ಬಂಟಕಲ್ಲು: ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ ಶಿರ್ವ ಗ್ರಾ.ಪಂ. ಅಧ್ಯಕ್ಷ
Team Udayavani, Feb 13, 2022, 11:27 AM IST
ಶಿರ್ವ: ಶಿರ್ವ ಗ್ರಾ.ಪಂ.ವ್ಯಾಪ್ತಿಯ ಬಂಟಕಲ್ಲು ಬಿಸಿರೋಡ್ ಲಯನ್ಸ್ ಬಸ್ ನಿಲ್ದಾಣದಲ್ಲಿ ಅನಾರೋಗ್ಯದಿಂದ ಮಲಗಿದ್ದ ರೇಖಾ(28) ಎಂಬ ಮಹಿಳೆಯನ್ನು ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ. ಆರ್. ಪಾಟ್ಕರ್ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಫೆ. 12 ರಂದು ಮುಂಜಾನೆಯಿಂದ ಬಸ್ ನಿಲ್ದಾಣದಲ್ಲಿ ಮಹಿಳೆಯೋರ್ವರು ಅನಾರೋಗ್ಯದಿಂದ ಮಲಗಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಮಹಿಳೆಯನ್ನು ವಿಚಾರಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಅವರ ಸಲಹೆ ಪಡೆದು ಶಿರ್ವ ಗ್ರಾ.ಪಂ. ಬಂಟಕಲ್ಲು ವಾರ್ಡ್ ಸದಸ್ಯೆ ವೈಲೆಟ್ ಕ್ಯಾಸ್ತಲಿನೋ, ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಉಮೇಶ್ ರಾವ್ ಅವರ ಸಹಕಾರದಿಂದ ನಾಗರಿಕ ಸಮಿತಿಯ ಅಂಬುಲೆನ್ಸ್ನಲ್ಲಿ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.
ಮಹಿಳೆ ತಾನು ಮೂಲತಃ ದಾವಣಗೆರೆಯವಳಾಗಿದ್ದು, ಗಂಡ ತನ್ನನ್ನು ಇಲ್ಲಿ ಬಿಟ್ಟು ಮೊಬೈಲ್ ಸಹಿತ ಎಲ್ಲಿಗೋ ಹೋಗಿದ್ದು, ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಮಾಹಿತಿ ನೀಡಿದ್ದಾಳೆ.