ಪ್ರತ್ಯೇಕತಾವಾದಿಗಳು, ಉಗ್ರರ ಜತೆ ನಂಟು; ಖಾಸಗಿ ಕಾನೂನು ಕಾಲೇಜಿನ ಪ್ರಾಂಶುಪಾಲ ವಜಾ
ಆದೇಶದ ಮೇರೆಗೆ ತಕ್ಷಣವೇ ಜಾರಿಗೆ ಬರುವಂತೆ ಹುಸೈನ್ ನನ್ನು ಪ್ರಾಂಶುಪಾಲ ಹುದ್ದೆಯಿಂದ ವಜಾ
Team Udayavani, Apr 11, 2022, 4:00 PM IST
ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರ ಸ್ವತಂತ್ರವಾಗುವುದು ಮತ್ತು ಭಯೋತ್ಪಾದಕರ ಜತೆ ನಂಟು ಹೊಂದಿರುವ ಆರೋಪದಡಿ ಕಾಶ್ಮೀರದ ಖಾಸಗಿ ಕಾನೂನು ಕಾಲೇಜಿನ ಪ್ರಾಂಶುಪಾಲನೊಬ್ಬನನ್ನು ಆಡಳಿತ ಮಂಡಳಿ ವಜಾಗೊಳಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ;ಸಂಘಪರಿವಾರದ ಹೆಸರು ಹೇಳದಿದ್ದರೆ ಸಿದ್ದರಾಮಯ್ಯ-ಡಿಕೆಶಿ ಗೆ ತಿಂದಿದ್ದು ಜೀರ್ಣವಾಗದು: ಶೆಟ್ಟರ್
ಕೆಲವು ವರ್ಷಗಳ ಹಿಂದೆ ಸೆಂಟ್ರಲ್ ಯೂನಿರ್ವಸಿಟಿ ಆಫ್ ಕಾಶ್ಮೀರ(ಸಿಯುಕೆ)ದ ಕಾನೂನು ವಿಭಾಗದ ಮುಖ್ಯಸ್ಥರಾಗಿದ್ದ ಮೊಹಮ್ಮದ್ ಹುಸೈನ್ ನಿವೃತ್ತಿಯಾದ ನಂತರ ತೀವ್ರಗಾಮಿ ಪ್ರತ್ಯೇಕತಾವಾದಿ ಸಂಘಟನೆಗಳ ಜತೆ ಗುರುತಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಸಿಯುಕೆ ಸೇರ್ಪಡೆಗೊಳ್ಳುವ ಮುನ್ನ ಹುಸೈನ್ ಕಾಶ್ಮೀರ್ ವಿವಿಯಲ್ಲಿ ಉಪನ್ಯಾಸಕ ವೃತ್ತಿ ಮಾಡಿದ್ದು, ನಂತರ ಮಲೇಷ್ಯಾದ ಅಂತಾಷ್ಟ್ರೀಯ ಇಸ್ಲಾಮ್ ಯೂನಿರ್ವಸಿಟಿಯಲ್ಲಿ 5 ವರ್ಷಗಳ ಕಾಲ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿರುವುದಾಗಿ ವರದಿ ವಿವರಿಸಿದೆ.
ಸೆಂಟ್ರಲ್ ಯೂನಿರ್ವಸಿಟಿ ಆಫ್ ಕಾಶ್ಮೀರದಿಂದ ನಿವೃತ್ತಿಯಾದ ನಂತರ ಶ್ರೀನಗರದಲ್ಲಿರುವ ಕಾಶ್ಮೀರದ ಖಾಸಗಿ ಕಾನೂನು ಕಾಲೇಜಿನ ಪ್ರಾಂಶುಪಾಲರನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು, ಸರ್ಕಾರದ ಆದೇಶದ ಮೇರೆಗೆ ತಕ್ಷಣವೇ ಜಾರಿಗೆ ಬರುವಂತೆ ಹುಸೈನ್ ನನ್ನು ಪ್ರಾಂಶುಪಾಲ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಮೂಲಗಳ ಪ್ರಕಾರ, ಪ್ರೊ.ಹುಸೈನ್ ವಿರುದ್ಧ ಪಿಂಚಣಿ ತಡೆಹಿಡಿಯಲು ಸಂಬಂಧಿತ ಕಾನೂನನ್ನು ಕೂಡಾ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತ್ಯೇಕತಾವಾದ ಮತ್ತು ಭಯೋತ್ಪಾದಕರ ಹಿಂಸಾಚಾರ ನೈತಿಕವಾದದ್ದು ಮತ್ತು ಅಗತ್ಯ ಎಂಬ ಸಿದ್ದಾಂತವನ್ನು ಪ್ರತಿಪಾದಿಸಿರುವ ಹುಸೈನ್ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳಿದ್ದರೆ ಸರ್ಕಾರ ಪಿಂಚಣಿಯನ್ನು ತಡೆಹಿಡಿಯಬಹುದು ಎಂದು ವರದಿ ವಿವರಿಸಿದೆ.
2016ರಲ್ಲಿ ನವದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಆಜಾದಿ- ದ ವೇನ್ಲಿ ವೇ” ಸಮಾವೇಶದಲ್ಲಿ ಕಟ್ಟರ್ ಪ್ರತ್ಯೇಕತಾವಾದಿ ದಿ.ಸೈಯದ್ ಅಲಿ ಶಾ ಗಿಲಾನಿ, ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಆರುಂಧತಿ ರಾಯ್, ಸೇರಿದಂತೆ ಹಲವು ಮುಖಂಡರ ಜತೆ ಪ್ರೊ.ಹುಸೈನ್ ಕೂಡಾ ವೇದಿಕೆ ಹಂಚಿಕೊಂಡಿದ್ದು, ಈ ವೇಳ ದೇಶ ವಿರೋಧಿ ಭಾಷಣ ಮಾಡಿರುವ ಆರೋಪದ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.