ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ: ನಾಲ್ಕು ದಿನಗಳ ಆಮರಣಾಂತ ಸತ್ಯಾಗ್ರಹ ಅಂತ್ಯ
Team Udayavani, Oct 24, 2021, 1:20 PM IST
ಬಳ್ಳಾರಿ: ಎಸ್ಟಿ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ನಗರದ ಡಿಸಿ ಕಚೇರಿ ಎದುರು ಎಸ್ಟಿ ಮೀಸಲಾತಿ ಹೋರಾಟ ಸಮಿತಿ ಕಳೆದ ನಾಲ್ಕು ದಿನಗಳಿಂದ ಹಮ್ಮಿಕೊಂಡಿದ್ದ ಆಮರಣಾಂತ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಶನಿವಾರ ಅಂತ್ಯಗೊಳಿಸಲಾಯಿತು.
ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ, ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ, ವಾಲ್ಮೀಕಿ ಪೀಠದ ಮರಡಿ ಜಂಬಯ್ಯ ನಾಯಕ ಅವರು, ಸತ್ಯಾಗ್ರಹಕ್ಕೆ ಕೂತಿದ್ದ ಯುವ ಮುಖಂಡರಾದ ಬಿ.ಆರ್. ಎಲ್.ಶ್ರೀನಿವಾಸ್, ಗಡ್ಡಂ ತಿಮ್ಮಪ್ಪ ಅವರಿಗೆ ಮನವೊಲಿಸಿ ಎಳೆನೀರು ಕುಡಿಸುವ ಮೂಲಕ ಆಮರಣಾಂತ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದರು. ಈ ವೇಳೆ ಮಾತನಾಡಿದ ಶಾಸಕ ಎನ್. ವೈ. ಗೋಪಾಲಕೃಷ್ಣ, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ ಶೇ.7.5ಕ್ಕೆ ಹೆಚ್ಚಿಸಬೇಕೆಂಬ ಸಮುದಾಯದ ಬೇಡಿಕೆ ನ್ಯಾಯಯುತವಾಗಿದೆ. ಇಂಥ ಹೋರಾಟವು ಸಹ ನಡೆಯಲೇಬೇಕಿತ್ತು. ಅದು ಬಳ್ಳಾರಿಯಿಂದಲೇ ನಡೆದಿರುವುದು ಇಲ್ಲಿನ ನಾಯಕರ ಕೆಚ್ಚನ್ನು ತೋರಿಸುತ್ತದೆ. ಮೀಸಲಾತಿ ಹೆಚ್ಚಳಕ್ಕಾಗಿ ಸತ್ಯಾಗ್ರಹ ಕೈಗೊಂಡಿರುವ ಯುವ ಮುಖಂಡರಾದ ಬಿ.ಆರ್. ಎಲ್.ಶ್ರೀನಿವಾಸ್, ಗಡ್ಡಂ ತಿಮ್ಮಪ್ಪ ಅವರು ಹೋರಾಟವನ್ನು ಆರಂಭಿಸಿದ್ದಾರೆ. ಮುಂದೆ ಇನ್ನು ಸಾಕಷ್ಟು ಇದೆ. ಸಮುದಾಯದ ಎಲ್ಲ ಶಾಸಕರನ್ನು ಬೆಂಗಳೂರಿನಲ್ಲಿ ಸಭೆ ಕರೆದು ಒಮ್ಮತದ ನಿರ್ಣಯ ಕೈಗೊಂಡು ಅದಕ್ಕೊಂದು ಮಾರ್ಗಸೂಚಿಗಳನ್ನು ರೂಪಿಸಬೇಕು. ಮುಖ್ಯಮಂತ್ರಿಗಳನ್ನು ಸಹ ಭೇಟಿಯಾಗಿ ಒತ್ತಡ ಹೇರಲಾಗುವುದು ಎಂದವರು ಭರವಸೆ ನೀಡಿದರು.
ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಮಾತನಾಡಿ, ಸತ್ಯಾಗ್ರಹ ನಡೆಸಿರುವ ಶ್ರೀನಿವಾಸ್ ಪಾಲಿಕೆ ಚುನಾವಣೆಗೂ ಮುನ್ನ ನನ್ನ ಬಳಿಗೆ ಬಂದಿದ್ದರು. ನಾನೇ ಟಿಕೆಟ್ ಕೊಡಿಸಿದೆ. ಅವರು ಜಯಗಳಿಸಿ ಬಂದಿದ್ದಾರೆ. ಅಲ್ಲಿವರೆಗೂ ಶ್ರೀನಿವಾಸ್ ಎಂದರೆ ಯಾರಿಗೂ ಗೊತ್ತಿರಲಿಲ್ಲ. ವಾಲ್ಮೀಕಿ ಶ್ರೀಗಳಿಗೆ ನೂರು ಕೆಜಿ ತುಲಾಭಾರ ಮಾಡಿಸಿದ್ದೇನೆ. ಸಮುದಾಯದ ಬೇಡಿಕೆ ನ್ಯಾಯಯುತವಾಗಿದೆ ಎಂದು ತಿಳಿಸಿದರು. ವಾಲ್ಮೀಕಿ ಪೀಠದ ಧರ್ಮದರ್ಶಿ ಮರಡಿ ಜಂಬಯ್ಯ ನಾಯಕ ಮಾತನಾಡಿ, ಅ. 20ರಂದು ನಡೆದ ವಾಲ್ಮೀಕಿ ಜಯಂತಿ ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕಾರ ಹಾಕಿ ಆಮರಣಾಂತ ಸತ್ಯಾಗ್ರಹ ಕೂತಿರುವುದು ಬಳ್ಳಾರಿಯಲ್ಲೇ ಮೊದಲು. ಈ ಮೊದಲು ಸ್ವಾಮೀಜಿಗಳ ನೇತೃತ್ವದಲ್ಲಿ 20 ದಿನಗಳ ಕಾಲ 400 ಕಿಮೀ ಪಾದಯಾತ್ರೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದೇವೆ. 1958ರಿಂದ ಸಮುದಾಯಕ್ಕೆ ಶೇ.3 ರಷ್ಟು ಮೀಸಲಾತಿ ನೀಡಲಾಗಿದ್ದು, ಅದು ಇಂದಿಗೂ ಮುಂದುವರೆದಿದೆ. ಬಾಕಿ ಉಳಿದಿರುವ ಮೀಸಲಾತಿಯನ್ನು ನೀಡುವಂತೆ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಮೀಸಲಾತಿ ಪ್ರಮಾಣ ಶೇ.50 ಮೀರಬಾರದು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದರೂ, ಬೇರೆ ರಾಜ್ಯಗಳಲ್ಲಿ ಹೆಚ್ಚಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕ್ರಮಕೈಗೊಳ್ಳಬೇಕು ಎಂದವರು ಆಗ್ರಹಿಸಿದರು. ಸತ್ಯಾಗ್ರಹದಲ್ಲಿ ವಿ.ಎಸ್.ಶಿವಶಂಕರ್, ಮುಖಂಡರಾದ ಅಸುಂಡಿ ಹೊನ್ನೂರಪ್ಪ, ಜಗನ್ನಾಥ್, ವಿಜಯಕುಮಾರ್, ಎರಗುಡಿ ಮಲ್ಲಯ್ಯ, ರುದ್ರಪ್ಪ, ಹುಲಿಗೇಶಿ, ವಿಜಯಕುಮಾರ್ ಸೇರಿದಂತೆ ಸಮುದಾಯದ ನೂರಾರು ಜನರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ