ರಷ್ಯಾದಿಂದ ಯುದ್ಧಾಪರಾಧ; ಹೆರಿಗೆ ಆಸ್ಪತ್ರೆ ಮೇಲೆ ಬಾಂಬ್ ದಾಳಿ: ರಷ್ಯಾ ಕ್ರಮಕ್ಕೆ ಖಂಡನೆ
Team Udayavani, Mar 11, 2022, 8:05 AM IST
ಕೀವ್: ಉಕ್ರೇನಿಯನ್ ಬಂದರು ನಗರವಾದ ಮರಿಯುಪೊಲ್ನಲ್ಲಿರುವ ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆ ಮೇಲೆ ಬುಧವಾರ ರಷ್ಯಾ ನಡೆಸಿರುವ ವೈಮಾನಿಕ ದಾಳಿ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ದಾಳಿಯಲ್ಲಿ ಯಾವುದೇ ಮಕ್ಕಳಿಗೆ ಹಾನಿಯಾಗಿಲ್ಲವಾದರೂ 17ಮಂದಿ ಗಾಯಗೊಂಡಿದ್ದಾರೆ. ಆದರೆ, ಮಕ್ಕಳ ಆಸ್ಪತ್ರೆಯ ಮೇಲೆ ಕರುಣೆಯನ್ನೂ ತೋರದ ರಷ್ಯಾ, ಯುದ್ಧ ಅಪರಾಧಗಳನ್ನು ಮಾಡುತ್ತಿದೆ ಎಂದು ವಿಶ್ವದ ಅನೇಕ ನಾಯಕರು ಕಿಡಿಕಾರಿದ್ದಾರೆ.
ಉಕ್ರೇನ್ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿರುವುದು ಯುದ್ಧಾಪರಾಧ ಎಂದು ಯುಕೆ ರಕ್ಷಣ ಸಚಿವ ಜೇಮ್ಸ್ ಹೆಪ್ಪಿ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ರಷ್ಯಾದ ಜನರಲ್ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.
ಉಕ್ರೇನ್ನ ಮರಿಯುಪೊಲ್ನಲ್ಲಿರುವ ಹೆರಿಗೆ ಆಸ್ಪತ್ರೆಯ ಮೇಲೆ ರಷ್ಯಾ ಯುದ್ಧ ವಿಮಾನಗಳು ದಾಳಿ ನಡೆಸಿದ್ದು ಒಂದು ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎನ್ನುವ ವರದಿ ಹಿನ್ನೆಲೆಯಲ್ಲಿ ಹೆಪ್ಪಿ ಈ ಹೇಳಿಕೆ ನೀಡಿದ್ದಾರೆ. ಇದು ಯುದ್ಧಾಪರಾಧ ಎಂದು ಸಾಬೀತುಪಡಿಸಲು ಪುರಾವೆಗಳನ್ನು ಸಂಗ್ರಹಿಸಬೇಕು. ಪುಟಿನ್ ನಡೆಸುತ್ತಿರುವುದು ಯುದ್ಧವಲ್ಲ. ಅವರು ತಮ್ಮ ಸೇನೆಯ ಮೂಲಕ ಉಕ್ರೇನ್ನ ನಗರಗಳಿಗೆ ಮುತ್ತಿಗೆ ಹಾಕಿ, ದಾಳಿ ನಡೆಸುತ್ತಿದ್ದು ನಾಗರಿಕರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇದು ಸಂಪೂರ್ಣ ಹೇಯ ಕೃತ್ಯವಾಗಿದೆ ಎಂದಿದ್ದಾರೆ.
ಝೆಲೆನ್ಸ್ಕಿ ಖಂಡನೆ
ಘಟನೆಯನ್ನು ಖಂಡಿಸಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇದು ರಷ್ಯಾ ಸೇನೆ ನಡೆಸಿದ ದೌರ್ಜನ್ಯ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಟ್ವಿಟರ್ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದು, ಇದರಲ್ಲಿ ಆಸ್ಪತ್ರೆಯ ಕಿಟಕಿ, ಗೋಡೆಗಳು ಕಿತ್ತು ಹೋಗಿರುವ ದೃಶ್ಯಗಳಿವೆ.
ರಷ್ಯಾ ದಾಳಿಯಿಂದ ನಗರದ ಮಧ್ಯಭಾಗದಲ್ಲಿರುವ ಹೆರಿಗೆ ಆಸ್ಪತ್ರೆ ಸಂಪೂರ್ಣ ನಾಶವಾಗಿದೆ. ಇದರಲ್ಲಿ ಮಕ್ಕಳ ಘಟಕವೂ ಸೇರಿದೆ. ಆದರೆ ಎಂದು ಸ್ಥಳೀಯ ಅಧಿಕಾರಿ ಪಾವ್ಲೊ ಕಿರಿಲೆಂಕೊ ಹೇಳಿ¨ªಾರೆ.
ಮರಿಯುಪೊಲ್ ನಗರವನ್ನು ರಷ್ಯಾ ಪಡೆಗಳು ಸುತ್ತುವರಿದಿದ್ದು ಕದನ ವಿರಾಮದ ಭರವಸೆಯ ಹೊರತಾಗಿಯೂ ನಗರದ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ ಎಂದವರು ದೂರಿದರು. ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಈ ದಾಳಿಯನ್ನು ಖಂಡಿಸಿದ್ದಾರೆ.
ಮಿಲಿಟರಿಯಿಂದ ವಿವರ ಕೇಳುತ್ತೇವೆ: ರಷ್ಯಾ
ಮಾಸ್ಕೋ : ಉಕ್ರೇನ್ನ ಮರಿಯುಪೋಲ್ನಲ್ಲಿರುವ ಆಸ್ಪತ್ರೆ ಮೇಲೆ ದಾಳಿ ನಡೆಸಿದ ವಿವರಗಳಿಗಾಗಿ ರಷ್ಯಾದ ಮಿಲಿಟರಿಯನ್ನು ಸಂಪರ್ಕಿಸುವುದಾಗಿ ಕ್ರೆಮ್ಲಿನ್ ಗುರುವಾರ ಹೇಳಿದೆ. ಖಂಡಿತವಾಗಿಯೂ ನಾವು ಈ ಬಗ್ಗೆ ನಮ್ಮ ಮಿಲಿಟರಿಯನ್ನು ಕೇಳುತ್ತೇವೆ. ಅಲ್ಲಿ ಏನಾಯಿತು ಎಂಬುದರ ಕುರಿತು ಸ್ಪಷ್ಟ ಮಾಹಿತಿ ನಮಗೂ ಇಲ್ಲ. ಮಿಲಿಟರಿ ಮಾಹಿತಿ ನೀಡುತ್ತದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ರಕ್ಷಣೆಗೆ ನೆರವಾಯಿತು ಸಾಮಾಜಿಕ ಜಾಲತಾಣ
ಸುಮಿ: ಉಕ್ರೇನ್ನ ಸುಮಿ ನಗರದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ರಷ್ಯಾದ ಅಧ್ಯಕ್ಷ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೊತೆಗೆ ಫೋನ್ನಲ್ಲಿ ಮಾತನಾಡಿದ್ದು ಫಲಪ್ರದವಾಯಿತು. ಅದರ ಜೊತೆಗೆ, ಭಾರತೀಯ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣಗಳೂ ತಕ್ಕಮಟ್ಟಿಗೆ ನೆರವಾಗಿವೆ. ಭಾರತೀಯ ರಾಜತಾಂತ್ರಿಕ ಸಿಬ್ಬಂದಿಯ ಸಹಾಯ ಸಿಗುವ ಮುನ್ನ ಅವರ ನೆರವಿಗೆ ಬಂದಿದ್ದು ಇದೇ ಜಾಲತಾಣಗಳು ಎನ್ನಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿದ ಆರಂಭದಿಂದಲೂ ಸಾಮಾಜಿಕ ಮಾಧ್ಯಮಗಳ ವೇದಿಕೆಯಾಗಿ ಯುರೋಪಿಯನ್ ದೇಶದಲ್ಲಿ ಸಿಲುಕಿರುವವರು, ಸೈನಿಕರು, ರಾಜಕಾರಣಿಗಳು ಬಳಸಿಕೊಳ್ಳುತ್ತಿದ್ದಾರೆ. ಕಾಲ್ನಡಿಗೆಯಲ್ಲಿ ಉಕ್ರೇನ್ನ ಗಡಿಭಾಗಗಳಿಗೆ ಪ್ರಯಾಣಿಸಲು ನಿರ್ಧರಿಸಿದ ಸುಮಾರು 700 ಭಾರತೀಯ ವಿದ್ಯಾರ್ಥಿಗಳ ಗುಂಪಿನಲ್ಲಿದ್ದ ಜಿಸ್ನಾ ಜಿಜಿ ಅವರು ಸಾಮಾಜಿಕ ಮಾಧ್ಯಮವು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದು ಹೇಳುತ್ತಾರೆ.
ನಿರಂತರ ಶೆಲ್ ದಾಳಿ, ಆಹಾರ ಸಾಮಗ್ರಿಗಳ ಕೊರತೆಯಿಂದಾಗಿ ತತ್ಕ್ಷಣ ನಮ್ಮನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳನ್ನು ವಿನಂತಿಸುತ್ತಲೇ ಇದ್ದೆವು. ಆದರೆ ಯಾವುದೇ ತೆರನಾದ ಪ್ರತಿಕ್ರಿಯೆ ದೊರೆಯದಿದ್ದುದರಿಂದ ನಾವು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಮಾಡಿ ಪೋಸ್ಟ್ ಮಾಡಲು ನಿರ್ಧರಿಸಿದೆವು. ಇದರಿಂದ ಅದು ವೈರಲ್ ಆಯಿತು. ಕೆಲವೇ ಗಂಟೆಗಳಲ್ಲಿ ನಮಗೆ ಸರಕಾರದಿಂದ ಸೂಕ್ತ ಸ್ಪಂದನೆ ಲಭಿಸಿತು ಎಂದರು.
ಕೇರಳದ ಔಸಾಫ್ ಹುಸೇನ್ ಮೆಟ್ರೋ ಬಂಕರ್ನಲ್ಲಿ ಸಿಲುಕಿದ್ದರು. ಅವರಿಗೆ ಯಾವುದೇ ಸಹಾಯ ದೊರೆಯುವ ನಿರೀಕ್ಷೆಗಳು ಇರಲಿಲ್ಲ. ಹೀಗಾಗಿ ಇನ್ಸ್ಟಾಗ್ರಾಮ್ ಬಳಸಿಕೊಂಡು ಬಂಕರ್ನಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಇದರಿಂದ ಬಂಕರ್ನಲ್ಲಿರುವವರಿಗೆ ನೀರು, ಆಹಾರ ವ್ಯವಸ್ಥೆಯಾಯಿತು.
ಯುದ್ಧ ಪ್ರಾರಂಭವಾದಾಗ ನಮಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ. ಹೀಗಾಗಿ ಬಂಕರ್ನಲ್ಲಿರುವ ನಮ್ಮ ಬಗ್ಗೆ ವೀಡಿಯೋ ಮಾಡಲು ಪ್ರಾರಂಭಿಸಿದೆವು. ಇದರಿಂದ ನಮ್ಮ ಸಮಸ್ಯೆಗಳನ್ನು ಇತರರಿಗೆ ತಿಳಿಸಲು, ಪೋಷಕರನ್ನು ನಾವಿಂದು ತಲುಪಲು ಸಾಧ್ಯವಾಯಿತು ಎನ್ನುತ್ತಾರೆ ಹುಸೇನ್.
ಕೀವ್ನಲ್ಲಿದ್ದ 800 ಭಾರತೀಯ ವಿದ್ಯಾರ್ಥಿಗಳ ಗುಂಪನ್ನು ನಿರ್ವಹಿಸುವುದು ಕಷ್ಟವಾಗಿತ್ತು. ಆದರೆ ವಿದ್ಯಾರ್ಥಿ ಸಂಯೋಜಕರಾಗಿದ್ದ ಸೀಮೇಶ್ ಶಶಿಧರನ್ ಅವರು ಟೆಲಿಗ್ರಾಮ್ ಸಹಾಯದಿಂದ ಅಗತ್ಯ ಮಾಹಿತಿ ರವಾನಿಸಿ ಎಲ್ಲ ವಿದ್ಯಾರ್ಥಿಗಳನ್ನು ಟ್ರ್ಯಾಕ್ ಮಾಡಿದರು. ಸಾಮಾಜಿಕ ಮಾಧ್ಯಮವು ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ರಾಯಭಾರ ಕಚೇರಿಗೆ ತಲುಪಿಸಲು ಸಹಾಯ ಮಾಡಿತು ಎನ್ನುತ್ತಾರೆ ಅವರು.
ನಾಗರಿಕರು ಮಾತ್ರವಲ್ಲ ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೇರಿದಂತೆ ಅನೇಕ ಉಕ್ರೇನಿಯನ್ ಅಧಿಕಾರಿಗಳು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಯುದ್ಧದ ಪರಿಸ್ಥಿತಿಯನ್ನು ಜಗತ್ತಿನ ಮೂಲೆಮೂಲೆಗೂ ತಿಳಿಯುವಂತೆ ಮಾಡಿದ್ದಾರೆ.
ರಷ್ಯಾದಲ್ಲಿ ಪಾವತಿ ಆಧಾರಿತ ಸೇವೆಗಳು ಸ್ಥಗಿತ
ಮಾಸ್ಕೋ: ರಾಷ್ಯದ ಮೇಲೆ ಪಾಶ್ಚಾತ್ಯ ದೇಶಗಳು ನಿರ್ಬಂಧ ಹೇರಿರುವುದರಿಂದ ದೇಶದಲ್ಲಿ ಬ್ಯಾಂಕಿಂಗ್ ಸವಾಲುಗಳು ಕಾಣಿಸಿಕೊಂಡಿದ್ದು ಇದರಿಂದ ಆಲ್ಫಾಬೆಟ್, ಯುಟ್ಯೂಬ್, ಗೂಗಲ್ ಪ್ಲೇಸ್ಟೋರ್ ಚಂದಾದಾರಿಕೆ ಸೇರಿದಂತೆ ಎಲ್ಲ ಪಾವತಿ ಆಧಾರಿತ ಸೇವೆಗಳನ್ನು ರಷ್ಯಾದಲ್ಲಿ ಸ್ಥಗಿತಗೊಳಿಸಲಾಗುತ್ತಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಅನಂತರ ಟಿಟÌರ್, ಸ್ನ್ಯಾಪ್ ಕೂಡ ರಷ್ಯಾದಲ್ಲಿ ಸೇವೆ ಸ್ಥಗಿತಗೊಳಿಸಿದ್ದು, ಇದೇ ನೀತಿಯನ್ನು ಗೂಗಲ್, ಯೂಟ್ಯೂಬ್ ಕೂಡ ರಷ್ಯಾದಲ್ಲಿ ಆನ್ಲೈನ್ ಜಾಹೀರಾತು ಮಾರಾಟವನ್ನು ನಿಲ್ಲಿಸಿವೆ. ಇದರಿಂದ ರಷ್ಯಾದಲ್ಲಿ ವೀಕ್ಷಕರಿಗೆ ಯುಟ್ಯೂಬ್ ಪ್ರೀಮಿಯಂ, ಚಾನೆಲ್ ಸದಸ್ಯತ್ವ, ಸೂಪರ್ ಚಾಟ್, ಮರ್ಚಂಡೈಸ್ ಸೇರಿದಂತೆ ಎಲ್ಲ ಪಾವತಿ ಸೇವೆಗಳು ಸಂಪೂರ್ಣ ಸ್ಥಗಿತವಾಗಲಿದೆ ಎಂದು ಯುಟ್ಯೂಬ್ ಹೇಳಿದೆ. ಕಂಪೆನಿಯ ವೆಬ್ಸೈಟ್ ಮಾಹಿತಿ ಪ್ರಕಾರ ಗೂಗಲ್ ಪ್ಲೇನಲ್ಲಿ ಉಚಿತ ಆ್ಯಪ್ಲಿಕೇಶನ್ಗಳು ರಷ್ಯಾದಲ್ಲಿ ಲಭ್ಯವಾಗಲಿವೆ.
ರೂಬಲ್ ಮೌಲ್ಯ ಕುಸಿತ
ಮಾಸ್ಕೋ: ಹಣಕಾಸು ಮಾರುಕಟ್ಟೆಯಲ್ಲಿ ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ಯುರೋಪ್ ರಾಷ್ಟ್ರಗಳು ರಷ್ಯಾದ ಮೇಲೆ ಹೇರಿರುವ ಆರ್ಥಿಕ ನಿರ್ಬಂಧಗಳಿಂದಾಗಿ ರಷ್ಯಾದ ರೂಬಲ್ ಗುರುವಾರ ಡಾಲರ್ನ ಎದುರು 132.5ಕ್ಕೆ ಕುಸಿದಿದೆ.
ಎರಡನೇ ಮಹಾಯುದ್ಧದ ಬಳಿಕ ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯ ಪರಿಣಾಮವಾಗಿ ವಿಧಿಸಲಾದ ನಿರ್ಬಂಧಗಳಿಂದ ರಷ್ಯಾದ ಹಣಕಾಸು ಮಾರುಕಟ್ಟೆ ಪ್ರಕ್ಷುಬ್ಧತೆಗೆ ಒಳಗಾಗಿವೆ. ಷೇರು ಮಾರುಕಟ್ಟೆ ಮುಚ್ಚಲ್ಪಟ್ಟಿದೆ. ಸಾಲ ವಹಿವಾಟುಗಳೂ ನಿಂತುಹೋಗಿವೆ. ಕಚ್ಚಾ ತೈಲ ಮಾರಾಟದಲ್ಲಿ ವಿಶ್ವದ ಎರಡನೇ ಅತೀದೊಡ್ಡ ರಫ್ತುದಾರ ರಷ್ಯಾದಿಂದ ಕಚ್ಚಾ ತೈಲ ಸರಬರಾಜು ಅನಿಶ್ಚಿತತೆಯಿಂದಾಗಿ ತೈಲಗಳ ಬೆಲೆ ಬ್ಯಾರೆಲ್ಗೆ 200 ರೂ. ಗೆ ಏರಿಕೆ ಕಂಡಿದೆ.
ಸಮರಾಂಗಣದಲ್ಲಿ…
– ಉಕ್ರೇನ್ ರಾಜಧಾನಿ ಕೀವ್ ನಗರದ ಹೊರವಲಯ ಕಬಳಿಸುತ್ತಾ ರಾಜಧಾನಿ ಸುತ್ತುವರಿದ ರಷ್ಯಾ ಪಡೆಗಳು.
– ಉಕ್ರೇನ್ನಲ್ಲಿ ಹೋರಾಡಲು ಸೈನಿಕರನ್ನು ಕಳುಹಿಸಿದೆ ಎಂದು ಇದೇ ಮೊದಲ ಬಾರಿಗೆ ಹೇಳಿಕೆ ನೀಡಿದ ರಷ್ಯಾ
– ರಷ್ಯಾದಲ್ಲಿ ತನ್ನ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಅಮೆರಿಕದ ಗೋಲ್ಡ್ಮನ್ ಸ್ಯಾಶ್ ಬ್ಯಾಂಕ್.
– ಪಾಶ್ಚಿಮಾತ್ಯ ರಾಷ್ಟ್ರಗಳು ತಾವು ಮಾಡಿದ ತಪ್ಪುಗಳನ್ನು ಮುಚ್ಚಿಡಲು ರಷ್ಯಾ ಮೇಲೆ ವೃಥಾ ಆರೋಪ ಮಾಡುತ್ತಿವೆ: ರಷ್ಯಾ ಅಧ್ಯಕ್ಷ ಪುಟಿನ್
– ವಿಶ್ವದ ಹಲವಾರು ನಾಯಕರ ಜೊತೆಗೆ ತಾವು ನಿರಂತರ ಮಾತುಕತೆ ನಡೆಸುತ್ತಿದ್ದು, ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ: ಉಕ್ರೇನ್ ಅಧ್ಯಕ್ಷ
ರಷ್ಯಾದಲ್ಲಿ ಕಡ್ಡಾಯ ಮಿಲಿಟರಿ ಸೇವೆ: ಬಯಲಾದ ಸತ್ಯ!
ಮಾಸ್ಕೋ ಮೊದಲ ಬಾರಿಗೆ ಕಡ್ಡಾಯ ಮಿಲಿಟರಿ ಸೇವೆಯಿಂದ ತಮ್ಮ ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ತಾಯಂದಿರ ಆರೋಪದ ಬಳಿಕ ರಷ್ಯಾವು 19- 27 ವರ್ಷದ ಎಲ್ಲ ಪುರುಷರಿಗೂ ಕಡ್ಡಾಯವಾಗಿ 12 ತಿಂಗಳ ಮಿಲಿಟರಿ ಸೇವೆಯನ್ನು ಹೊಂದಿರುವುದು ಜಗಜ್ಜಾಹೀರವಾಗಿದೆ. ರಷ್ಯಾದ ಸೈನ್ಯವು ಉಕ್ರೇನ್ ವಿರುದ್ಧ ವಿಶೇಷ ಕಾರ್ಯಾಚರಣೆಗಾಗಿ ಸೈನಿಕರನ್ನು ನಿಯೋಜಿಸಿದೆ ಎನ್ನುವ ಉಕ್ರೇನ್ನ ಆರೋಪವನ್ನು ನಿರಾಕರಿಸಿದೆ. ಮೂರು ದಿನಗಳ ಹಿಂದೆಯಷ್ಟೇ ಈ ಆರೋಪವನ್ನು ವ್ಲಾದಿಮಿರ್ ಪುತಿನ್ ನಿರಾಕರಿಸಿದ್ದರು. ಎಲ್ಲ ಸೈನಿಕರು ಹೋರಾಟದಲ್ಲಿ ಭಾಗವಹಿಸುವುದಿಲ್ಲ. ಹೆಚ್ಚುವರಿ ಸೇರ್ಪಡೆಯೂ ಇರುವುದಿಲ್ಲ. ವೃತ್ತಿಪರ ಸೈನಿಕರಷ್ಟೇ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದ್ದರು.
ಉಕ್ರೇನಿಯನ್ನ ರಾಷ್ಟ್ರೀಯತಾವಾದಿಗಳು ಖಾರ್ಕಿವ್ನ ವಾಯವ್ಯದಲ್ಲಿರುವ ಝೋಲೋಚಿವ್ನ ಜನನಿಬಿಡ ಪ್ರದೇಶಕ್ಕೆ ಸುಮಾರು 80 ಟನ್ ಅಮೋನಿಯಾವನ್ನು ತಲುಪಿಸಿದರು. ರಾಷ್ಟ್ರೀಯವಾದಿಗಳು ರಾಸಾಯನಿಕ ದಾಳಿಯ ಸಮಯದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಅವರಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಇಂಟರ್ಫ್ಯಾಕ್ಸ್ ವರದಿ ಮಾಡಿದೆ. ಆದರೆ ಈ ವರದಿಯನ್ನು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪಾಸ್ಕಿ ನಿರಾಕರಿಸಿದ್ದಾರೆ.