“ಪುಸ್ತಕದ ಜ್ಞಾನಕ್ಕಷ್ಟೇ ಸೀಮಿತವಿದ್ದ ವ್ಯವಸ್ಥೆಯನ್ನು NEP ಬದಲಿಸಲಿದೆ”: ಪ್ರಧಾನಿ ಮೋದಿ
Team Udayavani, May 13, 2023, 8:06 AM IST
ಗಾಂಧಿನಗರ: ದೇಶದಲ್ಲಿ ಹಿಂದೆಲ್ಲ ಮಕ್ಕಳು ಬರೀ ಪುಸ್ತಕದ ಜ್ಞಾನವನ್ನಷ್ಟೇ ಹೊಂದಿರುತ್ತಿದ್ದರು ಆದರೆ, ರಾಷ್ಟ್ರೀಯ ನೂತನ ಶಿಕ್ಷಣ ನೀತಿ (ಎನ್ಇಪಿ) ಈ ಪದ್ಧತಿಯನ್ನೇ ಬದಲಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟದ ವತಿಯಿಂದ ಗುಜರಾತ್ನಲ್ಲಿ ಆಯೋಜಿಸಲಾಗಿದ್ದ 29ನೇ ದ್ವೈವಾರ್ಷಿಕ ಶೈಕ್ಷಣಿಕ ಸಮ್ಮೇಳನದಲ್ಲಿ ಶಿಕ್ಷಕರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
ಈ ವೇಳೆ ಗೂಗಲ್ ಕೇವಲ ಮಾಹಿತಿ ಮತ್ತು ದತ್ತಾಂಶಗಳನ್ನಷ್ಟೇ ಒದಗಿಸಬಲ್ಲದು. ಆದರೆ, ವಿದ್ಯಾರ್ಥಿ ಜೀವನದ ನಿಜವಾದ ಮಾರ್ಗದರ್ಶಕರೆಂದರೆ ಅದು ಶಿಕ್ಷಕರು ಮಾತ್ರ. ಹಿಂದೆಲ್ಲ ಮಕ್ಕಳಿಗೆ ಬರೀ ಪುಸ್ತಕದಲ್ಲಿರುವುದನ್ನು ಬೋಧಿಸುತ್ತಿದ್ದೆವು. ಆದರೀಗ ಎನ್ಇಪಿ ಈ ಪದ್ದತಿಯನ್ನು ಬದಲಿಸುವ ಅವಕಾಶ ನೀಡುತ್ತಿದೆ. ಮಕ್ಕಳಿಗೆ ಪ್ರಾಯೋಗಿಕ ಶಿಕ್ಷಣವನ್ನೂ ಎನ್ಇಪಿ ನೀಡಬಲ್ಲದು ಆದರೆ, ಅದನ್ನು ತಲುಪಿಸುವ ಹೊಣೆ ಶಿಕ್ಷಕರ ಬೆನ್ನ ಮೇಲಿದೆ ಎಂದಿದ್ದಾರೆ.
ಇದೇ ವೇಳೆ ಮಹಾತ್ಮ ಮಂದಿರ ಉದ್ಘಾಟನೆಯನ್ನೂ ಮೋದಿ ನೆರವೇರಿಸಿದ್ದು, ನಮ್ಮ ಸರ್ಕಾರದ ಯಾವುದೇ ಯೋಜನೆಗಳು ಕೂಡ ಫಲಾನುಭವಿಗಳ ಧರ್ಮ-ಜಾತಿ ನೋಡುವುದಿಲ್ಲ. ಸಮಾಜದ ಸರ್ವಸ್ತರವನ್ನು ಯೋಜನೆಗಳು ತಲುಪುತ್ತಿವೆ. ತಾರತಮ್ಯವಿಲ್ಲದ ವ್ಯವಸ್ಥೆಯೇ ನಿಜವಾದ ಜಾತ್ಯತೀತವಾದವೆಂದು ಮೋದಿ ಪ್ರತಿಪಾದಿಸಿದ್ದಾರೆ.