ಕಮ್ಯೂನಿಸ್ಟ್ ಭದ್ರ ಕೋಟೆಯಿಂದ ಸಚಿವ ಸಂಪುಟಕ್ಕೆ ಮುರಳೀಧರನ್
Team Udayavani, Jun 1, 2019, 6:10 AM IST
ಕಾಸರಗೋಡು: ನರೇಂದ್ರ ಮೋದಿ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ರಾಜ್ಯಸಭಾ ಸದಸ್ಯ ಕೇರಳದ ಮುರಳೀಧರನ್ ಮಾತ್ರವೇ ಸ್ಥಾನ ಪಡೆದಿದ್ದು, ಅವರಿಗೆ ಸಹಾಯಕ ವಿದೇಶಾಂಗ ಸಚಿವ (ರಾಜ್ಯ ಖಾತೆ) ಖಾತೆಯ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ.
ಕಮ್ಯೂನಿಸ್ಟ್ ಭದ್ರ ಕೋಟೆಯಾದ ಕಣ್ಣೂರು ಜಿಲ್ಲೆಯ ತಲಶೆÏೕರಿ ನಿವಾಸಿಯಾಗಿರುವ ವಿ. ಮುರಳೀಧರನ್ ಓರ್ವ ಉತ್ತಮ ಸಂಘಟಕ ಮಾತ್ರವಲ್ಲದೆ ಮೋದಿ, ಅಮಿತ್ ಷಾ ಮತ್ತು ಆರ್ಎಸ್ಎಸ್ನ ನಂಬಿಗಸ್ಥ. ಅವರು ಈ ಹಿಂದೆ ಬಿಜೆಪಿ ಕೇರಳ ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಬಳಿಕ ಅವರನ್ನು ಮಹಾರಾಷ್ಟ್ರದಿಂದ ರಾಜ್ಯ ಸಭಾ ಸದಸ್ಯರನ್ನಾಗಿ ಆರಿಸಲಾಯಿತು.
ವಿದ್ಯಾರ್ಥಿ ಜೀವನದಲ್ಲೇ ಎಬಿವಿಪಿ ಸಕ್ರಿಯ ಕಾರ್ಯ ಕರ್ತರಾಗಿದ್ದ ಮುರಳೀ ಧರನ್ ಅವರು ಎಬಿವಿಪಿ ತಲಶೆರಿ ತಾಲೂಕು ಕಾರ್ಯದರ್ಶಿ, ಕಣ್ಣೂರು ಜಿಲ್ಲಾ ಪ್ರಮುಖ್, ರಾಜ್ಯ ಜತೆ ಕಾರ್ಯ ದರ್ಶಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
1998ರಲ್ಲಿ ಕೇಂದ್ರದಲ್ಲಿ ವಾಜಪೇಯಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮುರಳೀಧರನ್ ಅವರನ್ನು ನೆಹರೂ ಯುವ ಕೇಂದ್ರದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಬಳಿಕ ಮಹಾ ನಿರ್ದೇಶಕ ರನ್ನಾಗಿಯೂ ಆರಿಸಲಾಗಿತ್ತು. 2009ರಿಂದ 2015ರ ತನಕ ಅವರು ಬಿಜೆಪಿಯ ಕೇರಳ ಘಟಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಕೇರಳದಲ್ಲಿ ಬಿಜೆಪಿಯನ್ನು ಬಲ ಪಡಿಸಲು ಅವರು ಕಾಸರಗೋಡಿನಿಂದ ತಿರುವನಂತಪುರ ತನಕ 45 ದಿನಗಳ ಕಾಲ್ನಡೆ ಯಾತ್ರೆಯನ್ನೂ ನಡೆಸಿದ್ದರು. 2009ರಲ್ಲಿ ಕಲ್ಲಿಕೋಟೆ ಲೋಕಸಭಾ ಕ್ಷೇತ್ರ ಮತ್ತು 2016ರಲ್ಲಿ ತಿರುವನಂತಪುರದ ಕಳಕ್ಕೂಟ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
1958 ರಲ್ಲಿ ತಲಶೆÏೕರಿ ವಣ್ಣಾನ್ ವೀಟಿಲ್ ಗೋಪಾಲನ್-ದೇವಕಿ ದಂಪತಿಯ ಪುತ್ರನಾಗಿ ಜನಿಸಿದ ಮುರಳೀಧರನ್ ತಲಶೆÏೕರಿ ಬ್ರನ್ನನ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದರು. ಡಾ| ಕೆ.ಎಸ್. ಜಯಶ್ರೀ ಅವರ ಪತ್ನಿಯಾಗಿದ್ದು, ಅವರು ಕಾಲೇಜು ಪ್ರಾಧ್ಯಾಪಿಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಮತ್ತು ಮೋದಿ ನೇತೃತ್ವದ ಒಂದನೇ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ರಾಜ್ಯಸಭಾ ಸದಸ್ಯ ಅಲ್ಫೋನ್ಸಾ ಕಣ್ಣಂತಾನಂ ಅವರಿಗೂ ಸಚಿವ ಸ್ಥಾನ ಲಭಿಸಬಹುದೆಂದು ನಿರೀಕ್ಷಿಸಲಾಗಿತ್ತಾದರೂ ಆ ನಿರೀಕ್ಷೆ ಈಡೇರಲಿಲ್ಲ.