ನಿಲ್ಲದ ಸದನ ಗದ್ದಲ: ಸಾರಿಗೆ ಸಂಸ್ಥೆ ಚಾಲಕನ ಆತ್ಮಹತ್ಯೆ ಯತ್ನ ವಿಚಾರಕ್ಕೆ ಕೋಲಾಹಲ
ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೆ ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ
Team Udayavani, Jul 7, 2023, 6:39 AM IST
ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗ ಮಂಗಲದ ಕೆಎಸ್ಆರ್ಟಿಸಿ ಬಸ್ ಚಾಲಕ ಕಂ ನಿರ್ವಾಹಕನ ಆತ್ಮಹತ್ಯೆ ಯತ್ನಕ್ಕೆ ರಾಜಕೀಯ ಪ್ರೇರಿತ ವರ್ಗಾವಣೆಯೇ ಕಾರಣ ಎಂಬ ವಿಪಕ್ಷಗಳ ಆರೋಪವು ಗುರುವಾರ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣ ವಾಯಿತು. ಸರಕಾರ ಉನ್ನತ ಮಟ್ಟದ ತನಿಖೆ ನಡೆಸುವು ದಾಗಿ ಭರವಸೆ ನೀಡಿದ್ದರಿಂದ ಗದ್ದಲಕ್ಕೆ ತೆರೆಬಿತ್ತು.
ಈ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ- ಸಿಎಂ ಸಿದ್ದರಾಮಯ್ಯ ಹಾಗೂ ಎಚ್ಡಿಕೆ- ಕೃಷಿ ಸಚಿವ ಚಲುವರಾಯಸ್ವಾಮಿ ನಡುವೆ ವೈಯಕ್ತಿಕ ಕೆಸರೆರ ಚಾಟಕ್ಕೂ ಸದನ ಸಾಕ್ಷಿಯಾಯಿತು.
ಶೂನ್ಯ ವೇಳೆಯಲ್ಲಿ ಬಿಜೆಪಿ ಪ್ರಸ್ತಾವಿಸಿದ್ದ ಈ ವಿಷಯಕ್ಕೆ ಸಂಬಂಧಿಸಿ ಜೆಡಿಎಸ್ನ ಎಚ್.ಡಿ. ಕುಮಾರ ಸ್ವಾಮಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೇಳಿ ದ್ದರೂ ಸ್ಪೀಕರ್ ತಿರಸ್ಕರಿಸಿದ್ದರು. ಕೊನೆಗೆ ಎರಡೂ ಪಕ್ಷಗಳು ಸರಕಾರದ ವಿರುದ್ಧ ಮುಗಿಬಿದ್ದವು. ಸರಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ರಾಜಕೀಯ ಪ್ರೇರಿತ ವರ್ಗಾವಣೆಯಿಂದ ನೊಂದ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸರಕಾರ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ಆತ್ಮಹತ್ಯೆ ಯತ್ನಕ್ಕೂ ಮುನ್ನ ಚಾಲಕ ಜಗದೀಶ್ ಬರೆದಿಟ್ಟ ಪತ್ರದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹೆಸರೂ ಉಲ್ಲೇಖವಾಗಿದೆ. ಅವರ ರಾಜೀನಾಮೆ ಪಡೆದು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ವಿಪಕ್ಷಗಳು ಪಟ್ಟು ಹಿಡಿದು ಧರಣಿ ನಡೆಸಿದವು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉತ್ತರದಿಂದಲೂ ಧರಣಿನಿರತರು ತೃಪ್ತರಾಗಲಿಲ್ಲ. ಕೊನೆಗೆ ಉನ್ನತ ಮಟ್ಟದ ಪೊಲೀಸ್ ತನಿಖೆ ನಡೆಸುವುದಾಗಿ ಹೇಳಿ ಗೃಹ ಸಚಿವ ಡಾ| ಜಿ. ಪರಮೇಶ್ವರ್ ವಿವಾದಕ್ಕೆ ತೆರೆ ಎಳೆದರು.
ಸತ್ಯ ಮುಚ್ಚಿಡಲಾಗದು
ವಿಷಯ ಪ್ರಸ್ತಾವಿಸಿದ ಬಸವರಾಜ ಬೊಮ್ಮಾಯಿ, ಆತ್ಮಹತ್ಯೆಗೆ ಯತ್ನಿಸಿರುವ ಚಾಲಕ ಬರೆದಿರುವ ಪತ್ರದಲ್ಲಿ ಸಚಿವರ ಹೆಸರು ಉಲ್ಲೇಖೀಸಿದ್ದರೂ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ. ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಂತಿದೆ. ವಿಧಾನಸಭೆಯಲ್ಲಿ ಸಂಖ್ಯೆ ಹೆಚ್ಚಿದೆ ಎಂದು ದೊಡ್ಡ ಧ್ವನಿಯಲ್ಲಿ ಕೂಗಾಡಿದರೆ ಸತ್ಯ ಮುಚ್ಚಿಡಲಾಗದು. ಸಾರಿಗೆ ಸಚಿವರ ಉತ್ತರಕ್ಕೂ ಅಲ್ಲಿನ ಘಟನೆಗೂ ಸಂಬಂಧವೇ ಇಲ್ಲ ಎಂದು ಹರಿಹಾಯ್ದರು.
ರಾಜಕೀಯ ಪ್ರೇರಿತವೇ
ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಜಗದೀಶ್ರನ್ನು ಸಚಿವರ ಒತ್ತಡಕ್ಕೆ ಮಣಿದು ಮದ್ದೂರು ಘಟಕಕ್ಕೆ ವರ್ಗಾಯಿಸಲಾಗಿದೆ. ಅವರು ಮಹಿಳೆ ಜತೆಗೆ ಅನು ಚಿತವಾಗಿ ವರ್ತಿಸಿದ್ದರು ಎಂದು ಆರೋಪಿಸಲಾಗಿದೆ. ಆದರೆ ಅಂಥ ಘಟನೆಯೇ ನಡೆದಿಲ್ಲ ಎಂದು ಜಿಲ್ಲಾಧಿ ಕಾರಿ ಹೇಳುತ್ತಿದ್ದಾರೆ. ಚಾಲಕ ಬರೆದಿಟ್ಟ ಪತ್ರದಲ್ಲಿ ಸಚಿವರ ಹೆಸರಿದ್ದು, ಇದು ರಾಜಕೀಯಪ್ರೇರಿತ ವರ್ಗಾವಣೆ ಅಲ್ಲವೇ ಎಂದು ಪ್ರಶ್ನಿಸಿದರು.
ತನಿಖೆ ಮಾಡಿ ಕ್ರಮ
ವಿಪಕ್ಷಗಳ ಆರೋಪಕ್ಕೆ ಉತ್ತರ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾಯಿಸಲಾಗಿದ್ದು, ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ವರ್ಗಾವಣೆ ಹಿಂಪಡೆಯುವುದರೊಳಗೆ ಆತ ವಿಷ ಸೇವಿಸಿದ್ದಾನೆ ಎಂದರು. ಸದ್ಯ ಸ್ಥಳೀಯ ಆಸ್ಪತ್ರೆಯಿಂದ ಮೈಸೂರಿಗೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಂತ್ರಿಗಳು ಕೂಡ ವರ್ಗಾವಣೆ ತಡೆ ಹಿಡಿಯಿರಿ, ಹಿಂಪಡೆಯಿರಿ ಎಂದಿದ್ದಾರೆ ಎಂದರು.
ಸಂಧಾನ ಸಭೆ ಯಶಸ್ವಿ
ಗದ್ದಲದಿಂದಾಗಿ ಪದೇಪದೆ ಕಲಾಪ ಮುಂದೂಡುವಂತಾಗಿತ್ತು. ಬಳಿಕ ಸ್ಪೀಕರ್ ಖಾದರ್ ಅವರು ಸಂಧಾನ ನಡೆಸಿದರು. ಸಭೆಯಲ್ಲಿ ರಾಜೀನಾಮೆ ವಿಚಾರ ಬಿಟ್ಟು ತನಿಖೆಯ ವಿಚಾರಕ್ಕಷ್ಟೇ ವಿಪಕ್ಷಗಳ ಮನವೊಲಿಸಲಾಯಿತು.
ಸಿದ್ದು V/s ಎಚ್ಡಿಕೆ
ಬೆಂಗಳೂರು: ಇಂಥಾ ರಾಜಕೀಯ ಆಟಗಳನ್ನೆಲ್ಲ ನಾನು ಸಾಕಷ್ಟು ನೋಡಿದ್ದೇನೆ. ನಿಮ್ಮ ವ್ಯಂಗ್ಯ ನಗುವಿನ ಹಿಂದೆ ಏನಿತ್ತು ಎಂದು ಗೊತ್ತಿದೆ. ಇದಕ್ಕೆಲ್ಲ ನಾನು ಕೇರ್ ಮಾಡುವುದಿಲ್ಲ.
ನೀವೇನ್ರೀ ಕೇರ್ ಮಾಡುವುದು? ನೀವ್ ಕೇರ್ ಮಾಡಲ್ಲ ಅಂದ್ರೆ ನಾನು ನಿಮ್ಮಪ್ಪ. ನಾನೂ ಕೇರ್ ಮಾಡಲ್ಲ. ಹೆದರುತ್ತೇವೆ ಎಂದುಕೊಂಡಿದ್ದೀರಾ? ಏ ಕೇರ್ ಮಾಡದಿದ್ದರೆ ಹೋಗ್ರಿ.
ಇವಿಷ್ಟೂ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಹಾಲಿ ಸಿಎಂ ಸಿದ್ದರಾಮಯ್ಯ ನಡುವೆ ನಡೆದ ಮಾತಿನ ಜಟಾಪಟಿ.
ಕೆಎಸ್ಆರ್ಟಿಸಿ ಬಸ್ ಚಾಲಕನ ಆತ್ಮಹತ್ಯೆಯತ್ನ ಪ್ರಕರಣದಿಂದ ಬಿಸಿಯೇರಿದ್ದ ಸದನದಲ್ಲಿ ಕುಮಾರಸ್ವಾಮಿ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಮಧ್ಯೆ ವಾಕ್ಸಮರ ನಡೆದಿತ್ತು. ಇದಾಗುವ ವೇಳೆಗೆ ವಿಧಾನಸಭೆ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯರನ್ನು ಕಂಡು ನಕ್ಕ ಸಚಿವ ಚಲುವರಾಯಸ್ವಾಮಿ ಅವರಿಗೆ ಸಿಎಂ ಹಸ್ತಲಾಘವ ಮಾಡಿದರು.
ಮೊದಲೇ ಕೆಂಡಾಮಂಡಲರಾಗಿದ್ದ ಕುಮಾರಸ್ವಾಮಿ ಇದನ್ನು ಕಂಡು ಇನ್ನಷ್ಟು ಕಿಡಿ ಕಿಡಿಯಾದರು. ನಿಮ್ಮ ವ್ಯಂಗ್ಯ ನಗುವಿನ ಹಿಂದಿನ ಕಾರಣ ನನಗೆ ಗೊತ್ತಿದೆ. ಶೇಕ್ ಹ್ಯಾಂಡ್ ಮಾಡ್ತೀರಾ ಶೇಕ್ ಹ್ಯಾಂಡ್? ನಿಮ್ಮ ಇಂಥಾ ರಾಜಕೀಯ ಆಟಗಳನ್ನೆಲ್ಲ ನಾನು ನೋಡಿದ್ದೇನೆ. ಇದಕ್ಕೆ ಕೇರ್ ಮಾಡುವವನೂ ಅಲ್ಲ, ಹೆದರುವುದೂ ಇಲ್ಲ ಎಂದರು.
ಮಾತು ಮುಂದುವರಿಸಿದ ಎಚ್ಡಿಕೆ, ಜಾತ್ಯತೀತ ಎಂದುಕೊಂಡು ನಿಮ್ಮನ್ನು ನಂಬಿದ್ದಕ್ಕೆ ದೇವೇಗೌಡರ ಕುತ್ತಿಗೆ ಕೊಯ್ದಿರಲ್ಲ ಎನ್ನುತ್ತಿದ್ದಂತೆ ಆಡಳಿತ-ವಿಪಕ್ಷ ಸದಸ್ಯರ ಮಾತಿನ ಚಕಮಕಿಯ ನಡುವೆ ಮಾತು ತೇಲಿ ಹೋಯಿತು.
——————-
ಆತ್ಮಹತ್ಯೆಗೆ ಯತ್ನಿಸಿರುವ ಜಗದೀಶ್ ಜೆಡಿಎಸ್ ಕಾರ್ಯಕರ್ತನೂ ಹೌದು. ಬಿಜಿಎಸ್ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ನಾನೇ ಆರೋಗ್ಯ ವಿಚಾರಿಸಿದ್ದೆ. ಅಪಾಯ ಇಲ್ಲ ಎಂದಿದ್ದರು. ಅವರ ಕುಟುಂಬದವರೂ ಕರೆ ಮಾಡಿ ನನ್ನೊಂದಿಗೆ ಮಾತನಾಡಿದ್ದರು. ನಾನೇ ಹೋಗಿ ಆರೋಗ್ಯ ವಿಚಾರಿಸಬೇಕು ಎನ್ನುವಷ್ಟರಲ್ಲಿ ಆತನನ್ನು ಅಲ್ಲಿಂದ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಸರಕಾರ ಮುಂದಾಯಿತು. ಅಷ್ಟು ತರಾತುರಿ ಏನಿತ್ತೋ ಅರ್ಥವಾಗಲಿಲ್ಲ.
-ಎಚ್.ಡಿ. ಕುಮಾರಸ್ವಾಮಿ
ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲು ಕುಟುಂಬದವರೇ ತೀರ್ಮಾನಿಸಿದ್ದರು. ನಾನು ಬರುವವರೆಗೆ ಸ್ಥಳಾಂತರಿಸಬಾರದೆಂದು ಕುಮಾರಸ್ವಾಮಿ ಪಟ್ಟು ಹಿಡಿದಿದ್ದರು. ನಾಗಮಂಗಲದಲ್ಲಿ ಜೆಡಿಎಸ್ನ ಮಾಜಿ ಶಾಸಕರೊಬ್ಬರು ಆ್ಯಂಬುಲೆನ್ಸ್ ತಡೆದು ಗಲಾಟೆ ಮಾಡಿದರು. ಇವರ ಉದ್ದೇಶ ಏನಾಗಿತ್ತು? ಆತ ಬದುಕಬಾರದಿತ್ತೇ ?
-ಚಲುವರಾಯಸ್ವಾಮಿ, ಕೃಷಿ ಸಚಿವ
ಗಣಪತಿ ಹಾಗೂ ಡಿ.ಕೆ.ರವಿ ಪ್ರಕರಣದಲ್ಲಿ ನನ್ನ ಮೇಲೆ ಅನಗತ್ಯ ಆರೋಪ ಮಾಡಿದಿರಿ. ಈ ಬಗ್ಗೆ ಸಿಬಿಐ ತನಿಖೆಯಾಗಿ ನಾನು ನಿರಪರಾಧಿ ಎಂದು ಸಾಬೀ ತಾಗಿದೆ. ಈಗ ಅದ್ಯಾವುದೋ ಪೆನ್ ಡ್ರೈವ್ ಇಟ್ಟುಕೊಂಡು ಭಾಷಣ ಮಾಡಿ ತೇಜೋವಧೆ ಮಾಡುತ್ತಿದ್ದೀರಿ.
-ಕೆ.ಜೆ.ಜಾರ್ಜ್, ಇಂಧನ ಸಚಿವ
ಈ ಪೆನ್ಡ್ರೈವ್ ಯಾವುದೋ ಹೈದರಾಬಾದ್ ಸಲಕರಣೆಯಲ್ಲ. ನಿಮಗೆ ತಾಕತ್ತಿದ್ದರೆ ತನಿಖೆ ಮಾಡಿಸಿ ಮಂತ್ರಿಯ ರಾಜೀನಾಮೆ ಪಡೆಯಿರಿ. ಜಾರ್ಜ್ ಅವರೇ ನಿಮ್ಮ ಇಲಾಖೆಯಲ್ಲಿ ಹೇಗೆ ವರ್ಗಾವಣೆಯಾಗುತ್ತಿದೆ ಎಂಬುದು ಗೊತ್ತು. ಬಿಜೆಪಿ ವಿರುದ್ಧ 40 ಪರ್ಸೆಂಟ್ ಆರೋಪಕ್ಕೆ ದಾಖಲೆ ಇಟ್ಟಿದ್ದಿರೇ?
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pen Drive Case: 12 ದಿನದ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ಎಚ್.ಡಿ.ರೇವಣ್ಣ ಬಿಡುಗಡೆ
Ramanagara: ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ… ಪೊಲೀಸರಿಂದ ಪರಿಶೀಲನೆ
Kalburgi: ಕರೆಂಟ್ ಶಾಕ್ ಪ್ರಕರಣ;ಖಂಡಿಸಿ ಹಿಂದೂ ಜಾಗೃತಿ ಸೇನೆಯಿಂದ ಸರಕಾರದ ಪ್ರತಿಕೃತಿ ದಹನ
State Politics: ನಮ್ಮಲ್ಲಿ ಒಳಜಗಳ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Miyazaki: ಧಾರವಾಡ ಮಾವು ಮೇಳದಲ್ಲಿ ಗಮನ ಸೆಳೆದ 2.5 ಲಕ್ಷ ರೂ.ಬೆಲೆಯ ಮಿಯಾ ಜಾಕಿ ಮಾವು