ತಾಯಿಯಿಂದ ಬೇರ್ಪಟ್ಟ ಮರಿಯಾನೆಗೆ ಮನುಷ್ಯರೇ ಆಸರೆ
Team Udayavani, Apr 15, 2023, 7:51 AM IST
ಅರಂತೋಡು: ಕಾಡಿನಿಂದ ನಾಡಿಗೆ ಬಂದ ಆನೆ ಮರಿಯೊಂದು ಇದೀಗ ತಾಯಿಯಿಂದ ಬೇರ್ಪಟ್ಟು ಅಜ್ಜಾವರ ಗ್ರಾಮದಲ್ಲಿ ಅತ್ತಿತ್ತ ಓಡಾಡುತ್ತಿದೆ. ಆನೆ ಮರಿಯ ಬಗ್ಗೆ ಅರಣ್ಯ ಇಲಾಖೆಯವರು ನಿಗಾ ವಹಿಸಿದ್ದಾರೆ. ತಾಯಿ ಇಲ್ಲದ ತಬ್ಬಲಿ ಮೂರು ತಿಂಗಳ ಮರಿ ಆನೆಗೆ ಈಗ ಮನುಷ್ಯನೇ ಆಸರೆಯಾಗಿದೆ.
ತಾಲೂಕಿನ ಅಜ್ಜಾವರದಲ್ಲಿ ಎರಡು ದಿನಗಳ ಹಿಂದೆ ಆಹಾರ ಅರಸುತ್ತ ಬಂದಿದ್ದ ಕಾಡಾನೆಗಳ ಗುಂಪೊಂದು ಆಯ ತಪ್ಪಿ ಕೆರೆಗೆ ಬಿದ್ದಿದ್ದವು. ಕೆರೆಗೆ ಬಿದ್ದ ನಾಲ್ಕು ಆನೆಗಳ ಪೈಕಿ ಎರಡು ದೊಡ್ಡ ಆನೆ ಹಾಗೂ ಇನ್ನೆರಡು ಮರಿ ಆನೆಗಳಾಗಿದ್ದವು.
ಅದರಲ್ಲಿ ಒಂದು ಮರಿ ಆನೆಗೆ ಒಂದು ವರ್ಷವಾಗಿದ್ದರೆ ಮತ್ತೂಂದು ಆನೆ ಮರಿಗೆ ಕೇವಲ ಮೂರು ತಿಂಗಳಾಗಿತ್ತು. ನಾಲ್ಕು ಆನೆಗಳ ಪೈಕಿ ಮೂರು ಆನೆಗಳನ್ನು ನೀರಿನಿಂದ ಹರಸಾಹಸ ಮಾಡಿ ಊರಿನವರು ಮೇಲಕ್ಕೆತ್ತಿದ್ದರು. ಅಂತಿಮವಾಗಿ ಮೂರು ತಿಂಗಳ ಆನೆ ಮಾತ್ರ ನೀರಿನಲ್ಲಿ ಬಾಕಿ ಆಗಿತ್ತು. ಆ ಆನೆ ಮರಿಯನ್ನು ಹಗ್ಗ ಕಟ್ಟಿ ಕೆರೆಯಿಂದ ಮೇಲಕ್ಕೆ ಎತ್ತಿ ಗುಡ್ಡಕ್ಕೂ ಬಿಟ್ಟರೂ ತಾಯಿ ಆನೆ ಅದನ್ನು ತನ್ನೊಟ್ಟಿಗೆ ಸೇರಿಸಿಕೊಳ್ಳಲಿಲ್ಲ. ಇದರಿಂದ ಆನೆ ಮರಿ ಒಂಟಿಯಾಗಿ ಓಡಾಡುತ್ತಿದೆ.
ಈ ಆನೆ ಮರಿಗೆ ಕೇವಲ ಮೂರು ತಿಂಗಳು ಮಾತ್ರ ಆಗಿದೆ.ಇದಕ್ಕೆ ತಾಯಿಯ ಹಾಲು ಅಗತ್ಯವಾಗಿದೆ. ತಾಯಿ ಹಾಲು ಸಿಗದಿರುವ ಹಿನ್ನೆಲೆಯಲ್ಲಿ ಪೌಷ್ಟಿಕಾಯುಕ್ತ ಚಿಕಿತ್ಸೆ ಮಾಡುವ ಅಗತ್ಯ ಇದೆ. ಚಿಕಿತ್ಸೆ ನೀಡಿ ಬೇರೆಡೆಗೆ ಸ್ಥಳಾಂತರಿಲಾಗುವುದು ಎಂದು ಸುಳ್ಯದ ಆರ್ಎಫ್ಒ ಮಂಜುನಾಥ್ ತಿಳಿಸಿದ್ದಾರೆ.