ದೋಟಿಹಾಳ: ನಾಲ್ಕು ವರ್ಷದ ಮಗುವಿನ ಮೇಲೆ ಹಂದಿ ದಾಳಿ
Team Udayavani, Feb 13, 2022, 5:26 PM IST
ದೋಟಿಹಾಳ: ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ಹಂದಿಗಳು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಗ್ರಾಮದ 3ನೇ ವಾರ್ಡನಲ್ಲಿ ನಡೆದಿದೆ.
ಗ್ರಾಮದ ವನ್ನೂರ್ ಅಲಿ ತಂದಿ ಹುಸೇನಸಾಬ್ ಬಲಕುಂದಿ ಎಂಬ ನಾಲ್ಕು ವರ್ಷದ ಮಗು ಆಟವಾಡುವ ವೇಳೆ ಹಂದಿಗಳು ದಾಳಿ ಮಾಡಿ ಮಗುವಿನ ಕಿವಿ, ಮುಖವನ್ನು ಕಚ್ಚಿದ ಹಂದಿಗಳು ಆತನನ್ನು ಎಳೆದೊಯ್ಯುವ ಪ್ರಯತ್ನವನ್ನು ಮಾಡಿವೆ. ಕೂಡಲೇ ಘಟನೆಯನ್ನು ನೋಡಿದ ಗ್ರಾಮಸ್ಥರು ಹಂದಿಗಳಿಂದ ಮಗುವನ್ನು ಪಾರು ಮಾಡಿದ್ದಾರೆ.
ಈ ಘಟನೆಯಿಂದ ರೊಚ್ಚಿಗೆದ್ದ ನಿವಾಸಿಗಳು ಕೂಡಲೇ ಗ್ರಾಮದಲ್ಲಿ ಇರುವ ಹಂದಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗಾಯಾಳು ಮಗುವನ್ನು ಚಿಕಿತ್ಸೆಗಾಗಿ ಗ್ರಾಮದ ಸರಕಾರಿ ಆಸ್ಪತ್ರೆ ಕೊಂಡ್ಯಯ್ಯುವ ವೇಳೆ ಆಸ್ಪತ್ರೆಯಲ್ಲಿ ಯಾರು ಇಲ್ಲದ ಕಾರಣ, ಮಗುವನ್ನು ಕುಷ್ಟಗಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಗ್ರಾಮದಲ್ಲಿ ಇರುವ ಹಂದಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು. ನಮ್ಮ ಮಗುವಿಗೆ ಆದ ಘಟನೆ ಇನ್ನೊಂದು ಮಗುವಿಗೆ ಹಾಗಬಾರದು ಎಂಬ ಉದ್ದೇಶದಿಂದ ಹಂದಿ ಮಾಲಿಕರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ. ಹಾಗೂ ನಾಳೇ 3ನೇ ವಾರ್ಡ ನಿವಾಸಿಗಳು ಎಲ್ಲರೂ ಕೂಡಿಕೊಂಡು ಗ್ರಾಪಂಗೆ ಹೋಗಿ ಗ್ರಾಮದಲಿ ಇರುವ ಹಂದಿಗಳನ್ನು ಕೂಡಲೇ ಬೇರೆಡೆ ಸ್ಥಳಾಂತರಿಸಬೇಕು ಮನವಿ ನೀಡುತ್ತೇವೆ ಎಂದು ಮಗುವಿನ ಪಾಲಕರು ಹೇಳಿದರು.
ಗ್ರಾಮದಲ್ಲಿ ಹಂದಿಗಳ ಕಾಟ ವಿಪರೀತವಾಗಿದೆ. ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕಸ ಹಾಕುವ ಮಹಿಳೆಯರ ಮೇಲೆ ಹಂದಿಗಳು ದಾಳಿ ಮಾಡುತ್ತಿವೆ. ಇದರ ಬಗ್ಗೆ ಯಾರಾದರೂ ಹೇಳುವವರು, ಕೇಳುವವರು ಇದ್ದಾರೆಯೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಆಟವಾಡುತ್ತಿರುವ ಮಗುವಿನ ಮೇಲೆ ಹಂದಿಗಳು ದಾಳಿ ಮಾಡಿರುವುದು ನೋವಿನ ಸಂಗತಿ, ಕೂಡಲೇ ಗ್ರಾಮದಲ್ಲಿ ಇರುವ ಹಂದಿಗಳನ್ನು ಸ್ಥಳಾಂತರ ಮಾಡಲು ಕ್ರಮಕೈಗೊಳ್ಳುತ್ತೇನೆ ಎಂದು ಪಿಡಿಒ ಮುತ್ತಣ್ಣ ಛಲವಾದಿ ಅವರು ತಿಳಿಸಿದರು.