ಬೀದರ್ ನಲ್ಲಿ ಮತ್ತೆ ‘ಮಹಾ’ ಸ್ಫೋಟ
Team Udayavani, Jun 13, 2020, 7:34 PM IST
ಬೀದರ್: ನೆರೆಯ ಮಹಾರಾಷ್ಟ್ರ ಕಂಟಕದಿಂದಾಗಿ ಬೀದರ್ ಜಿಲ್ಲೆಯಲ್ಲಿ ಕೋವಿಡ್-19 ಮತ್ತೆ ಸ್ಫೋಟಗೊಂಡಿದ್ದು, ಶನಿವಾರ ಒಂದೇ ದಿನ 42 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗುವ ಮೂಲಕ ಆತಂಕ ಹೆಚ್ಚಿಸಿದೆ. ಇದರೊಂದಿಗೆ ಗಡಿ ನಾಡಿನಲ್ಲಿ ಸೋಂಕಿತರ ಸಂಖ್ಯೆ ಈಗ 350 ಕ್ಕೆ ತಲುಪಿದೆ.
ಹೊಸ ಪ್ರಕರಣಗಳಲ್ಲಿ 14 ವರ್ಷದೊಳಗಿನ 10 ಮಕ್ಕಳು ಸೇರಿರುವುದು ಆಘಾತವನ್ನುಂಟು ಮಾಡಿದೆ. ಸೋಂಕಿತ 42 ಜನರಲ್ಲಿ 35 ಜನ ಬಸವಕಲ್ಯಾಣ ತಾಲೂಕಿಗೆ ಸೇರಿರುವುದು ಮತ್ತೆ ತಾಲೂಕು ಹಾಟ್ಸ್ಪಾಟ್ ಆಗಿ ಆರ್ಭಟಿಸಿದ್ದು, ಸುಮಾರು 14 ಗ್ರಾಮಗಳಲ್ಲಿ ವೈರಸ್ ಕೇಸ್ಗಳು ಪತ್ತೆಯಾಗಿವೆ. ಸೋಂಕಿತರಲ್ಲಿ 39 ಜನರಿಗೆ ಮಹಾರಾಷ್ಟ್ರ ಸಂಪರ್ಕ ಇದ್ದರೆ, ಇಬ್ಬರು ತೆಲಂಗಾಣದಿಂದ ವಾಪಸ್ ಬಂದಿದ್ದಾರೆ. ಒಬ್ಬ ರೋಗಿಯ ಸಂಪರ್ಕ ಪತ್ತೆ ಆಗಬೇಕಿದೆ. ಎಲ್ಲರೂ ತವರಿಗೆ ಮರಳಿರುವ ವಲಸೆ ಕಾರ್ಮಿಕರೇ ಆಗಿದ್ದಾರೆ.
ಬಸವಕಲ್ಯಾಣ ತಾಲೂಕಿನ ಭೋಸ್ಗಾ ಒಂದೇ ಗ್ರಾಮದ 13 ಜನರಲ್ಲಿ ವೈರಾಣು ಪತ್ತೆಯಾಗಿದ್ದು ಊರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. ಘಾಟಹಿಪ್ಪರ್ಗಾ, ಬೇಲೂರ ಮತ್ತು ದಾಸೂರ ವಾಡಿ ಗ್ರಾಮದಲ್ಲಿ ತಲಾ 3 ಪ್ರಕರಣಗಳು, ಬಸವಕಲ್ಯಾಣ ಪಟ್ಟಣ, ಸೆರೂರಿ, ಯಕಲೂರ ವಾಡಿಯಲ್ಲಿ ತಲಾ 2, ಹತ್ತರಗಾ, ರಾಜೇಶ್ವರ, ಹತ್ಯಾಳ್ ತಾಂಡಾ, ಎಕಲೂರ ತಾಂಡಾ, ತ್ರಿಪುರಾಂತ, ಖೇರ್ಡಾ(ಕೆ) ಮತ್ತು ಸಸ್ತಾಪೂರ ಗ್ರಾಮದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ. ಅದೇ ರೀತಿ ಹುಮನಾಬಾದ ತಾಲೂಕಿನ ಗಡವಂತಿ ಗ್ರಾಮದಲ್ಲಿ 6 ಮತ್ತು ಬೀದರ ತಾಲೂಕಿನ ಜನವಾಡಾ ಗ್ರಾಮದಲ್ಲಿ 1 ಸೊಂಕಿತ ಪ್ರಕರಣಗಳು ಪತ್ತೆಯಾಗಿವೆ.
ಈವರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 350 ಆದಂತಾಗಿದೆ. ಇದರಲ್ಲಿ 6 ಜನರು ಮೃತಪಟ್ಟಿದ್ದರೆ, 203 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 141 ಸಕ್ರೀಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೇಟಿನ್ ದೃಢಪಡಿಸಿದೆ.