ಆಝಾನ್ ವಿಚಾರದಲ್ಲಿ ರಾಜ್ ಠಾಕ್ರೆ ಹೇಳಿಕೆ: ಎಂಎನ್ಎಸ್ ತೊರೆದ ಮುಸ್ಲಿಂ ಮುಖಂಡರು
Team Udayavani, Apr 15, 2022, 1:34 PM IST
ಮುಂಬಯಿ : ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೇಲೆ ನಿಷೇಧ ಹೇರಲು ಒತ್ತಾಯಿಸುತ್ತಿರುವಂತೆಯೇ, ಸುಮಾರು ಮೂರು ಡಜನ್ ಗೂ ಹೆಚ್ಚು ಭ್ರಮನಿರಸನಗೊಂಡ ಮುಸ್ಲಿಂ ಮುಖಂಡರು ಶುಕ್ರವಾರ ಪಕ್ಷವನ್ನು ತೊರೆದಿದ್ದಾರೆ.
ರಾಜ್ ಠಾಕ್ರೆ ಅವರ ಹಿಂದುತ್ವ ಪರವಾದ ನಿಲುವಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಾದ್ಯಂತದ 35 ಸ್ಥಳೀಯ ಎಂಎನ್ಎಸ್ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷಕ್ಕೆ ರಾಜೀನಾಮೆ ನೀಡಿದ ಎಲ್ಲಾ ನಾಯಕರು ಮುಂಬಯಿ, ಮರಾಠವಾಡ ಮತ್ತು ಪಶ್ಚಿಮ ಮಹಾರಾಷ್ಟ್ರವನ್ನು ಪ್ರತಿನಿಧಿಸುವ ಮುಸ್ಲಿಮರಾಗಿದ್ದಾರೆ.
ಮಸೀದಿಗಳಿಂದ ಹೆಚ್ಚಿನ ಡೆಸಿಬಲ್ ಧ್ವನಿವರ್ಧಕಗಳನ್ನು ತೆಗೆದುಹಾಕುವ ತನ್ನ ನಿಲುವಿನಲ್ಲಿ ರಾಜ್ ಠಾಕ್ರೆ ದೃಢವಾಗಿ ಉಳಿದ ನಂತರ ಪಕ್ಷದ ರಾಜ್ಯ ಕಾರ್ಯದರ್ಶಿ ಇರ್ಫಾನ್ ಶೇಖ್ ಪಕ್ಷವನ್ನು ತೊರೆದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಇರ್ಫಾನ್ ಶೇಖ್ ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ, ಶೇಖ್ ಅವರು “ಭಾರವಾದ ಹೃದಯದಿಂದ” ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ತಾನು ದುಡಿದ ಮತ್ತು ಸರ್ವಸ್ವವೆಂದು ಪರಿಗಣಿಸಿದ ಪಕ್ಷವು ತಾನು ಬಂದ ಸಮುದಾಯದ ವಿರುದ್ಧ ದ್ವೇಷಪೂರಿತ ನಿಲುವು ತಳೆದರೆ ‘ಜೈ ಮಹಾರಾಷ್ಟ್ರ’ (ಗುಡ್ ಬೈ) ಹೇಳುವ ಸಮಯ ಬಂದಿದೆ ಎಂದು ಸೇರಿಸಿದ್ದಾರೆ.