ಉಪ್ಪಳ ಮುಸೋಡಿ ಕಡಲ ಕಿನಾರೆಯಲ್ಲಿ ತೇಲುವ ಕಲ್ಲು ಪತ್ತೆ !
Team Udayavani, Feb 1, 2019, 1:00 AM IST
ಕುಂಬಳೆ : ನೀರಿನಲ್ಲಿ ತೇಲುವ ಕಲ್ಲೊಂದು ಉಪ್ಪಳ ಬಳಿಯ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಬಾಯಾರುಪದವು ಬಳಿಯ ಕನಿಯಾಲ ನಿವಾಸಿ ವಸತಿ ನಿರ್ಮಾಣ ಕಾರ್ಮಿಕ ನಾಗೇಶ ಪಡೀಲ್ ಎಂಬವರಿಗೆ ಅಪರೂಪದ ಪ್ರಕೃತಿ ವಿಸ್ಮಯದ ಕಲ್ಲೊಂದು ದೊರೆತಿದೆ. ಉಪ್ಪಳ ಮುಸೋಡಿ ಪ್ರದೇಶದಲ್ಲಿ ಮನೆ ನಿರ್ಮಾಣ ಕಾಮಗಾರಿ ಮುಗಿಸಿ ವಾಯು ವಿಹಾರಕ್ಕೆಂದು ಸಮುದ್ರ ಕಿನಾರೆಗೆ ತೆರಳಿದ್ದಾಗ ಈ ವಿಶೇಷ ಕಲ್ಲು ಪತ್ತೆಯಾಗಿದೆ. ಸಾಮಾನ್ಯ ಕಲ್ಲಿನ ಗಾತ್ರಕ್ಕೆ ಹೋಲಿಸಿದರೆ ಈ ಕಲ್ಲು ಹಗುರವಾಗಿದೆ.
ಅಚ್ಚರಿ ಮೂಡಿಸಿದ ಈ ಕಲ್ಲನ್ನು ನಾಗೇಶ್ ಜೋಪಾನವಾಗಿ ಮನೆಗೆ ಒಯ್ದಿದ್ದಾರೆ. ತೇಲುವ ಕಲ್ಲುಗಳ ಬಗ್ಗೆ ಯೂಟ್ಯೂಬ್ ಅಂತರ್ಜಾಲ ತಾಣಗಳಲ್ಲಿ ನೋಡಿ ತಿಳಿದಿದ್ದ ನಾಗೇಶ್ ಕಲ್ಲನ್ನು ಸಂರಕ್ಷಿಸಿ ಪರೀಕ್ಷಿಸಿದ್ದಾರೆ. ಕಲ್ಲನ್ನು ನೀರಿನ ಬಕೆಟ್ ಒಂದರಲ್ಲಿ ಹಾಕಿದಾಗ ಕಲ್ಲು ತೇಲುತ್ತಿದ್ದುದನ್ನು ಕಂಡು ಪುಳಕಿತರಾದ ಅವರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲೂ ಹರಿಯಬಿಟ್ಟಿದ್ದಾರೆ, ಮಾತ್ರವಲ್ಲದೆ ಕಲ್ಲನ್ನು ಒಂದು ದಿನವಿಡಿ ನೀರಿನಲ್ಲೇ ನೆನೆಸಿ ನಂತರ ಪುನಃ ಬಕೆಟ್ ನೀರಿನಲ್ಲಿ ಹಾಕಿದಾಗ ಕೇವಲ ಅರ್ಧ ಭಾಗವಷ್ಟೇ ನೀರಿನಲ್ಲಿ ಮುಳುಗಿದ್ದು, ಇನ್ನರ್ಧ ಮೇಲ್ಭಾಗದಲ್ಲಿ ತೇಲುತ್ತಲಿತ್ತು.
ಪ್ರಾಕೃತಿಕ ವಿಸ್ಮಯದ ಇಂತಹ ಕಲ್ಲುಗಳು ಈ ಹಿಂದೆ ತಮಿಳುನಾಡಿನ ರಾಮೇಶ್ವರಂ ಮತ್ತು ದೇಶದ ಪೂರ್ವ ಕರಾವಳಿಯಲ್ಲಿ ದೊರೆತ ವರದಿಯಾಗಿತ್ತು. ರಾಮಾಯಣದಲ್ಲಿ ಲಂಕೆಗೆ ಸೇತುವೆ ನಿರ್ಮಿಸಲು ಇಂತಹ ಕಲ್ಲುಗಳನ್ನೇ ಬಳಸಲಾಗಿದೆಯಂತೆ.
ತೇಲುವ ಕಲ್ಲುಗಳು ನಿಸರ್ಗ ಸೋಜಿಗವು ಆಗಿದ್ದು ವೈಜ್ಞಾನಿಕ ಮಹತ್ವವನ್ನು ಹೊಂದಿವೆ. ಪಶ್ಚಿಮ ಕರಾವಳಿಯಲ್ಲಿ ಅದರಲ್ಲೂ ಕಾಸರಗೋಡು ಜಿಲ್ಲೆಯ ಉಪ್ಪಳ ಭಾಗದಲ್ಲಿ ಇಂತಹ ಕಲ್ಲು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ಸುಮಾರು 12 ಸೆಂ.ಮೀ ಉದ್ದವಿರುವ ತುಸು ನುಣುಪು ಕಲ್ಲು 10 ಸೆಂ.ಮೀ ಸುತ್ತಳತೆಯನ್ನು ಹೊಂದಿದ್ದು, ಸಣ್ಣ ರಂಧ್ರಾಕೃತಿಯನ್ನು ಹೊಂದಿದೆ.
ಮಧ್ಯಾಹ್ನದ ಹೊತ್ತು ಕೆಲಸ ಮುಗಿಸಿ ಉಪ್ಪಳ ಮುಸೋಡಿ ಸಮುದ್ರ ತೀರಕ್ಕೆ ತೆರಳಿದ್ದ ಸಂದರ್ಭ ಮೋಜಿಗಾಗಿ ಸಮುದ್ರಕ್ಕೆ ಎಸೆಯಲೆಂದು ಎತ್ತಿಕೊಂಡ ಕಲ್ಲು ಬಹಳ ಹಗುರವೆನಿಸಿತು.ಅಚ್ಚರಿ ಮೂಡಿಸಿದ ಕಲ್ಲಿನ ಕುರಿತು ಕುತೂಹಲ ಮೂಡಿತು. ಕಲ್ಲನ್ನು ನೀರಿನಲ್ಲಿ ಹಾಕಿದಾಗ ತೇಲಲಾರಂಭಿಸಿತ್ತು, ಮನೆಗೆ ಕಲ್ಲನ್ನು ತಂದು ದಿನಪೂರ್ತಿ ನೀರಲ್ಲಿ ನೆನಸಿ, ಅನಂತರ ನೀರು ತುಂಬಿದ ಬಕೆಟ್ನಲ್ಲಿ ಇಳಿಸಿದಾಗ ಅರ್ಧ ಭಾಗ ತೆಲುತ್ತಿತ್ತು, ಇದರಿಂದ ಇದೊಂದು ತೇಲುವ ಕಲ್ಲೆಂದು ದೃಢವಾಯಿತು. ಕಲ್ಲಿನ ತೇಲುವಿಕೆಗೆ ವೈಜ್ಞಾನಿಕ ಕಾರಣಗಳಿರಬಹುದು. ಭೂಗರ್ಭ ಶಾಸ್ತ್ರಜ್ಞರು ಇಂತಹ ಕಲ್ಲಿನ ಬಗ್ಗೆ ವೈಜ್ಞಾನಿಕ ಮಾಹಿತಿ ಪಡೆಯಬಹುದು. ಕೆಲವರು ಶ್ರೀರಾಮ ಸೇತುವೆಯ ಕಲ್ಲಾಗಿರಬಹುದೆಂಬ ಶಂಕೆಯನ್ನು ನಾಗೇಶ ಕನಿಯಾಲ ವ್ಯಕ್ತಪಡಿಸಿದ್ದಾರೆ.
ಶ್ರೀರಾಮ ಸೇತುವೆಯ ಕಲ್ಲಾಗಿರಬಹುದೆಂಬ ಶಂಕೆ
ಮಧ್ಯಾಹ್ನದ ಹೊತ್ತು ಕೆಲಸ ಮುಗಿಸಿ ಉಪ್ಪಳ ಮುಸೋಡಿ ಸಮುದ್ರ ತೀರಕ್ಕೆ ತೆರಳಿದ್ದ ಸಂದರ್ಭ ಮೋಜಿಗಾಗಿ ಸಮುದ್ರಕ್ಕೆ ಎಸೆಯಲೆಂದು ಎತ್ತಿಕೊಂಡ ಕಲ್ಲು ಬಹಳ ಹಗುರವೆನಿಸಿತು.ಅಚ್ಚರಿ ಮೂಡಿಸಿದ ಕಲ್ಲಿನ ಕುರಿತು ಕುತೂಹಲ ಮೂಡಿತು. ಕಲ್ಲನ್ನು ನೀರಿನಲ್ಲಿ ಹಾಕಿದಾಗ ತೇಲಲಾರಂಭಿಸಿತ್ತು, ಮನೆಗೆ ಕಲ್ಲನ್ನು ತಂದು ದಿನಪೂರ್ತಿ ನೀರಲ್ಲಿ ನೆನಸಿ, ಅನಂತರ ನೀರು ತುಂಬಿದ ಬಕೆಟ್ನಲ್ಲಿ ಇಳಿಸಿದಾಗ ಅರ್ಧ ಭಾಗ ತೆಲುತ್ತಿತ್ತು, ಇದರಿಂದ ಇದೊಂದು ತೇಲುವ ಕಲ್ಲೆಂದು ದೃಢವಾಯಿತು. ಕಲ್ಲಿನ ತೇಲುವಿಕೆಗೆ ವೈಜ್ಞಾನಿಕ ಕಾರಣಗಳಿರಬಹುದು. ಭೂಗರ್ಭ ಶಾಸ್ತ್ರಜ್ಞರು ಇಂತಹ ಕಲ್ಲಿನ ಬಗ್ಗೆ ವೈಜ್ಞಾನಿಕ ಮಾಹಿತಿ ಪಡೆಯಬಹುದು. ಕೆಲವರು ಶ್ರೀರಾಮ ಸೇತುವೆಯ ಕಲ್ಲಾಗಿರಬಹುದೆಂಬ ಶಂಕೆಯನ್ನು ನಾಗೇಶ ಕನಿಯಾಲ ವ್ಯಕ್ತಪಡಿಸಿದ್ದಾರೆ.