‘ಸಮಾಜಕ್ಕೆ ಸೇವೆ ನೀಡುವ ಮನಸ್ಸಿರಲಿ’
Team Udayavani, Jun 13, 2018, 12:56 PM IST
ಕೂಳೂರು : ವಿದ್ಯಾರ್ಥಿಗಳು ವೃತ್ತಿಪರ ಶೈಕ್ಷಣಿಕ ಕಲಿಕೆ ಮುಗಿದ ಬಳಿಕ ಹಣ ಗಳಿಸುವಿಕೆಯೊಂದನ್ನೇ ಗುರಿಯಾಗಿಸದೆ ಸಮಾಜಕ್ಕೂ ಸೇವೆ ನೀಡುವ ಮನಸ್ಸು ಬೆಳೆಸಿಕೊಳ್ಳಬೇಕು ಎಂದು ಶಾಸಕ ಡಾ| ವೈ. ಭರತ್ ಶೆಟ್ಟಿ ಹೇಳಿದರು. ಕೂಳೂರು ಪಂಜಿಮೊಗರುವಿನಲ್ಲಿರುವ ಡಾ| ಎಂ.ವಿ.ಶೆಟ್ಟಿ ಕಾಲೇಜಿನಲ್ಲಿ ಆಯೋಜಿಸಲಾದ ಸ್ಥಾಪಕರ ದಿನಾಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ವಿದ್ಯಾರ್ಥಿಗಳು ಕನಸು ಕಾಣಬೇಕು. ಆ ಕನಸನ್ನು ಗುರಿಯಾಗಿಸಿ ಮುಂದಡಿಯಿಟ್ಟಾಗ ಯಶಸ್ಸು ಕಾಣಲು ಸಾಧ್ಯವಿದೆ. ಸಮಾಜದಿಂದ ಸಹಾಯ ಪಡೆದ ನಾವು ಸಮಾಜಕ್ಕೆ ಕಿಂಚಿತ್ತಾದರೂ ಸೇವೆ ಅರ್ಪಿಸಿ ಕೃತಾರ್ತರಾಗಿ ಎಂದರು.
ದೇಶಭಕ್ತಿ ಇರಲಿ
ದೇಶ ಭಕ್ತಿಯನ್ನು ಬೆಳೆಸಿಕೊಂಡರೆ ಸಮಾಜ ಸೇವೆ ಮಾಡಲು ಪ್ರೇರಣೆ ಸಿಗುತ್ತದೆ. ವಿದ್ಯಾರ್ಥಿಗಳು ಉತ್ತಮ ವಿಚಾರಗಳನ್ನು ಬೆಳೆಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಕ್ಯಾಂಪಸ್ ಕ್ವಿಲ್ಲ್ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ| ರಾಮಗೋಪಾಲ್ ಶೆಟ್ಟಿ, ಡಾ| ಹಿಮಾ ಉರ್ಮಿಳಾ ಶೆಟ್ಟಿ , ಟ್ರಸ್ಟಿಗಳಾದ ಡಾ| ರಂಜಿತ್ ಶೆಟ್ಟಿ ಶುಭ ಹಾರೈಸಿದರು. ದಿವ್ಯಾಂಜಲಿ ಶೆಟ್ಟಿ, ರೋಹಿಲಾ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರು, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲೀಲಾವತಿ ಕಾಲೇಜ್ ಆಫ್ ಎಜುಕೇಶನ್ ಇದರ ಪ್ರಾಂಶುಪಾಲೆ ಆರತಿ ಶೆಟ್ಟಿ ಸ್ವಾಗತಿಸಿದರು.
ಜ್ಯಾಕ್ಸನ್ ಗ್ಲೋಸ್ ವಂದಿಸಿದರು. ಸ್ಟೇಸಿ ಲೋಬೋ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳು, ಉಪನ್ಯಾಸಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.