Kasaragodu: ಆಗಲ್ಪಾಡಿ ಶ್ರೀ ಕ್ಷೇತ್ರದಲ್ಲೊಂದು ವಿಶಿಷ್ಟ ಕ್ಯಾಂಟೀನ್
Team Udayavani, Feb 17, 2024, 3:11 PM IST
ಕಾಸರಗೋಡು: ಹತ್ತು ವರ್ಷಗಳ ಹಿಂದೆ ಜಾತ್ರೆ ಸಮಯದಲ್ಲಿ ಕ್ಯಾಂಟೀನ್ ಆರಂಭಿಸಿದ ಉಪ್ಪಂಗಳ ಕುಟ್ಯಣ್ಣ ಎಂಬವರು ಜನರಲ್ಲಿ ಪರಸ್ಪರ ವಿಶ್ವಾಸ ಮೂಡಿಸುವ, ನಂಬಿಕೆಯ ಕಲ್ಪನೆಯನ್ನು ಕ್ಯಾಂಟೀನ್ ನಡೆಸುವುದರ ಮೂಲಕ ತಂದಿದ್ದಾರೆ.
ಗ್ರಾಮಕರು ತಾವು ತಿಂಡಿ ತಿಂದ ಅಥವಾ ಕಾಫಿಯನ್ನು ಕುಡಿದ ನಂತರ ಸಂತೋಷವಾದರೆ (ಸಮಾಧಾನವಾದರೆ) ಮಾತ್ರ ಅಲ್ಲಿಟ್ಟಿರುವ ಒಂದು ಪಾತ್ರೆಯಲ್ಲಿ ಹಣ ಹಾಕಬಹುದು. ಎಷ್ಟು ಬೇಕಾದರೂ ತಿನ್ನಬಹುದಾಗಿದ್ದು, ಬೆಲೆ ನಿಗದಿ ಇಲ್ಲ. ಹಾಗೆಯೇ ತಮ್ಮ ಮನಸ್ಸಿಗೆ ಬಂದದ್ದನ್ನು ಹಾಕಬಹುದು ಅಥವಾ ಹಾಕದೇ ಇರಬಹುದು.
“ದೇವಿ ದಯೆಯಿಂದ ಇದು ಚೆನ್ನಾಗಿ ನಡೆಯುತ್ತದೆ. ನನಗಂತೂ ನಷ್ಟವಾಗಿಲ್ಲ” ಎನ್ನುತ್ತಾರೆ ಈ ನಮೋ ಕ್ಯಾಂಟೀನ್ ನ ವೆಂಕಟರಮಣ ಭಟ್.
ಹತ್ತು ವರ್ಷದಿಂದ ಸತತವಾಗಿ ಗಮನಿಸಿದ್ದ ಈ ಹೊಸ ಕಾನ್ಸೆಪ್ಟ್ ಬಗ್ಗೆ ಮಾತನಾಡಿದ ವೇಣುಶರ್ಮ, “ಮನೆ ಒಳಗೆ ಪ್ರತಿ ಕೋಣೆಗೆ ಬೀಗ ಹಾಗೂ ಪರಸ್ಪರ ನಂಬಿಕೆ ಇಲ್ಲದ ಈ ಕಾಲಘಟ್ಟದಲ್ಲಿ ಈ ಕ್ಯಾಂಟೀನ್ ಊರಿನಲ್ಲಿ ಮನೆ ಮಾತಾಗಿದೆ. ಹಾಗೆಯೇ ಊರಿನ ಜನರು ಹಿಂದಿನದ್ದಕ್ಕಿಂತಲೂ ಹೆಚ್ಚು ಹಣ ನೀಡಿ, ಶುಭ ಹಾರೈಸುತಿದ್ದಾರೆ. ಈ ಕಲ್ಪನೆಗೆ ಮೆಚ್ಚುಗೆ ನೀಡುತ್ತಿದ್ದಾರೆ” ಎಂದರು.