ಮೂಲಕ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಭಾಗಿಯಾಗಬೇಕು ಎಂದಿದ್ದಾರೆ.
ಕ್ವಾರಂಟೈ ನ್ನಲ್ಲಿ
25,500 ತಬ್ಲೀ ಸದಸ್ಯರು
ದಿಲ್ಲಿಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ 25,500 ಸದಸ್ಯರನ್ನು ಪತ್ತೆ ಹಚ್ಚಲಾಗಿದ್ದು, ಇವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾರಗಳು ಬೃಹತ್ ಕಾರ್ಯಾಚರಣೆ ನಡೆಸಿ ಇವರನ್ನು ಪತ್ತೆ ಹಚ್ಚಿವೆ ಎಂದು ಅದು ತಿಳಿಸಿದೆ. ಹರಿಯಾಣದ ಐದು ಹಳ್ಳಿಗಳಲ್ಲಿ ನಿಜಾಮುದ್ದೀನ್ನಲ್ಲಿ ಭಾಗವಹಿಸಿದ್ದ ವಿದೇಶೀಯರು ಇದ್ದರು. ಈ ಐದೂ ಹಳ್ಳಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ಗ್ರಾಮಗಳ ಎಲ್ಲರನ್ನೂ ಕ್ವಾರಂಟೈನ್ನಲ್ಲಿ ಇಡಲಾಗದೆ.
ಬಾಹ್ಯಾಕಾಶ ಯಾನ ತರ ಬೇತಿ ಸ್ಥಗಿತ
ಕೋವಿಡ್ 19 ಬಾಹ್ಯಾಕಾಶ ಯಾನ ಯಾತ್ರೆಯ ಮೇಲೂ ಬೀರಿದೆ. ರಷ್ಯಾದಲ್ಲಿ ಭಾರತದ ನಾಲ್ವರು ಬಾಹ್ಯಾಕಾಶ ಯಾನಕ್ಕಾಗಿ ತರ ಬೇತಿ ಪಡೆಯುತ್ತಿದ್ದು, ಸದ್ಯಕ್ಕೆ ಇದನ್ನು ಸ್ಥಗಿತ ಮಾಡ ಲಾಗಿದೆ. ಭಾರತೀಯ ವಾಯುಪಡೆಯ ನಾಲ್ವರು ರಷ್ಯಾದ ಮಾಸ್ಕೋದಲ್ಲಿರುವ ಯು.ಎ. ಗಗಾರಿನ್ ರಿಸರ್ಚ್ ಮತ್ತು ಟೆಸ್ಟ್ ಕಾಸ್ಮೋನಾಟ್ ಟ್ರೈನಿಂಗ್ ಸೆಂಟರ್ನಲ್ಲಿ ತರಬೇತಿ ಪಡೆಯು ತ್ತಿದ್ದರು. ಒಂದು ವಾರದಿಂದ ಈ ತರಬೇತಿ ಕೇಂದ್ರ ವನ್ನು ಮುಚ್ಚಲಾಗಿದೆ.
4,500 ಮೀರಿದ ಸಂಖ್ಯೆ
ದೇಶಾದ್ಯಂತ ಕೋವಿಡ್ 19 ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಮವಾರ ರಾತ್ರಿ ವೇಳೆಗೆ ಸೋಂಕುಪೀಡಿತರ ಸಂಖ್ಯೆ 4,756ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ, 868 ಕೇಸುಗಳು ಪತ್ತೆಯಾಗಿವೆ. ತಮಿಳುನಾಡಿನಲ್ಲಿ 621, ದಿಲ್ಲಿಯಲ್ಲಿ 523, ತೆಲಂಗಾಣ ದಲ್ಲಿ 364, ಕೇರಳದಲ್ಲಿ 327, ಉತ್ತರ ಪ್ರದೇಶದಲ್ಲಿ 305, ಆಂಧ್ರ ಪ್ರದೇಶದಲ್ಲಿ 303ಕ್ಕೆ ಏರಿಕೆಯಾಗಿದೆ.
ಅತ್ತ ಕೇಂದ್ರ ಗೃಹ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ರವಿವಾರದಿಂದ ಈಚೆಗೆ ದೇಶದಲ್ಲಿ 693 ಪ್ರಕರಣಗಳು ಹೆಚ್ಚಿದ್ದು, 30 ಮಂದಿ ಸಾವನ್ನಪ್ಪಿದ್ದಾರೆ. ಸೋಂಕುಪೀಡಿತರ ಸಂಖ್ಯೆಯಲ್ಲಿ 1,445 ಪ್ರಕರಣಗಳು ದಿಲ್ಲಿಯ ಧಾರ್ಮಿಕ ಸಮಾವೇಶದ ಜತೆ ನಂಟು ಹೊಂದಿವೆ ಎಂದು ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ. ಮಧ್ಯವಸ್ಕರಲ್ಲೇ ಹೆಚ್ಚು ಸೋಂಕಿತ ಪ್ರಕರಣಗಳು ಕಂಡು ಬಂದಿ ದ್ದರೂ ಸಾವಿನ ವಿಚಾರದಲ್ಲಿ ಅಂಕಿ ಅಂಶ ತದ್ವಿರುದ್ಧ ಇವೆ. ಕೋವಿಡ್ 19ದಿಂದ ಮೃತಪಟ್ಟವರಲ್ಲಿ ವಯಸ್ಸಾದವರು ಮತ್ತು ಈ ಹಿಂದೆಯ ಬೇರೆ ರೋಗದಿಂದ ನರಳುತ್ತಿದ್ದವರು ಹೆಚ್ಚಾಗಿದ್ದಾರೆ.