ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ : ಸಿದ್ದರಾಮಯ್ಯ ಆರೋಪ
Team Udayavani, Mar 7, 2021, 8:15 PM IST
ಮಧುಗಿರಿ: ಭ್ರಷ್ಟಾಚಾರದ ಹಣದಿಂದ ಶಾಸಕರನ್ನು ಖರೀದಿಸಿ, ಹಿಂಬಾಗಿಲ ಮೂಲಕ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ರಾಜೀವ್ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಕಾಂಗ್ರೆಸ್ನಿಂದ ನಡೆದ ಜನಧ್ವನಿ, ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಂವಿಧಾನದ ಆಶಯದಂತೆ ಕಾಂಗ್ರೆಸ್ ಸಾಮಾಜಿಕ, ಆರ್ಥಿಕ ಸಮಾನತೆಗೆ ಒತ್ತು ನೀಡಿದ್ದು, ಬಿಜೆಪಿ ಅದನ್ನು ನಿರ್ಲಕ್ಷಿಸಿದೆ. ಇವರು ಅಹಿಂದ ವಿರೋಧಿಗಳಾಗಿದ್ದು ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಎಂದಿದ್ದ ಬಿಎಸ್ವೈ ಮಾತು ತಪ್ಪಿದ್ದಾರೆ. ಕೊರೊನಾ ನೆಪದಿಂದ ಅಭಿವೃದ್ಧಿ ಮರೆತಿದ್ದಾರೆ ಎಂದು ದೂರಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಉಳಿದ 6 ಸಚಿವರು ಯಾಕೆ ಕೋರ್ಟಿಗೆ ಹೋಗಿದ್ದು? ಇವರೆಲ್ಲ ಶಾಸಕರಾಗಲು ನಾಲಾಯಕ್. ಇಂಥ ಭ್ರಷ್ಟ ಸರ್ಕಾರವನ್ನು ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ನೋಡಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ :ಆಸ್ಟ್ರೇಲಿಯವನ್ನು 7 ವಿಕೆಟ್ಗಳಿಂದ ಮಣಿಸಿ ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ಸರ್ಕಾರದಿಂದ ಬಡವರು ಸಂಕಷ್ಟದಲ್ಲಿದ್ದಾರೆ. 100 ದಿನಗಳ ರೈತರ ಹೋರಾಟವನ್ನು ನಿರ್ಲಕ್ಷಿಸಲಾಗಿದೆ. ಯುಪಿಎ ನೀಡಿದ ನರೇಗಾದಿಂದ ಗ್ರಾಮೀಣರ ಬದುಕು ಕೊಂಚ ಉಸಿರಾಡುತ್ತಿದೆ.
ಮೋದಿಯಿಂದ ದೇಶದ ಆರ್ಥಿಕ ನೀತಿ ಹಳಿ ತಪ್ಪಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರಬೇಕು ಎಂದರು. ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿ ಹಲವು ಮುಖಂಡರು ಇದ್ದರು.