ಅಕ್ರಮ ಪಿಸ್ತೂಲ್ ವಶ ಪ್ರಕರಣ: ಬಂಧಿತನಿಗೆ ಅಪರಾಧ ಹಿನ್ನೆಲೆ – ರೌಡಿಯ ನಂಟು
Team Udayavani, Apr 5, 2023, 5:10 AM IST
ಮಂಗಳೂರು: ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಕದ್ರಿ ಬಾಡಿಗೆ ಮನೆ ನಿವಾಸಿ ಶಿಶಿರ್ನಿಗೆ ರೌಡಿಯೋರ್ವನ ಸಂಪರ್ಕವಿದ್ದು ಆತನೇ ಪಿಸ್ತೂಲ್ ನೀಡಿರುವುದು ಗೊತ್ತಾಗಿದೆ.
ಶಿಶಿರ್ನಿಗೆ ಮೂಲತಃ ಗೋವಾದ ಆ್ಯಂಡ್ರೂ ರೋಡ್ರಿಗಸ್ ಪಿಸ್ತೂಲ್ ನೀಡಿದ್ದ. ರೋಡ್ರಿಗಸ್ 2014ರಲ್ಲಿ ನಗರದ ಹಂಪನಕಟ್ಟೆಯಲ್ಲಿ ನಡೆದ ಕುಮಾರ್ ಎಂಬವರ ಕೊಲೆ ಪ್ರಕರಣ ಆರೋಪಿಯಾಗಿದ್ದ. ಈತನನ್ನು ಗೋವಾದಲ್ಲಿ ಬಂಧಿಸಲಾಗಿತ್ತು. ಅನಂತರ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ ಬಳಿಕ ಕೆಲವು ಸಮಯದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಅಲ್ಲದೆ ಶಿಶಿರ್ ಕೂಡ ಕ್ರಿಮಿನಲ್ ಹಿನ್ನೆಲೆಯವನಾಗಿದ್ದು ಆತನ ವಿರುದ್ಧ ಬಂದರು, ಕಾವೂರು ಮತ್ತು ಪಾಂಡೇಶ್ವರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಮೂಲತಃ ಉಡುಪಿ ನಗರದ ಕೋರ್ಟ್ ರಸ್ತೆ ನಿವಾಸಿಯಾದ ಶಿಶಿರ್ ತನ್ನ ಅಪರಾಧ ಚಟುವಟಿಕೆ ಕಾರಣದಿಂದಾಗಿ ಮನೆಯಿಂದ ದೂರವಾಗಿದ್ದ. ನಂತರ ಮಂಗಳೂರಿಗೆ ಬಂದು ಇಲ್ಲಿ ಒಬ್ಬಂಟಿಯಾಗಿಯೇ ನೆಲೆಸಿದ್ದ ಎಂದು ತಿಳಿದುಬಂದಿದೆ.
ಜೈಲಿನಲ್ಲಿ ಭೇಟಿ?
ಶಿಶಿರ್ ಮತ್ತು ಆ್ಯಂಡ್ರೂ ರೋಡ್ರಿಗಸ್ ಜೈಲಿನಲ್ಲಿ ಭೇಟಿಯಾಗಿ ಅನಂತರ ನಿಕಟವರ್ತಿಗಳಾಗಿದ್ದರು ಎನ್ನಲಾಗಿದೆ. ಪೊಲೀಸರು ಈಗ ರೋಡ್ರಿಗಸ್ನ ಬಂಧನಕ್ಕೆ ಬಲೆ ಬೀಸಿದ್ದಾರೆ.