ಚಿತ್ರಾಪುರ: ಬ್ರಹಕಲಶೋತ್ಸವಕ್ಕೆ ಹರಿದು ಬರುತ್ತಿರುವ ಭಕ್ತ ಸಾಗರ
ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇಗುಲ
Team Udayavani, Mar 11, 2023, 10:30 AM IST
ಚಿತ್ರಾಪುರ: ಸಪ್ತ ದುರ್ಗೆಯರಲ್ಲಿ ಹಿರಿಯಕ್ಕ ಎಂದೇ ಕರೆಸಿಕೊಳ್ಳುವ ಸಮುದ್ರ ತೀರಾಭಿಮುಖವಾಗಿ ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರಾಪುರ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಮಾ. 13ರಂದು ಬ್ರಹ್ಮಕಲಶೋತ್ಸವ ನಡೆಯಲಿದ್ದು, ಮಾ. 5ರಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರುತ್ತಾ ಬರುತ್ತಿದೆ.
ನಿತ್ಯವೂ ಭಕ್ತ ಸಾಗರ ಚಿತ್ರಾಪುರದೆಡೆಗೆ ಹರಿದು ಬರುತ್ತಿದೆ. ಜೀರ್ಣೋದ್ಧಾರಗೊಂಡ ವಾಸ್ತು ಶಿಲ್ಪ ರಚನೆಯ ದೇವಸ್ಥಾನವನ್ನು ಕಂಡು ಸಂಭ್ರಮಿಸಿ, ದೇವಿಯ ದರ್ಶನ ಮಾಡುತ್ತಿದ್ದಾರೆ.
ನಿತ್ಯ ಆರೇಳು ಸಾವಿರ ಭಕ್ತರಿಂದ ಅನ್ನಪ್ರಸಾದ ಸ್ವೀಕಾರ, ಬಂದ ಭಕ್ತರಿಗೆ ಫಲಹಾರ ಹೀಗೆ ಆತಿಥ್ಯವೂ ಭರ್ಜರಿಯಾಗಿ ನಡೆಯುತ್ತಿದೆ. ಸ್ವಯಂ ಸೇವಕರ ತಂಡ ಹಗಲಿರುಳು ಅನ್ನಛತ್ರ, ವಾಹನ ನಿಲುಗಡೆ, ಹೊರೆಕಾಣಿಕೆ ಕೇಂದ್ರ ದೇವತಾ ಕಾರ್ಯದಲ್ಲಿ ಶ್ರಮಿಸುತ್ತಿದೆ. ನೂರಾರು ಪಾಕ ತಜ್ಞರು ಬರುವ ಭಕ್ತರಿಗೆ ಅನ್ನದಾಸೋಹದ ಕೈಂಕರ್ಯದಲ್ಲಿ ನಿರತರಾಗಿದ್ದಾರೆ.
ಹೊರೆ ಕಾಣಿಕೆ ಸಮರ್ಪಣೆ
ಹೊರೆ ಕಾಣಿಕೆ ಕೇಂದ್ರವು ತುಂಬಿದ್ದು, ಸರ್ವ ಭಕ್ತರು, ವಿವಿಧ ಸಂಘ – ಸಂಸ್ಥೆ, ಮೊಗವೀರ ಸಮುದಾಯ ಹೀಗೆ ಹೊರೆ ಕಾಣಿಕೆ ತಂದು ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾವಿರ ಸಂಖ್ಯೆಯಲ್ಲಿ ಭಕ್ತರು ಸೇರಿ ಪ್ರೋತ್ಸಾಹಿಸುತ್ತಿದ್ದಾರೆ. ವಿವಿಧ ಭಜನ ಮಂಡಳಿಗಳಿಂದ ದಾಖಲೆಯ ಭಜನೆ ಕಾರ್ಯಕ್ರಮವೂ ಇಲ್ಲಿ ನೆರವೇರುತ್ತಿದೆ.
ರವಿವಾರ ಚಂಡಿಕಾಯಾಗ, ಸೋಮ ವಾರ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮಂಗಳೂರು, ಉಡುಪಿ ಸಹಿತ ವಿವಿಧೆಡೆಯಿಂದ ಭಕ್ತರು ಹರಿದು ಬರುವ ಸಾಧ್ಯತೆ ಇರುವುದರಿಂದ ಭರದ ಸಿದ್ಧತೆಯನ್ನು ಮಾಡಲಾಗಿದೆ.
ಇಂದು ಧ್ವಜ ಪ್ರತಿಷ್ಠೆ
ಶುಕ್ರವಾರ ಕ್ಷೇತ್ರದಲ್ಲಿ ಬೆಳಗ್ಗೆ 7ಕ್ಕೆ ಧ್ವಜಪ್ರತಿಷ್ಠೆ, ಕಲಶಾಭಿಷೇಕ, ಗಣಪತಿ ಶಾಸ್ತಾ ದೇವರಿಗೆ ಬ್ರಹ್ಮಕುಂಭ ಸಹಿತ ಅಷ್ಟೋತ್ತರ ಸತಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ ತುಳು ಜನಪದ ನಾಟಕ ಮಾರಿಯಮ್ಮ ಪ್ರದರ್ಶನವಾಗಲಿದೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.
ಶ್ರೀ ಗಣಪತಿ, ಶಾಸ್ತಾ, ಧೂಮಾವತಿ ದೈವದ ಪ್ರತಿಷ್ಠೆ
ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ನೂತನ ಶಿಲಾಮಯ ಗುಡಿಯಲ್ಲಿ ಶ್ರೀ ಗಣಪತಿ ಮತ್ತು ಶಾಸ್ತಾ ಹಾಗೂ ಧೂಮಾವತಿ ದೈವದ ಪ್ರತಿಷ್ಠೆ ಕಾರ್ಯಕ್ರಮ ಚಿತ್ರಾಪುರ ಮಠದ ಶ್ರೀ ವಿದ್ಯೆàಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕುಡುಪು ವೇ| ಮೂ| ನರಸಿಂಹ ತಂತ್ರಿಗಳ ಪೌರೋಹಿತ್ಯದಲ್ಲಿ ಗುರುವಾರ ನೆರವೇರಿತು. ಪ್ರತೀದಿನ ಸಂಜೆ 5ರಿಂದ ಸಾಮೂಹಿಕ ಕುಂಕುಮಾಂರ್ಚನೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ