ಶುಚೀಕರಣ ಯಜ್ಞ ಮಾದರಿಯಾದ ಸ್ಥಳೀಯಾಡಳಿತ ಸಂಸ್ಥೆಗಳು
Team Udayavani, May 13, 2019, 6:15 AM IST
ಕಾಸರಗೋಡು: ರಾಜ್ಯ ಸರಕಾರದ ಶುಚಿತ್ವ ಯಜ್ಞವನ್ನು ಅನುಷ್ಠಾನಗೊಳಿಸುವಲ್ಲಿ ಮಾದರಿ ರೂಪದಲ್ಲಿ ಚಟುವಟಿಕೆ ನಡೆಸಿದ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕೆಲವು ಗರಿಷ್ಠ ಮಟ್ಟದಲ್ಲಿ ಸಾಧನೆ ನಡೆಸಿ ಗಮನ ಸೆಳೆದಿವೆ.
ಈ ಸಾಲಿನಲ್ಲಿ ಮಡಿಕೈ ಗ್ರಾಮ ಪಂಚಾಯತ್ನ ಸಾಧನೆ ಗಮನಾರ್ಹವಾಗಿದೆ. ಏಕಕಾಲಕ್ಕೆ 15 ವಾರ್ಡ್ ಗಳನ್ನು ಶುಚಿಗೊಳಿಸುವ ಮೂಲಕ ಈ ಪಂಚಾಯತ್ ತನ್ನ ಜನಬೆಂಬಲ ಸಾಬೀತುಪಡಿಸಿದೆ. ಚಾಳಕ್ಕಡವು ಪ್ರದೇಶದಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಪ್ರಭಾಕರನ್ ಉದ್ಘಾಟಿಸಿದರು. ಕುಟುಂಬಶ್ರೀ ಕಾರ್ಯಕರ್ತರು, ವಿವಿಧ ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು, ಆಟೋರಿûಾ ಕಾರ್ಮಿಕರು, ವಿವಿಧ ಕ್ಲಬ್ಗಳ ಕಾರ್ಯಕರ್ತರು ಶುಚೀಕರಣಕ್ಕೆ ಹೆಗಲು ನೀಡಿದರು.
ಅಜಾನೂರು ಗ್ರಾಮ ಪಂಚಾಯತ್ನ 23 ವಾರ್ಡ್ಗಳ ಶುಚೀಕರಣ ಏಕಕಾಲಕ್ಕೆ ನಡೆಸಲಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಪಿ.ದಾಮೋದರನ್ ಉದ್ಘಾಟಿಸಿದರು. ವಾರ್ಡ್ಗಳ ಶುಚೀಕರಣಕ್ಕೆ ಆಯಾ ವಾರ್ಡ್ ಸದಸ್ಯರು ನೇತೃತ್ವ ವಹಿಸಿದರು.
ಪಳ್ಳಿಕ್ಕರೆ ಗ್ರಾಮ ಪಂಚಾಯತ್ನ ಶುಚೀಕರಣ ಸಂಬಂಧ ಆಲಕ್ಕೋಡ್ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷೆ ಪಿ. ಇಂದಿರಾ ಶುಚಿತ್ವಕ್ಕೆ ಚಾಲನೆ ನೀಡಿದರು.
ಪಾಕಂ-ಪೆರಿಯ ರಸ್ತೆ ಬದಿಗಳ ಶುಚೀಕರಣಕ್ಕೆ ಅವರು ನೇತೃತ್ವ ವಹಿಸಿದ್ದರು. ಎರಡೂ ದಿನಗಳಲ್ಲಿ 16 ವಾರ್ಡ್ಗಳ ಶುಚೀಕರಣ ನಡೆದಿದೆ.
ಬಳಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಶುಚೀಕರಣಕ್ಕೆ ಎvತ್ತೋಡ್ ವಾರ್ಡ್ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷರು ಚಾಲನೆ ನೀಡಿದರು. ವೆಸ್ಟ್ ಏಳೇರಿಯಲ್ಲಿ ಅಧ್ಯಕ್ಷೆ ಪ್ರಸೀತಾ ರಾಜನ್ ಅವರ ನೇತೃತ್ವದಲ್ಲಿ, ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ನಲ್ಲಿ ಆಯಾ ಜನಪ್ರತಿನಿಧಿಗಳ ನೇತೃತ್ವದಲ್ಲಿ ಶುಚೀಕರಣ ನಡೆದುವು.
ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ ಶುಚೀಕರಣಕ್ಕೆ ಅಧ್ಯಕ್ಷ ವಿ.ವಿ.ರಮೇಶನ್ ಚಾಲನೆ ನೀಡಿದರು. ಮನೆ ಮನೆ ಸಂದರ್ಶನ ನಡೆಸಿ ಶುಚೀಕರಣ ಜಾಗೃತಿ ಸಂದೇಶ ನೀಡಲಾಯಿತು.
ರವಿವಾರ ಶುಚೀಕರಣ ಯಜ್ಞ ಸಮಾರೋಪಗೊಂಡಿತು. ಮೇ 9 ರಂದು ಜಿಲ್ಲಾಡಳಿತೆ ನೇತೃತ್ವದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ನಡೆಸಲಾದ ಶುಚೀಕರಣ ಕಾಯಕವೂ ಯಶಸ್ವಿಯಾಗಿತ್ತು. 4 ಸಾವಿರಕ್ಕೂ ಅಧಿಕ ಮಂದಿ ಸೇರಿ ನಡೆಸಿದ್ದ ಆ ಕಾಯಕದಲ್ಲಿ 15 ಟನ್ಗೂ ಅಧಿಕ ತ್ಯಾಜ್ಯ ಸಂಗ್ರಹಿಸಲಾಗಿತ್ತು.