ಬೈರಿಕಟ್ಟೆ-ಕಲ್ಲಜೇರ-ನೆಕ್ಕಿತ್ತಪುಣಿ ರಸ್ತೆ ವಿಸ್ತರಣೆಗೆ ಆಗ್ರಹ
Team Udayavani, Feb 28, 2021, 5:00 AM IST
ವಿಟ್ಲ: ಅಳಿಕೆ ಗ್ರಾಮದ ಬೈರಿಕಟ್ಟೆ-ಕಲ್ಲಜೇರ-ನೆಕ್ಕಿತ್ತಪುಣಿ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿ ಅಪಾಯ ಕಾದಿದೆ. ರಸ್ತೆಯನ್ನು ವಿಸ್ತರಿಸಿ, ರಸ್ತೆ ಬದಿಯಲ್ಲಿರುವ ಅಪಾಯಕಾರಿ ಹೊಂಡಕ್ಕೆ ಮುಕ್ತಿ ಕಾಣಿಸಬೇಕು ಎಂದು ವಾಹನ ಚಾಲಕರು ಆಗ್ರಹಿಸಿದ್ದಾರೆ.
ಅಳಿಕೆ ಗ್ರಾಮದಲ್ಲಿ ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ ಸಾಗುತ್ತದೆ. ಬೈರಿಕಟ್ಟೆ ಅಂಗನವಾಡಿ ಬಳಿ ತಿರುಗಿ ನೆಕ್ಕಿತ್ತಪುಣಿ ದೇವಸ್ಥಾನಕ್ಕೆ ತೆರಳಬಹುದು. ಅಂಗನವಾಡಿ ತಿರುವಿನಿಂದ ಮಡಿಯಾಲ ತನಕ ರಸ್ತೆ ಅಭಿವೃದ್ಧಿಯಾಗಿಲ್ಲ. ಇಕ್ಕಟ್ಟಾಗಿದೆ.
ಎರಡು ಲಘು ವಾಹನಗಳಿಗೆ ಏಕ ಕಾಲದಲ್ಲಿ ಸಂಚರಿಸಲು ಅವಕಾಶ ಇಲ್ಲ. ಘನ ವಾಹನಗಳಾದ ಬಸ್, ಲಾರಿ ಸಂಚರಿಸುವ ವೇಳೆ ಇಲ್ಲಿ ಬೇರೆ ಇನ್ನಾವುದೇ ವಾಹನ ಸಂಚರಿಸಲು ಸಾಧ್ಯವಾಗುವುದಿಲ್ಲ. ರಸ್ತೆ ಬದಿಯಲ್ಲಿ ದೊಡ್ಡ ಗುಂಡಿ ಇದೆ. ವಾಹನಗಳು ಪರಸ್ಪರ ಎದುರು ಬದುರಾಗಿ ಸೈಡ್ ಕೊಡುವಾಗ ವಾಲಿದರೆ ದೊಡ್ಡದಾದ ಗುಂಡಿಗೇ ಬೀಳುವ ಸ್ಥಿತಿಯಿದೆ.
ಹೇಗೆ ಬಾಕಿಯಾಯಿತು ?
ಮಡಿಯಾಲದಿಂದ ನೆಕ್ಕಿತ್ತಪುಣಿವರೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರಸ್ತೆ ಅಭಿವೃದ್ಧಿಯಾಗಿದೆ. ಶಕುಂತಳಾ ಟಿ. ಶೆಟ್ಟಿ ಶಾಸಕರಾಗಿದ್ದಾಗ ಈ 1.80 ಕಿ.ಮೀ. ದೂರದ ರಸ್ತೆಗೆ 1.73 ಕೋಟಿ ರೂ. ಅನುದಾನ ಲಭ್ಯವಾಗಿತ್ತು. ಆಗ ಬೈರಿಕಟ್ಟೆ ಅಂಗನವಾಡಿಯಿಂದ ಮಡಿಯಾಲ ತನಕದ 700 ಮೀಟರ್ ದೂರದ ರಸ್ತೆ ಏಕಮುಖ ರಸ್ತೆಯಾಗಿಯೇ ಉಳಿದುಬಿಟ್ಟಿತು.
ಶಕುಂತಳಾ ಟಿ.ಶೆಟ್ಟಿ ಅವರ ಅವಧಿಯಲ್ಲೇ ನೆಕ್ಕಿತ್ತಪುಣಿಗೆ ಕೆಎಸ್ಆರ್ಟಿಸಿ ಬಸ್ ಆರಂಭವಾಗಿತ್ತು. ಈ ರಸ್ತೆಯಲ್ಲಿ ರಾತ್ರಿ 7.30ಕ್ಕೆ ಆಗಮಿಸುವ ಬಸ್, ಮರುದಿನ ಬೆಳಗ್ಗೆ 7.15ಕ್ಕೆ ತೆರಳುತ್ತದೆ. ಈ ತಿರುವಿನಲ್ಲಿ ಬಸ್ ಸಂಚಾರ ಸುಲಭವಲ್ಲ. 700 ಮೀಟರ್ ದೂರದ ಏಕಮುಖ ರಸ್ತೆಗೆ ಶಾಸಕ ಸಂಜೀವ ಮಠಂದೂರು ಡಾಮರು ಕಾಮಗಾರಿಗೆ 10 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದರು.
ಸೂಕ್ತ ಕ್ರಮಕ್ಕೆ ಆಗ್ರಹ
ನೆಕ್ಕಿತ್ತಪುಣಿ ರಸ್ತೆಯ ಬೈರಿಕಟ್ಟೆ ತಿರುವಿನಿಂದ ಮಡಿಯಾಲ ನಾರಾಯಣ ಭಟ್ ಮನೆ ಬಳಿ ತನಕ ರಸ್ತೆ ಅಭಿವೃದ್ಧಿ ಪಡಿಸುವಂತೆ ಮತ್ತು ರಸ್ತೆ ಬದಿಯ ದೊಡ್ಡ ಗುಂಡಿಗೆ ತಡೆಗೋಡೆ ನಿರ್ಮಿಸಲು ಅಳಿಕೆ ಗ್ರಾಮ ಪಂಚಾಯತ್ ಮತ್ತು ಜಿ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮನವಿ ಮಾಡುತ್ತೇನೆ
ಜಿಲ್ಲಾ ಪಂಚಾಯತ್ನಲ್ಲಿ ಅನುದಾನವಿಲ್ಲ. ಶಾಸಕರಲ್ಲಿ ಮನವಿ ಮಾಡುತ್ತೇನೆ. ಶಾಸಕರು ಅನುದಾನ ಬಿಡುಗಡೆ ಮಾಡಿದಲ್ಲಿ ತತ್ಕ್ಷಣ ಕೂಡಲೇ ಕ್ರಮಕೈಗೊಳ್ಳುತ್ತೇವೆ.
– ಜಗದೀಶ, ಜಿ. ಪಂ., ಎಂಜಿನಿಯರ್
700 ಮೀಟರ್ ರಸ್ತೆ ವಿಸ್ತರಣೆಯಾಗಬೇಕು
ಕೇವಲ 700 ಮೀಟರ್ ದೂರದ ತನಕ ರಸ್ತೆ ಅಭಿವೃದ್ಧಿಯಾಗಬೇಕಾಗಿದೆ. ರಸ್ತೆ ವಿಸ್ತರಣೆ ಮತ್ತು ದೊಡ್ಡ ಹೊಂಡದ ಬಳಿ ತಡೆಗೋಡೆ ನಿರ್ಮಾಣವಾಗಬೇಕಾಗಿದೆ. ಇಷ್ಟು ದೂರದ ರಸ್ತೆಯನ್ನು ಅಭಿವೃದ್ಧಿ ಪಡಿಸಿದಲ್ಲಿ ಬೈರಿಕಟ್ಟೆ-ನೆಕ್ಕಿತ್ತಪುಣಿ ರಸ್ತೆ ಸಂಚಾರ ಸುಗಮವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ