Kerala ಮುನ್ನಡೆಯುತ್ತಿದೆ: ಸಿಎಂ ಪಿಣರಾಯಿ ವಿಜಯನ್
Team Udayavani, Nov 20, 2023, 12:20 AM IST
ಕಾಸರಗೋಡು: ರಾಜ್ಯಕ್ಕೆ ಅರ್ಹವಾಗಿ ಸಲ್ಲಬೇಕಾದ ಆರ್ಥಿಕ ಸವಲತ್ತುಗಳನ್ನು ಕೇಂದ್ರ ಸರಕಾರ ನೀಡದ ಕಾರಣ ಕೇರಳವನ್ನು ಉಸಿರುಕಟ್ಟುವಂತೆ ಮಾಡುತ್ತಿದೆ. ಇದರ ವಿರುದ್ಧ ಕೇರಳೀಯರು ಒಗ್ಗೂಡಿ ಹೋರಾಡುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಅವರು ಕಾಸರಗೋಡು ನಾಯಮ್ಮಾರಮೂಲೆಯ ಚೆಂಗಳ ಪಂಚಾಯತ್ ಸ್ಟೇಡಿಯಂನಲ್ಲಿ ನಡೆದ ಕಾಸರಗೋಡು ವಿಧಾನಸಭಾ ಕ್ಷೇತ್ರ ನವ ಕೇರಳ ಸದಸ್(ಸಭೆ)ಯನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಥಿಕವಾಗಿ ಬಿಕ್ಕಟ್ಟಿನಲ್ಲಿದ್ದರೂ ಕೇರಳ ಮಿತಿಗಳನ್ನು ಮೀರಿ ಮುನ್ನಡೆಯುತ್ತಿದೆ. ಕೇರಳಕ್ಕೆ ವಿವಿಧ ಕ್ಷೇತ್ರಗಳಲ್ಲಿ 57,000 ಕೋಟಿ ರೂ. ಗೂ ಅಧಿಕ ಹಣವನ್ನು ಕಡಿತಗೊಳಿಸಲಾಗಿದೆ. ಇದು ರಾಜ್ಯಕ್ಕೆ ಬರಬೇಕಾದ ಮೊತ್ತವಾಗಿತ್ತು. ಈ ಆರ್ಥಿಕ ಬಿಕ್ಕಟ್ಟು ಕೆಲವು ತೊಂದರೆಗಳನ್ನು ಉಂಟುಮಾಡುತ್ತಿದೆ. ಆದರೆ ರಾಜ್ಯವು ಅದೆಲ್ಲವನ್ನೂ ಮೀರಿ ಮುನ್ನಡೆಯುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ ಎಂದರು.
ಕಳೆದ ಏಳು ವರ್ಷಗಳಲ್ಲಿ ರಾಜ್ಯದ ತಲಾ ಆದಾಯ 1,48,000 ಕೋಟಿ ರೂ.ಗಿಂತ 2,28,000 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದರು.