ವೃದ್ದ ದಂಪತಿಗೆ ಹಲ್ಲೆ ಪ್ರಕರಣ; ಹಲ್ಲೆಗೊಳಗಾದವರ ಮೇಲೆಯೇ ಪ್ರಕರಣ ದಾಖಲಿಸುವ ಹುನ್ನಾರ: ಆರೋಪ
Team Udayavani, Mar 26, 2024, 3:36 PM IST
ಮಂಗಳೂರು: ವಿಟ್ಲ ಠಾಣಾ ವ್ಯಾಪ್ತಿಯ ಮನೇಲದಲ್ಲಿ ಚರ್ಚ್ ಪಾದ್ರಿಯೋರ್ವರು ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದವರ ಮೇಲೆಯೇ ಪ್ರಕರಣ ದಾಖಲಿಸುವ ಷಡ್ಯಂತ್ರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಲ್ಲೆಗೊಳಗಾದ ಗ್ರೆಗೊರಿ ಮೊಂತೆರೊ ಅವರು, ” ನಮ್ಮನ್ನು ಚರ್ಚ್ ನ ವಾಟ್ಸಪ್ ಗ್ರೂಪ್ ನಿಂದ ತೆಗೆದು ಹಾಕಲಾಗಿದೆ. ಬಹಿಷ್ಕರಿಸುವ ಪ್ರಯತ್ನ ನಡೆದಿದೆ. ಅಲ್ಲದೆ ನಮ್ಮ ಮೇಲೆಯೇ ದೂರು ದಾಖಲಿಸುವ ಸಂಚು ನಡೆಯುತ್ತಿದೆ. ವರ್ಷದ ವಂತಿಗೆ ಪಾವತಿ ವಿಚಾರವಾಗಿ ಪಾದ್ರಿ ನಮ್ಮ ಮೇಲೆ ಹಲ್ಲೆನಡೆಸಿದ್ದರು. ಅವರ ಮೇಲೆ ಯಾವುದೇ ಕ್ರಮ ಜರಗಿಸಿಲ್ಲ” ಎಂದು ಹೇಳಿದರು.
ಗ್ರೆಗೊರಿ ಅವರ ಪತ್ನಿ ಫಿಲೋಮಿನಾ ಮಾತನಾಡಿ ಚರ್ಚ್ ನ ಹಣ ನೀಡಲು ಪಾದ್ರಿ ಬಳಿ ಹೋಗಿದ್ದಾಗ ಅವರು ಗೆಟ್ ಔಟ್ ಎಂದಿದ್ದರು. ಆ ಬಳಿಕ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದರು.
ಸಾಮಾಜಿಕ ಕಾರ್ಯಕರ್ತರಾದ ರೋಬರ್ಟ್ ರೊಜಾರಿಯೊ ಕಾಮತ್ ಮತ್ತು ಮೌರಿಸ್ ಮಸ್ಕರೇನಸ್ ಮಾತನಾಡಿ, ಘಟನೆ ನಡೆದ ಬಳಿಕ ಒತ್ತಡ ಹಾಕಿದ ನಂತರವಷ್ಟೆ ಎಫ್ ಐ ಆರ್ ದಾಖಲಾಗಿದೆ. ಆ ಬಳಿಕ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬದಲಾಗಿ ವೃದ್ದ ದಂಪತಿಗೆ ಸಹಾಯ ಮಾಡಿದವರನ್ನು ಮಟ್ಟ ಹಾಕುವ ಪ್ರಯತ್ನ ನಡೆದಿದೆ ಎಂದು ದೂರಿದರು.