‘ಆರೋಗ್ಯವಂತರಾಗಿರಲು ಆತ್ಮವಿಶ್ವಾಸ ಬೆಳೆಸಿ’
Team Udayavani, Jan 31, 2019, 5:17 AM IST
ಮಹಾನಗರ : ಆತ್ಮವಿಶ್ವಾಸವೇ ನಮ್ಮನ್ನು ಅನಾರೋಗ್ಯದ ಸ್ಥಿತಿಯಿಂದ ಪಾರುಮಾಡುವ ಮಹಾನ್ ಚೈತನ್ಯ ಎಂದು 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳ ನಾಧ್ಯಕ್ಷ, ಖ್ಯಾತ ವೈದ್ಯ ಡಾ| ಬಿ.ಎಂ. ಹೆಗ್ಡೆ ಆಶಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಲಾದ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಬುಧವಾರ ಸಂಜೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಯಾವುದೇ ರೋಗದ ಬಗ್ಗೆ ಭಯ ಬೇಡ. ಭಯವಿದ್ದರೆ ರೋಗ ಇನ್ನಷ್ಟು ಸಮಸ್ಯೆಗೆ ಕಾರಣವಾಗಬಹುದು. ರೋಗ ನಿವಾರಿಸಲು ದೇಹದಲ್ಲಿ ಆತ್ಮವಿಶ್ವಾಸದ ಚೈತನ್ಯವನ್ನು ಬೆಳೆಸುವ ಅಗತ್ಯವಿದೆ. ಆರೋಗ್ಯದ ಕುರಿತ ಕಾಳಜಿ ಇನ್ನಷ್ಟು ಜಾಗೃತವಾಗಿದ್ದಲ್ಲಿ ಪರಿಪೂರ್ಣ ಆರೋಗ್ಯ ದೊರೆಯಲು ಸಾಧ್ಯ ಎಂದರು.
ವ್ಯಸನಮುಕ್ತ ಸಮಾಜ ನಿರ್ಮಾಣವಾಗಲಿ
ವ್ಯಸನಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಆದ್ಯತೆಯಾಗಿರಬೇಕು. ಮನೆ ಮನೆಯಲ್ಲಿಯೂ ಈ ಕುರಿತ ಜಾಗೃತಿ ಮೂಡಬೇಕು. ಮನೆಯ ಹಿರಿಯರು ಇದನ್ನು ಪಾಲಿಸುತ್ತಾ ಬರಬೇಕು. ಮನೆಯಲ್ಲಿ ಮಕ್ಕಳ ಎದುರಲ್ಲಿ ಕುಳಿತುಕೊಂಡು ವ್ಯಸನಕ್ಕೆ ದಾಸರಾಗುವ ಪರಿಸ್ಥಿತಿ ಉಂಟಾದರೆ ಸಮಾಜಕ್ಕೆ ಅದು ಬಹುದೊಡ್ಡ ಮಾರಕ. ಇದಕ್ಕಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ವೈದ್ಯಲೋಕದಲ್ಲಿ ಇರುವ ನ್ಯೂನತೆಗಳ ಬಗ್ಗೆ ಬೆಳಕುಚೆಲ್ಲುವ ಕೆಲಸವನ್ನು ನಾನು ನಡೆಸುತ್ತಾ ಬಂದಿದ್ದೇನೆ. ಇದು ಜಾಗೃತಿಯ ಕಾರ್ಯ. ವೈದ್ಯ ಸಾಹಿತ್ಯದ ನೆಲೆಯಲ್ಲಿ ಈ ಕಾರ್ಯ ನಡೆಯುತ್ತಿದೆ ಎಂದರು.
ಪತ್ರಕರ್ತ ಮನೋಹರ ಪ್ರಸಾದ್ ಸಂವಾದದ ಸಮನ್ವಯಕಾರರಾಗಿದ್ದರು. ಆಕಾಶವಾಣಿಯ ಸಹಾಯಕ ನಿರ್ದೇಶಕಿ ಉಷಾಲತಾ ಸರಪಾಡಿ, ಉಡುಪಿ ಬಳಕೆದಾರರ ವೇದಿಕೆಯ ಎಚ್. ಶಾಂತಾರಾಜ ಐತಾಳ, ಪ್ರೊ| ಎಂ. ಬಾಲಕೃಷ್ಣ ಶೆಟ್ಟಿ, ಪತ್ರಕರ್ತ ಮಹಮ್ಮದ್ ಆರೀಫ್ ಪಡುಬಿದ್ರಿ, ಕಲಾವಿದ, ಸಂಘಟಕ ಭಾಸ್ಕರ ರೈ ಕುಕ್ಕುವಳ್ಳಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು. ಡಾ| ಪದ್ಮನಾಭ ಭಟ್ ಎಕ್ಕಾರು ಸ್ವಾಗತಿಸಿದರು.