IPL 2020: ಗುರುವಾರ ಎದುರಾಗಲಿವೆ ಕರ್ನಾಟಕದ ಆರ್ಸಿಬಿ ವರ್ಸಸ್ ಕನ್ನಡಿಗರ ಪಂಜಾಬ್!
ಕೊಹ್ಲಿ, ರಾಹುಲ್ ಬಳಗಕ್ಕೆ 2ನೇ ಪಂದ್ಯ
Team Udayavani, Sep 23, 2020, 5:38 PM IST
ದುಬಾೖ: ಇಲ್ಲಿ ಕೊಹ್ಲಿ, ಅಲ್ಲಿ ರಾಹುಲ್; ಇಲ್ಲಿ ಪಡಿಕ್ಕಲ್, ಅಲ್ಲಿ ಅಗರ್ವಾಲ್; ಇಲ್ಲಿ ಎಬಿಡಿ, ಅಲ್ಲಿ ಗೇಲ್… ಇಂಥ ಬದ್ಧ ಎದುರಾಳಿಗಳನ್ನು ಹೊಂದಿರುವ ತಂಡಗಳೆರಡು ಗುರುವಾರ ದುಬಾೖಯಲ್ಲಿ ಪರಸ್ಪರ ಎದುರಾಗಲಿವೆ.
ಕರ್ನಾಟಕದ ಫ್ರಾಂಚೈಸಿ ರಾಯಲ್ ಚಾಲೆಂಜರ್ ಬೆಂಗಳೂರು ಮತ್ತು ಕನ್ನಡಿಗರಿಂದಲೇ ತುಂಬಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವಿನ ಹೈ ವೋಲ್ಟೇಜ್ ಪಂದ್ಯವಿದು. ಯಾವ ತಂಡಕ್ಕೆ ಬೆಂಬಲ ಸೂಚಿಸಲಿ ಎಂದು ರಾಜ್ಯದ ಅಭಿಮಾನಿಗಳು ಸಹಜವಾಗಿಯೇ ಗೊಂದಲದಲ್ಲಿದ್ದಾರೆ!
ಇದು ಎರಡೂ ತಂಡಗಳಿಗೆ ಎರಡನೇ ಪಂದ್ಯ. ಆರ್ಸಿಬಿ ತನ್ನ ಮೊದಲ ಮುಖಾಮುಖೀಯಲ್ಲಿ ಹೈದರಾಬಾದ್ ವಿರುದ್ಧ 10 ರನ್ನುಗಳಿಂದ ಗೆದ್ದು ಬಂದಿತ್ತು. ಇನ್ನೊಂದೆಡೆ ಪಂಜಾಬ್ ಡೆಲ್ಲಿ ವಿರುದ್ಧ ಸೂಪರ್ ಓವರ್ನಲ್ಲಿ ಸೋಲನುಭವಿಸಿತ್ತು. ರವಿವಾರದ ಈ ಪಂದ್ಯ “ಶಾರ್ಟ್ ರನ್’ ವಿವಾದದಿಂದ ಸುದ್ದಿಯಾಗಿತ್ತು. ಈ ವಿವಾದವನ್ನು ಹಿಂದಿಕ್ಕಿ ಗೆಲುವಿನ ಹಳಿ ಏರುವುದು ಪಂಜಾಬ್ ಯೋಜನೆ.
ಕೊಹ್ಲಿ ಬ್ಯಾಟ್ ಮಾತಾಡಬೇಕು
ಹೈದರಾಬಾದ್ ವಿರುದ್ಧ ಆರ್ಸಿಬಿ ಪ್ರದರ್ಶನ ಉತ್ತಮ ಮಟ್ಟದಲ್ಲಿತ್ತು. ಎಡಗೈ ಆರಂಭಕಾರ ದೇವದತ್ತ ಪಡಿಕ್ಕಲ್ ತಂಡದ ಹೊಸ ಭರವಸೆಯಾಗಿ ಮೂಡಿಬಂದಿದ್ದರು. ಆಸ್ಟ್ರೇಲಿಯದ ಸೀಮಿತ ಓವರ್ ತಂಡದ ಕಪ್ತಾನ ಆರನ್ ಫಿಂಚ್, ಹಳೆ ಹುಲಿ ಎಬಿ ಡಿ ವಿಲಿಯರ್ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಕ್ಯಾಪ್ಟನ್ ಕೊಹ್ಲಿಯ ಬ್ಯಾಟು ಮಾತಾಡಿರಲಿಲ್ಲ. ಈ ನಾಲ್ವರು ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಿಕೊಂಡರೆ ಆರ್ಸಿಬಿಯನ್ನು ತಡೆಯುವುದು ಸುಲಭವಲ್ಲ.
ಇದನ್ನೂ ಓದಿ:ಅಂಪೈರ್ ವಿರುದ್ಧ ಮತ್ತೆ ಗರಂ ಆದ ಕ್ಯಾಪ್ಟನ್ ಕೂಲ್ ಧೋನಿ : ಆಗಿದ್ದೇನು ಗೊತ್ತಾ ?
10 ಕೋಟಿ ರೂ. ಬೆಲೆ ಬಾಳುವ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮಾರಿಸ್ ಕೂಡ ಆರ್ಸಿಬಿಯ ಆಸ್ತಿ. ಆದರೆ ಪಾರ್ಶ್ವ ಸ್ನಾಯು ಸೆಳೆತಕ್ಕೆ ಸಿಲುಕಿರುವ ಮಾರಿಸ್ ದ್ವಿತೀಯ ಪಂದ್ಯಕ್ಕೂ ಲಭ್ಯರಿರುವುದಿಲ್ಲ. ವಿಕೆಟ್ ಕೀಪರ್ ಜಾಗದಲ್ಲಿ ಎಳೆಯ ಫಿಲಿಪ್ ಜೋಶ್ ಅವರೇ ಮುಂದುವರಿಯುವ ಸಾಧ್ಯತೆ ಇರುವುದರಿಂದ ಪಾರ್ಥಿವ್ ಪಟೇಲ್ ಇನ್ನೂ ಕಾಯಬೇಕಾದುದು ಅನಿವಾರ್ಯ. ಹಾಗೆಯೇ 4 ವಿದೇಶಿ ಕ್ರಿಕೆಟಿಗರ ಖೋಟಾ ತುಂಬಿದ್ದರಿಂದ ಮೊಯಿನ್ ಅಲಿ ಕೂಡ ಹೊರಗುಳಿಯಬೇಕಾಗುತ್ತದೆ.
ಲೆಗ್ಸ್ಪಿನ್ನರ್ ಯಜುವೇಂದ್ರ ಚಹಲ್ ಹೈದರಾಬಾದ್ಗೆ ಕಡಿವಾಣ ಹಾಕುವಲ್ಲಿ ಭರ್ಜರಿ ಯಶಸ್ಸು ಕಂಡಿದ್ದರು. ತಮ್ಮ ಅಂತಿಮ ಓವರಿನ ಸತತ ಎಸೆತಗಳಲ್ಲಿ ವಿಕೆಟ್ ಹಾರಿಸಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಗಿತ್ತು. ಆದರೆ ಉಮೇಶ್ ಯಾದವ್ ರನ್ ಪೋಲು ಮಾಡುವ ಸೂಚನೆಯೊಂದನ್ನು ನೀಡಿದ್ದಾರೆ. ಇವರ ಬದಲು ಮೊಹಮ್ಮದ್ ಸಿರಾಜ್ ಆಡಬಹುದು.
ಇದನ್ನೂ ಓದಿ: ಆಟವಾಡುತ್ತಾ ದಾರಿ ತಪ್ಪಿದ ಪುಟಾಣಿ ಮಗು! ವಾಟ್ಸ್ ಆ್ಯಪ್ನಿಂದ ಪಾಲಕರ ಮಡಿಲು ಸೇರಿತು
ಆರ್ಸಿಬಿಗೆ ಅಗರ್ವಾಲ್ ಎಚ್ಚರಿಕೆ
ಮಾಯಾಂಕ್ ಅಗರ್ವಾಲ್ ಡೆಲ್ಲಿ ವಿರುದ್ಧ ಸಿಡಿದು ನಿಂತ ಪರಿ ಅಮೋಘ. ಟೆಸ್ಟ್ ಬ್ಯಾಟ್ಸ್ಮನ್ ಓರ್ವ ಹೊಡಿಬಡಿ ಆಟಕ್ಕಿಳಿದದ್ದು ಎಲ್ಲರಿಗೂ ಅಚ್ಚರಿಯಾಗಿ ಕಂಡಿತ್ತು. ಇದು ಆರ್ಸಿಬಿ ಪಾಲಿಗೊಂದು ಎಚ್ಚರಿಕೆ ಗಂಟೆ. ರಾಹುಲ್, ಮ್ಯಾಕ್ಸ್ವೆಲ್, ಪೂರಣ್ ಸಿಡಿದು ನಿಂತರೆ ಪಂಜಾಬ್ ಪ್ರಚಂಡ ಪ್ರದರ್ಶನ ನೀಡುವುದರಲ್ಲಿ ಅನುಮಾನವಿಲ್ಲ.
ಪಂಜಾಬ್ ತಂಡದಲ್ಲೂ ಸಾಕಷ್ಟು ಮಂದಿ ವಿದೇಶಿ ಆಟಗಾರರು “ವೇಟಿಂಗ್ ಲಿಸ್ಟ್’ನಲ್ಲಿರುವುದನ್ನು ಮರೆಯುವಂತಿಲ್ಲ. ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್, ಆಲ್ರೌಂಡರ್ ಜಿಮ್ಮಿ ನೀಶಮ್ ಇವರಲ್ಲಿ ಪ್ರಮುಖರು. ಇಬ್ಬರೂ ಡೆಲ್ಲಿ ವಿರುದ್ಧ ಆಡಿರಲಿಲ್ಲ. ದುಬಾರಿ ಬೌಲರ್ ಕ್ರಿಸ್ ಜೋರ್ಡನ್ ಜಾಗಕ್ಕೆ ನೀಶಮ್ ಬಂದರೆ ಅಚ್ಚರಿ ಇಲ್ಲ.
ಮೊಹಮ್ಮದ್ ಶಮಿ, ರವಿ ಬಿಶ್ನೋಯ್, ಶೆಲ್ಡನ್ ಕಾಟ್ರೆಲ್, ಕೆ. ಗೌತಮ್ ಅವರ ಬೌಲಿಂಗ್ ದಾಳಿ ಪಂಜಾಬ್ ಪಾಲಿಗೆ ನಿರ್ಣಾಯಕ.