ಅಡೂರು ಬಳಿ ಆನೆ ಹಾವಳಿ
Team Udayavani, Mar 21, 2019, 1:00 AM IST
ಅಡೂರು: ಇಲ್ಲಿನ ಪೊಯೆಮಜಲು ನಿವಾಸಿ ದೇವಪ್ಪ ಗೌಡ ಅವರ ತೋಟಕ್ಕೆ ಮಂಗಳವಾರ ತಡರಾತ್ರಿ ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿದ್ದು, ಅಪಾರ ಕೃಷಿ ನಾಶ ಮಾಡಿದೆ.
ಆನೆಗಳು 100ರಷ್ಟು ಬಾಳೆ ಗಿಡಗಳು, 10 ಅಡಿಕೆ ಮರ, 5 ತೆಂಗಿನ ಸಸಿಗಳನ್ನು ನಾಶಗೊಳಿಸಿವೆ.
ತಡರಾತ್ರಿ 1 ಗಂಟೆ ವೇಳೆಗೆ ತೋಟದಲ್ಲಿ ಸದ್ದು ಕೇಳಿ ಬಂದ ಹಿನ್ನೆಲೆಯಲ್ಲಿ ನೋಡಿದಾಗ ಆನೆಗಳು ವ್ಯಾಪಕ ಕೃಷಿ ನಾಶದಲ್ಲಿ ತೊಡಗಿರುವುದು ಕಂಡು ಬಂತು. ಗಂಟೆ ಬಾರಿಸಿ ಶಬ್ದ ಮಾಡಿದರೂ ಆನೆಗಳು ಮುಂಜಾನೆ 4 ಗಂಟೆ ವರೆಗೂ ತೋಟದಲ್ಲೇ ಇದ್ದು ಹಾನಿ ನಡೆಸಿದವು. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಕೆಲವು ತಿಂಗಳ ಹಿಂದೆಯಷ್ಟೇ ಅಡೂರು ಮತ್ತು ಪಾಂಡಿಯ ಹಲವೆಡೆಗಳಲ್ಲಿ ಕಾಡಾನೆ ದಾಳಿ ನಡೆಸಿತ್ತು. ಕಾಡಾನೆ ಹಾವಳಿ ತಡೆಗಟ್ಟಲು ಸೂಕ್ತ ಕ್ರಮ ತೆಗೆದು ಕೊಳ್ಳಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.