ಚೀನಾ ಗಡಿ ತಂಟೆ ಪ್ರಧಾನಿ ಮೌನ ದೇಶದ್ರೋಹ: ಸಿದ್ದರಾಮಯ್ಯ
Team Udayavani, Jun 17, 2020, 9:16 PM IST
ಬೆಂಗಳೂರು: ಚೀನಾ ಗಡಿ ಭಾಗದಲ್ಲಿ ತಂಟೆ ತೆಗೆದು ಏಳು ವಾರಗಳಾದರೂ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಜನ ದ್ರೋಹ ಅಷ್ಟೇ ಅಲ್ಲ ದೇಶದ್ರೋಹವಾಗುತ್ತದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಚೀನಾ ಗಡಿ ಭಾಗದಲ್ಲಿ ನಡೆಯುತ್ತಿರುವ ಗಲಾಟೆಯ ಬಗ್ಗೆ ಹಾಗೂ ಗಡಿ ಭಾಗದಲ್ಲಿ ನಡೆಯುವತ್ತಿರುವ ಬೆಳವಣಿಗೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಇಲ್ಲಿಯವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆಳುವವರ ಮೌನ ಜನದ್ರೋಹವಲ್ಲದೇ ದೇಶದ್ರೋಹವೂ ಹೌದು. ಶತ್ರು ದೇಶದ ವಿರುದ್ಧ ಹೋರಾಡುವುದು ಸರ್ಕಾರ ಅಲ್ಲ. ದೇಶ. ಸರ್ಕಾರ ದೇಶಕ್ಕೆ ಹಾಗೂ ದೇಶದ ಜನತೆಗೆ ಉತ್ತರದಾಯಿ. ದೇಶದ ಪ್ರತಿಯೊಬ್ಬ ಪ್ರಜೆಯೂ ಕೇಂದ್ರ ಸರ್ಕಾರವನ್ನು ನಂಬಿದ್ದಾರೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಂಬಿಕೆ ಉಳಿಸಿಕೊಳ್ಳುವ ಹೊಣೆ ಕೇಂದ್ರ ಸರ್ಕಾರದ್ದು.
ದೇಶಕ್ಕಾಗಿ ಬೆವರು, ರಕ್ತ ಹರಿಸಿದ ನಾಯಕರ ಪಕ್ಷವಾದ ಕಾಂಗ್ರೆಸ್ ಭಾರತದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವಕ್ಕೆ ಸದಾ ಬದ್ಧವಾಗಿದೆ. ವೀರ ಸೈನಿಕರ ಬಲಿದಾನ ವ್ಯರ್ಥವಾಗಬಾರದು. ಹುತಾತ್ಮರ ಕುಟುಂಬಕ್ಕೆ ಗೌರವದ ಶ್ರದ್ದಾಂಜಲಿ ಸಲ್ಲಿಸೋಣ ಚೀನಾದ ದೃಷ್ಕೃತ್ಯವನ್ನು ಒಕ್ಕೋರಲಿನಿಂದ ಖಂಡಿಸೋಣ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.