ಕುಂಟಿಕಾನಮಠ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಎಪ್ರಿಲ್ 26 ರಂದು ಶ್ರೀದೇವರ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ
Team Udayavani, Mar 14, 2024, 5:28 PM IST
ಬದಿಯಡ್ಕ: ಕುಂಟಿಕಾನಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವವು ಏಪ್ರಿಲ್ 21 ರಿಂದ ಮೊದಲ್ಗೊಂಡು ಏಪ್ರಿಲ್ 30ರ ತನಕ ವಿವಿಧ ವೈದಿಕ, ತಾಂತ್ರಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬುಧವಾರ ಶ್ರೀಕ್ಷೇತ್ರಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ಟ ಕೆ.ಎಂ. ಶ್ರೀದೇವರಲ್ಲಿ ಪ್ರಾರ್ಥಿಸಿ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳಿಗೆ, ಗಣ್ಯರಿಗೆ ಆಮಂತ್ರಣಪತ್ರಿಕೆಯನ್ನು ಹಸ್ತಾಂತರಿಸಿ ಮಾತನಾಡಿ ನಮ್ಮ ಪಾಲಿಗೆ ಬಂದೊದಗಿದ ಈ ಪುಣ್ಯಕಾರ್ಯದಲ್ಲಿ ಭಗವದ್ಭಕ್ತರು ತೊಡಗಿಸಿಕೊಳ್ಳಬೇಕು. ನಾಡಿನ ಸಮಸ್ತ ಜನರ ಸಹಕಾರದೊಂದಿಗೆ ಬ್ರಹ್ಮಕಲಶೋತ್ಸವವು ಯಶಸ್ವಿಯಾಗಿ ನೆರವೇರಲಿ ಎಂದರು.
ಕೊಡುಗೈದಾನಿ, ಉದ್ಯಮಿ ಬಿ.ವಸಂತ ಪೈ ಬದಿಯಡ್ಕ ದೇವತಾಕಾರ್ಯವನ್ನು ಯಾವುದೇ ಲೋಪವಿಲ್ಲದಂತೆ ಪೂರೈಸುವುದು ಪ್ರತಿಯೊಬ್ಬನ ಕರ್ತವ್ಯ ಎಂಬ ನೆಲೆಯಲ್ಲಿ ಬ್ರಹ್ಮಕಲಶೋತ್ಸವದಲ್ಲಿ ಸಕ್ರಿಯರಾಗಲು ಕರೆನೀಡಿದರು. ಪ್ರತಿಯೊಂದು ಮನೆಗೂ ಆಮಂತ್ರಣವನ್ನು ನೀಡಿ ಕ್ಷೇತ್ರಕಾರ್ಯಗಳಲ್ಲಿ ತೊಡಗಿಕೊಳ್ಳಬೇಕೆಂದರು. ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ (ರಿ.)ನ ಅಧ್ಯಕ್ಷ ವಿ.ಬಿ.ಕುಳಮರ್ವ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಆಳ್ವ ಕಳತ್ತೂರು, ಪ್ರಧಾನ ಕಾರ್ಯದರ್ಶಿ ಶ್ಯಾಮ ಭಟ್ ಕೆ.ಎಂ., ಉಪಾಧ್ಯಕ್ಷ ಎಂ.ವಿ. ಮಹಾಲಿಂಗೇಶ್ವರ ಭಟ್, ಶಂಕರನಾರಾಯಣ ಶರ್ಮ ಕುಂಟಿಕಾನ, ಚಿದಾನಂದ ಆಳ್ವ ಮಂಜಕೊಟ್ಯ, ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಭಗವದ್ಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.