Hit and Run ಪ್ರಕರಣ; ಬೈಕ್ ಸವಾರ ಗಂಭೀರ
Team Udayavani, Jun 5, 2023, 1:19 PM IST
ಉಳ್ಳಾಲ: ಬೈಕ್ ಗೆ ಕಾರು ಢಿಕ್ಕಿ ಹೊಡೆದು ಪರಾರಿಯಾಗಿರುವ ಹಿಟ್ ಆಂಡ್ ರನ್ ಪ್ರಕರಣ ರಾ.ಹೆ 66 ರ ಸಂಕೊಳಿಗೆ ಸಮೀಪ ಜೂ. 4ರ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ.
ಘಟನೆಯಿಂದ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಘಟನೆಗೆ ಕಾರಣವಾದ ಕೇರಳ ನೋಂದಾಯಿತ ಇನೋವಾ ಕಾರಿನ ದಾಖಲೆಯನ್ನು ಸಿಸಿಟಿವಿ ಮೂಲಕ ಪತ್ತೆ ಹಚ್ಚಲಾಗಿದೆ.
ಕೋಟೆಕಾರು ವೈದ್ಯನಾಥ ದೇವಸ್ಥಾನ ಪ್ರದೇಶದ ನಿವಾಸಿ ತೇಜಸ್ ರಾಮ ಕುಲಾಲ್ (28) ಗಾಯಾಳು.
ಕೋಟೆಕಾರಿನ ತನ್ನ ಮನೆ ಕಡೆಗೆ ಬರುವ ಸಂದರ್ಭ ಕೇರಳ ಕಡೆಗೆ ತೆರಳುತ್ತಿದ್ದ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯ ಪರಿಣಾಮ ಗಂಭೀರ ಗಾಯಗೊಂಡ ತೇಜಸ್ ಅವರನ್ನು ತಕ್ಷಣ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿ, ತಲಪಾಡಿ ಟೋಲ್ ಗೇಟ್ ನ ಸಿಸಿಟಿವಿ ಪರಿಶೀಲಿಸಿದಾಗ ಕೇರಳ ನೋಂದಾಯಿತ ಇನೋವಾ ಕಾರು ಘಟನೆಗೆ ಕಾರಣವಾಗಿರುವುದೆಂದು ಪತ್ತೆಹಚ್ಚಿದ್ದಾರೆ.