ಐಪಿಎಲ್ಗೂ ಮುನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ?
Team Udayavani, Mar 2, 2021, 2:11 AM IST
ಹೊಸದಿಲ್ಲಿ: ಈ ಬಾರಿಯ ಐಪಿಎಲ್ ದಿನಾಂಕ ಇನ್ನೂ ಪ್ರಕಟಗೊಂಡಿಲ್ಲ. ಆದರೆ ಈ “ಕ್ಯಾಶ್ ರಿಚ್ ಲೀಗ್’ಗೂ ಮುನ್ನ ಟೀಮ್ ಇಂಡಿಯಾದ ಬಹಳಷ್ಟು ಕ್ರಿಕೆಟಿಗರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಖ್ಯವಾಗಿ, ಯುಎಇಯಲ್ಲಿ ನಡೆದ ಕಳೆದ ಐಪಿಎಲ್ನಿಂದಲೂ ಜೈವಿಕ ಸುರಕ್ಷಾ ವಲಯದಲ್ಲಿಯೇ ಉಳಿದಿರುವ ಪ್ರಮುಖ ಆಟಗಾರರು ಈ ವ್ಯಾಪ್ತಿಗೆ ಒಳಪಡಲಿದ್ದಾರೆ. ಇವರನ್ನು ಇಂಗ್ಲೆಂಡ್ ಎದುರಿನ ಸೀಮಿತ ಓವರ್ಗಳ ಸರಣಿಯಲ್ಲಿ ಆಡಿಸದಿರುವುದು ಮಂಡಳಿಯ ಯೋಜನೆಯಾಗಿದೆ.
ಈಗಾಗಲೇ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ಎದುರಿನ ಅಂತಿಮ ಟೆಸ್ಟ್ ನಿಂದ ಹೊರಗುಳಿಯಲು ನಿರ್ಧರಿಸಿ, ಜೈವಿಕ ಸುರಕ್ಷಾ ವಲಯದಿಂದ ಹೊರಹೋಗಿದ್ದಾರೆ.
ಜಸ್ಪ್ರೀತ್ ಬುಮ್ರಾ ಮುಂಬರುವ ಟಿ20 ಸರಣಿಗೂ ಆಯ್ಕೆಯಾಗಿಲ್ಲ. ಹಾಗೆಯೇ ಮೊಹಮ್ಮದ್ ಸಿರಾಜ್ ಅವರನ್ನೂ ಚುಟುಕು ಮಾದರಿಯ ಕ್ರಿಕೆಟ್ ಸರಣಿಗೆ ಆರಿಸಿಲ್ಲ.
ರೋಹಿತ್ಗೆ ರೆಸ್ಟ್?
ಪ್ರವಾಸಿ ಇಂಗ್ಲೆಂಡ್ ವಿರುದ್ಧ ಕೊನೆಯಲ್ಲಿ ನಡೆಯುವ 3 ಪಂದ್ಯಗಳ ಏಕದಿನ ಸರಣಿ ವೇಳೆ ಆರಂಭಕಾರ ರೋಹಿತ್ ಶರ್ಮ ಅವರಿಗೆ ಬಹುತೇಕ ವಿಶ್ರಾಂತಿ ಲಭಿಸಲಿದೆ. ಹಾಗೆಯೇ ವಾಷಿಂಗ್ಟನ್ ಸುಂದರ್, ರಿಷಭ್ ಪಂತ್ ಅವರಿಗೂ ರೆಸ್ಟ್ ನೀಡುವ ಯೋಜನೆ ಇದೆ. ಇವರಲ್ಲದೆ ಇನ್ನೂ 4 ಮಂದಿ ಕ್ರಿಕೆಟಿಗರಿಗೆ ವಿಶ್ರಾಂತಿ ಕೊಡುವುದು ಬಿಸಿಸಿಐ ಯೋಜನೆ ಆಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.