ಅಭ್ಯರ್ಥಿ ಸತ್ತ ಬಳಿಕವೂ ಮತದಾನ; ಅನುಕಂಪದಲ್ಲಿ ಮತ ಹಾಕಿ ಗೆಲ್ಲಿಸಿದ ಗ್ರಾಮಸ್ಥರು !!
Team Udayavani, Nov 27, 2021, 8:38 PM IST
ಪಾಟ್ನಾ : ಮೃತ ವ್ಯಕ್ತಿಯೊಬ್ಬ ಪಂಚಾಯತ್ ಚುನಾವಣೆಯಲ್ಲಿ ತನ್ನ ಸಾವಿನಿಂದ ಉಂಟಾದ “ಅನುಕಂಪದ ಅಲೆ”ಯಲ್ಲೇ ಗೆಲುವು ಸಾಧಿಸಿದ ಅಚ್ಚರಿಯ,ದಿಗ್ಭ್ರಮೆಯ ಘಟನೆ ಬಿಹಾರದಲ್ಲಿ ನಡೆದಿದೆ.
ರಾಜ್ಯ ರಾಜಧಾನಿಯಿಂದ ಸುಮಾರು 200 ಕಿಮೀ ದೂರದಲ್ಲಿರುವ ಹಿಂದುಳಿದಿರುವ ಜಿಲ್ಲೆಯಲ್ಲಿ ನವೆಂಬರ್ 24 ರಂದು ನಡೆದ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಧಿಕಾರಿಗಳು ಪ್ರಮಾಣಪತ್ರಗಳನ್ನು ಹಸ್ತಾಂತರಿಸುವಾಗ ನಿಜ ವಿಚಾರ ಬಯಲಾಗಿದೆ.
ವಾರ್ಡ್ ನಂ.2 ಖೈರಾ ಬ್ಲಾಕ್ ವ್ಯಾಪ್ತಿಗೆ ಬರುವ ದೀಪಕರ್ಹರ್ ಗ್ರಾಮದ ಗೆಲುವು ಸಾಧಿಸಿದ ಸೋಹನ್ ಮುರ್ಮು ಎಲ್ಲಿಯೂ ಪತ್ತೆಯಾಗಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿದಾಗ, ಮತದಾನ ನಡೆಯುವ ಹದಿನೈದು ದಿನಗಳಿಗಿಂತ ಮುಂಚೆಯೇ ನವೆಂಬರ್ 6 ರಂದು ಮುರ್ಮು ಸಾವನ್ನಪ್ಪಿದ್ದಾನೆ ಎಂದು ನಮಗೆ ತಿಳಿಯಿತು” ಎಂದು ಖೈರಾ ಬಿಡಿಒ ರಾಘವೇಂದ್ರ ತ್ರಿಪಾಠಿ ದಿಗ್ಭ್ರಮೆಯಿಂದ ಹೇಳಿದರು.
ದೀಪಾಕರ್ಹರ್ ಜಾರ್ಖಂಡ್ನ ರಾಜ್ಯದ ಗಡಿಯಲ್ಲಿರುವ ಇರುವ ಕುಗ್ರಾಮವಾಗಿದ್ದು, ಪ್ರಾಯಶಃ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ ಹಳ್ಳಿಯಾಗಿದೆ.
ಕೇಂದ್ರ ಗೃಹ ಸಚಿವಾಲಯವು ಪ್ರಕಟಿಸಿದ ಪಟ್ಟಿಯ ಪ್ರಕಾರ, 1990 ರ ದಶಕದಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಕ್ಸಲ್ ಚಟುವಟಿಕೆಗೆ ಒಳಗಾದ ನಂತರ ಈ ಗ್ರಾಮವು ತೀವ್ರ ಎಡ ಬಂಡಾಯದಿಂದ ನಲುಗಿತ್ತು.
‘ಇದು ಇಲ್ಲಿನ ಹಳ್ಳಿಯ ನಿವಾಸಿಗಳು ಮುಗ್ಧತೆಯನ್ನು ಉಳಿಸಿಕೊಂಡಿರುವುದನ್ನು ಸೂಚಿಸುತ್ತದೆ, ಭಾವನಾತ್ಮಕತೆಯ ಗಡಿಯಾಗಿದೆ ಹೀಗಾಗಿ ಸಾವನ್ನಪ್ಪಿದ ವ್ಯಕ್ತಿಗೆ ಮತ ಹಾಕಿ ಗೆಲ್ಲಿಸಿದ್ದಾರೆ’ ಎಂದು ತ್ರಿಪಾಠಿ ಹೇಳಿದ್ದಾರೆ.
”ತಮ್ಮ ಪ್ರತಿಸ್ಪರ್ಧಿಯನ್ನು 28 ಮತಗಳಿಂದ ಸೋಲಿಸಿದ ಮುರ್ಮು ಅವರ ಕುಟುಂಬ ಸದಸ್ಯರು, ಅನಾರೋಗ್ಯದಿಂದ ಬಳಲುತ್ತಿದ್ದ ಮೃತರ ಕೊನೆಯ ಆಸೆ ಚುನಾವಣೆಯಲ್ಲಿ ಗೆಲ್ಲುವುದು ಎಂದು ಹೇಳಿದರು. ಹಾಗಾಗಿ ಅವರು ಸುಮ್ಮನಿದ್ದರು. ಗ್ರಾಮದ ಯಾವೊಬ್ಬ ನಿವಾಸಿಯೂ ನಮಗೆ ಸಾವಿನ ಮಾಹಿತಿ ನೀಡಿಲ್ಲ.ಮುರ್ಮು ಕೊನೆಯ ಆಸೆಯನ್ನು ಗೌರವಿಸಲು ಅವರೆಲ್ಲರು ಅವರ ಪರವಾಗಿ ಮತ ಚಲಾಯಿಸಿದ್ದಾರೆಂದು ತೋರುತ್ತದೆ” ಎಂದು ಬಿಡಿಒ ತ್ರಿಪಾಠಿ ಹೇಳಿದರು.
”ನಾವೀಗ ವಿಜೇತರ ಪ್ರಮಾಣಪತ್ರವನ್ನು ಯಾರಿಗೂ ನೀಡಲಾಗುವುದಿಲ್ಲ. ಸಂಬಂಧಪಟ್ಟ ವಾರ್ಡ್ನ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು ಮತ್ತು ಹೊಸದಾಗಿ ಚುನಾವಣೆ ನಡೆಸಬೇಕು ಎಂಬ ಮನವಿಯೊಂದಿಗೆ ನಾವು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಿದ್ದೇವೆ” ಎಂದು ತ್ರಿಪಾಠಿ ವಾಸ್ತವಿಕವಾಗಿ ಹೇಳಿದರು.
ದುಃಖಿತ ಕುಟುಂಬ ಸದಸ್ಯರು ಒಂದೆಡೆ, ಗ್ರಾಮಸ್ಥರ ಮುಗ್ಧತೆ ಇನ್ನೊಂದೆಡೆ ಇದ್ದರೂ, ಅಧಿಕಾರಿಗಳಿಗೆ ಮಾತ್ರ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ ಈ ಘಟನೆ.