ಪಿಎಸ್ಐ ಅಕ್ರಮ: ಇಬ್ಬರು ಅಭ್ಯರ್ಥಿಗಳು-ಪೊಲೀಸ್ ಸಿಬ್ಬಂದಿ ಬಂಧನ
Team Udayavani, Jun 7, 2022, 10:32 AM IST
ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಇಬ್ಬರು ಅಭ್ಯರ್ಥಿಗಳು ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಪಿಎಸ್ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನಾಲ್ಕನೇ ರ್ಯಾಂಕ್ ಪಡೆದಿರುವ ವಿ.ದರ್ಶನ್ ಗೌಡ, 13ನೇ ರ್ಯಾಂಕ್ ಪಡೆದಿರುವ ದಿಲೀಪ್ ಕುಮಾರ್ ಮತ್ತು ಕಲಾಸಿಪಾಳ್ಯ ಠಾಣೆಯ ಹೆಡ್ಕಾನ್ಸ್ಟೇಬಲ್ ಹರೀಶ್ ಹಾಗೂ ನೆಲಮಂಗಲ ಠಾಣೆ ಕಾನ್ಸ್ಟೇಬಲ್ ಮೋಹನ್ ಕುಮಾರ್ನನ್ನು ಬಂಧಿಸಲಾಗಿದೆ.
ಆರೋಪಿಗಳ ಪೈಕಿ ದರ್ಶನ್ಗೌಡನ ವಿರುದ್ಧ ಯಲಹಂಕನ್ಯೂಟನ್ ಠಾಣೆ, ದಿಲೀಪ್ ಕುಮಾರ್ ಮತ್ತು ಹೆಡ್ಕಾನ್ಸ್ಟೇಬಲ್ ಹರೀಶ್ ವಿರುದ್ಧ ರಾಮಮೂರ್ತಿನಗರ ಠಾಣೆ ಮತ್ತು ಕಾನ್ಸ್ಟೇಬಲ್ ಮೋಹನ್ ಕುಮಾರ್ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಸಿದ್ದು, ಪ್ರಕರಣದ ತನಿಖೆ ಇನ್ನಷ್ಟು ಚುರುಕುಗೊಂಡಿದೆ.
ಪ್ರಕರಣ ಬೆಳಕಿಗೆ ಬಂದಾಗ 545 ಮಂದಿ ಅಭ್ಯ ರ್ಥಿಗಳ ಓಎಂಆರ್ ಉತ್ತರ ಪತ್ರಿಕೆ ಮತ್ತು ಕಾರ್ಬನ್ ಓಎಂಆರ್ ಪತ್ರಿಗಳ ಪರಿಶೀಲಿಸಿದಾಗ 172 ಮಂದಿಯ ಓಎಂಆರ್ ಶೀಟ್ ಮತ್ತು ಹಾಲ್ ಟಿಕೇಟ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಈ ಪೈಕಿ ನಾಲ್ವರು ಹೊರತು ಪಡಿಸಿ ಇತರೆ ಅಭ್ಯರ್ಥಿಗಳ ಓಎಂಆರ್ ಶೀಟ್ನಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ನಾಲ್ವರು ಆರೋಪಿಗಳ ಓಎಂಆರ್ ಉತ್ತರ ಪ್ರತಿಯಲ್ಲಿ ಲೋಪಗಳು ಕಂಡು ಬಂದಿತ್ತು. ಇವರ ವಿರುದ್ಧ ಈ ಹಿಂದೆಯೂ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೂ ನಾಲ್ವರು ಅಭ್ಯರ್ಥಿಗಳು ಪರೀಕ್ಷೆ ಬರೆದ ಸ್ಥಳದ ಆಧಾರದ ಮೇಲೆ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ:ಚಿತ್ತಾಪುರ : ಊಟ ಬೇಡಿದ ಮಗಳಿಗೆ ಬರೆಯಿಟ್ಟ ಮಲತಾಯಿ!
ಆರೋಪಿಗಳ ಪೈಕಿ ದರ್ಶನ್ಗೌಡ, ಹರೀಶ್, ಮೋಹನ್ ಕುಮಾರ್ ಆರ್.ಡಿ.ಪಾಟೀಲ್ ಮೂಲಕ 80 ಲಕ್ಷ ರೂ. ನೀಡಿ ಅಕ್ರಮ ಎಸಗಿದ್ದರೆ, ದಿಲೀಪ್ ಕುಮಾರ್ ಮಂಜುನಾಥ್ ಮೇಳಕುಂದಿ ಮೂಲಕ 60 ಲಕ್ಷ ರೂ. ನೀಡಿ ಅಕ್ರಮ ಎಎಸಗಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಇನ್ನು ಆರೋಪಿಗಳ ಓಎಂಆರ್ ಶೀಟ್ನಲ್ಲಿ ಕೆಲವು ಉತ್ತರಗಳನ್ನು ಮಾತ್ರ ತುಂಬಿ, ಉಳಿದ ಉತ್ತರಗಳನ್ನು ಹಾಗೆಯೇ ಖಾಲಿ ಬಿಟ್ಟಿದ್ದರು. ಅಲ್ಲದೆ, ಓಎಂಆರ್ ಶೀಟ್ನಲ್ಲಿ ಪ್ರಯತ್ನಿಸಿದ ಪ್ರಶ್ನೆಗಳು ಎಂಬ ಕಾಲಂನಲ್ಲಿ ಸಂಖ್ಯೆಯನ್ನು ತಿದ್ದುಪಡಿ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಲಕ್ಷಾಂತರ ರೂ. ಹೇಗೆ ಸಂಪಾದನೆ?
ಆರೋಪಿಗಳ ಪೈಕಿ ಹೆಡ್ಕಾನ್ಸ್ಟೇಬಲ್ ಹರೀಶ್ ಮತ್ತು ಕಾನ್ಸ್ಟೇಬಲ್ ಮೋಹನ್ ಕುಮಾರ್ ಅಕ್ರಮ ಎಸಗಲು ಮಧ್ಯವರ್ತಿಗಳಿಗೆ ಲಕ್ಷಾಂತರ ರೂ. ನೀಡಲು ಹಣ ಎಲ್ಲಿಂದ ತಂದಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹೀಗಾಗಿ ಆರೋಪಿಗಳ ಬ್ಯಾಂಕ್ ವ್ಯವಹಾರ ಹಾಗೂ ಅವರು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಗಳಲ್ಲಿನ ಕರ್ತವ್ಯ ಪಾಲನೆ ಬಗ್ಗೆ ಮಾಹಿತಿ ಸಂಗ್ರಹಿಸಲು ಸಿಐಡಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.