ಹೆದ್ದಾರಿ ಬದಿ ಗುಡ್ಡ ತೆರವು; ಗೋರಿಗುಡ್ಡ ಸರ್ವಿಸ್ ರಸ್ತೆ ಸನ್ನಿಹಿತ
Team Udayavani, Aug 9, 2022, 3:00 PM IST
ಗೋರಿಗುಡ್ಡೆ: ರಾಷ್ಟ್ರೀಯ ಹೆದ್ದಾರಿ 66ರ ಪಂಪ್ ವೆಲ್-ಎಕ್ಕೂರು ಹೆದ್ದಾರಿ ನಡುವಿನ ಬಹುವಿವಾದಿತ ಗೋರಿಗುಡ್ಡೆದಲ್ಲಿರುವ ಗುಡ್ಡ ತೆರವುಗೊಳಿಸಲು ರಾ.ಹೆ. ಪ್ರಾಧಿಕಾರ ನಿರ್ಧರಿಸಿದ್ದು, ಇಲ್ಲಿ ಸುಸಜ್ಜಿತ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.
ಸುಮಾರು 10 ವರ್ಷಗಳಿ ಗೂ ಹಿಂದೆ ತಲಪಾಡಿ-ಮಂಗಳೂರು ಹೆದ್ದಾರಿ ಕಾಮಗಾರಿ ನಡೆದಿದ್ದರೂ ಗೋರಿಗುಡ್ಡೆದಲ್ಲಿ ಗುಡ್ಡ ತೆರವು ಮಾಡದ ಕಾರಣ ಹೆದ್ದಾರಿ ವಿಸ್ತರಣೆ/ಸರ್ವಿಸ್ ರಸ್ತೆ ಆಗಿರಲಿಲ್ಲ. ಪಂಪ್ವೆಲ್ನಿಂದ ಎಕ್ಕೂರು ಕಡೆಗೆ ಸುಮಾರು 1 ಕಿ.ಮೀ. ಉದ್ದಕ್ಕೆ ಮಾತ್ರ ಸರ್ವಿಸ್ ರಸ್ತೆ ಕಾಮಗಾರಿ ನಡೆಸಲಾಯಿತಾದರೂ ಗುಡ್ಡ ಇರುವುದರಿಂದ ಕಾಮಗಾರಿಯನ್ನು ಅಲ್ಲಿಗೆ ಸ್ಥಗಿತಗೊಳಿಸಲಾಗಿತ್ತು.
ಇದೀಗ ಪಂಪ್ವೆಲ್ನಿಂದ ಗೋರಿಗುಡ್ಡೆದವರೆಗೆ ಮಾತ್ರ ಇರುವ ಸರ್ವಿಸ್ ರಸ್ತೆಯನ್ನು ಎಕ್ಕೂರು ವರೆಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ತೊಡಕಾಗಿದ್ದ ಗುಡ್ಡ ತೆರವು ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ ಸಂಚಾರಕ್ಕೆ ಅನುಕೂಲವಾಗಲು ಎಕ್ಕೂರು-ಪಂಪ್ವೆಲ್ ಮಧ್ಯೆ ರಸ್ತೆ ವಿಸ್ತರಣೆ ಸಾಕಾರವಾಗಲಿದೆ.
ಉಳ್ಳಾಲದ ನೀರಿನ ಪೈಪ್ಲೈನ್ ಸವಾಲು!
ತುಂಬೆ ವೆಂಟೆಡ್ ಡ್ಯಾಂನಿಂದ ಉಳ್ಳಾಲ ವ್ಯಾಪ್ತಿಗೂ ಕುಡಿಯುವ ನೀರಿನ ಸಂಪರ್ಕವಿದೆ. ನಿತ್ಯ ಸುಮಾರು 1.60 ಎಂಎಲ್ಡಿ ನೀರು ಸರಬರಾಜಾಗುತ್ತದೆ. ಇದಕ್ಕೆ ಪಡೀಲ್ ಪಂಪ್ಹೌಸ್ನಿಂದ ಪ್ರತ್ಯೇಕ ಪೈಪ್ಲೈನ್ ಅನ್ನು ಉಳ್ಳಾಲಕ್ಕೆ ಹಾಕಲಾಗಿದೆ. ಎಡಿಬಿ 1 ಯೋಜನೆಯಡಿ 2009ರಲ್ಲಿ ಪೈಪ್ಲೈನ್ ಅಳವಡಿಸಲಾಗಿತ್ತು. 500 ಎಂಎಂ ವ್ಯಾಸದ ಈ ಪೈಪ್ ಗೋರಿಗುಡ್ಡೆದ ಗುಡ್ಡದ ಭಾಗದಲ್ಲಿ ಅಳವಡಿಸಲಾಗಿದೆ. ಹೀಗಾಗಿ ಗುಡ್ಡ ತೆರವು ಮಾಡುವುದು ಇಲ್ಲಿ ಸವಾಲಿನ ಕೆಲಸವಾಗಿದೆ.
ಹೆದ್ದಾರಿ ಇಲಾಖೆ-ಪಾಲಿಕೆ ಸಭೆ
ಮೇಯರ್ ಪ್ರೇಮಾನಂದ ಶೆಟ್ಟಿ “ಸುದಿನ’ ಜತೆಗೆ ಮಾತನಾಡಿ, “ಹಲವು ಕಾಲದಿಂದ ಬಾಕಿಯಾಗಿರುವ ಗೋರಿಗುಡ್ಡೆ ಸರ್ವಿಸ್ ರಸ್ತೆ ನಿರ್ಮಾಣ, ಇದಕ್ಕಾಗಿ ಗುಡ್ಡ ತೆರವು ಮಾಡಲು ತೀರ್ಮಾ ನವಾಗಿದೆ. ಆದರೆ ತಾಂತ್ರಿಕ ಕಾರಣದಿಂದ ಬಾಕಿಯಾಗಿದೆ. ಈ ಬಗ್ಗೆ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಾರದೊಳಗೆ ಸಭೆ ನಡೆಸಲಾಗುವುದು’ ಎಂದರು.
ಮಳೆ ಮುಗಿದ ತತ್ಕ್ಷಣ ತೆರವು
ಸ್ಥಳೀಯ ಕಾರ್ಪೋರೆಟರ್ ಸಂದೀಪ್ ಗರೋಡಿ ಅವರು, “ಸುದಿನ’ ಜತೆಗೆ ಮಾತನಾಡಿ, “ಗೋರಿಗುಡ್ಡೆದ ಗುಡ್ಡ ತೆರವಿಗೆ ತೀರ್ಮಾನವಾಗಿದೆ. ಆದರೆ ಇದೇ ಭಾಗದಿಂದ ಉಳ್ಳಾಲ ಭಾಗಕ್ಕೆ ಕುಡಿ ಯುವ ನೀರಿನ ಬೃಹತ್ ಪೈಪ್ಲೈನ್ ಹೋಗಿರುವ ಹಿನ್ನೆಲೆಯಲ್ಲಿ ತತ್ಕ್ಷಣ ತೆರವಿಗೆ ಸಮಸ್ಯೆಯಾಗಿತ್ತು. ಆದರೆ ಮುನ್ನೆಚ್ಚರಿಕೆ ಕ್ರಮದೊಂದಿಗೆ ಈ ಬಾರಿ ಮಳೆ ಮುಗಿದ ತತ್ಕ್ಷಣವೇ ಗುಡ್ಡ ತೆರವು ಮಾಡಲಾಗುತ್ತದೆ’ ಎಂದರು.
ಅಪಾಯಕಾರಿ ಗೋರಿಗುಡ್ಡೆ ಜಂಕ್ಷನ್
ಗೋರಿಗುಡ್ಡೆ ಜಂಕ್ಷನ್ ಬಳಿ ಹೆದ್ದಾರಿ ಅಗಲಕ್ಕಿರಿದಾಗಿದೆ. ಅಲ್ಲದೆ ಇಲ್ಲಿ ಹೆದ್ದಾರಿ ನಿರ್ಮಾಣ ಸಮರ್ಪಕವಾಗಿ ನಡೆದಿಲ್ಲ. ಇಲ್ಲಿ 4-5 ಕಡೆಗಳಿಂದ ವಾಹನಗಳು ಬಂದು ಸೇರುತ್ತವೆ. ವಿರುದ್ಧ ದಿಕ್ಕಿನಿಂದಲೂ ವಾಹನಗಳು ಮುನ್ನುಗ್ಗುತ್ತವೆ. ಪಂಪ್ವೆಲ್ ಕಡೆಯಿಂದ ಎಕ್ಕೂರು ಕಡೆಗೆ ಸಾಗುವ ಸರ್ವಿಸ್ ರಸ್ತೆ ಗೋರಿಗುಡ್ಡೆಗಿಂತ ಮೊದಲೇ ಅರ್ಧಕ್ಕೆ ಸ್ಥಗಿತಗೊಂಡಿದೆ. ಈ ಸರ್ವಿಸ್ ರಸ್ತೆಯಿಂದ ಹೆದ್ದಾರಿ ಪ್ರವೇಶಿಸುವ ಸ್ಥಳ ಅಪಾಯಕಾರಿಯಾಗಿದೆ. ಸರ್ವಿಸ್ ರಸ್ತೆ ಕೆಳಮಟ್ಟದಲ್ಲಿದ್ದು, ಅಲ್ಲಿಂದ ಹೆದ್ದಾರಿ ಪ್ರವೇಶಿಸುವಾಗ ವಾಹನಗಳು ವೇಗ ಹೆಚ್ಚಿಸಿಕೊಳ್ಳುತ್ತವೆ. ಇತ್ತ ನಂತೂರು ಕಡೆಯಿಂದ ಹೆದ್ದಾರಿಯಲ್ಲಿ ಬರುವ ವಾಹನಗಳು ಸಹಜವಾಗಿಯೇ ವೇಗವಾಗಿ ಧಾವಿಸುತ್ತವೆ. ಈ ಎರಡೂ ರಸ್ತೆಗಳು ಸಂದಿಸುವ ಸ್ಥಳದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಈ ಮಧ್ಯೆ ಇಲ್ಲಿ ಗುಡ್ಡ ಕುಸಿಯುವ ಅಪಾಯವೂ ಇದೆ.
ರಸ್ತೆ ವಿಸ್ತರಣೆ ಅನಿವಾರ್ಯ: ಉಜ್ಜೋಡಿ ಸಮೀಪದ ಗೋರಿ ಗುಡ್ಡೆದಲ್ಲಿನ ಟ್ರಾಫಿಕ್ ಸಮಸ್ಯೆ ಪರಿಹಾರವನ್ನೇ ಕಾಣುತ್ತಿಲ್ಲ. ಸರ್ವಿಸ್ ರಸ್ತೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಟ್ರಾಫಿಕ್ ಜಾಮ್, ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಗೋರಿಗುಡ್ಡೆದ ಬಳಿ ರಸ್ತೆ ವಿಸ್ತ ರಣೆಗೊಳಿಸದಿದ್ದರೆ ಇಲ್ಲಿನ ಸಮಸ್ಯೆಗೆ ಪರಿಹಾರ ದೊರೆಯಲಾರದು. –ಡಾ| ವಿನೋದ್ ಕುಮಾರ್, ಸ್ಥಳೀಯ ನಿವಾಸಿ
ಗುಡ ಶೀಘ್ರ ತೆರವು: ಗೋರಿಗುಡ್ಡೆದಲ್ಲಿ ಗುಡ್ಡ ತೆರವು ಮಾಡಲು ಈಗಾಗಲೇ ತೀರ್ಮಾನಿಸಲಾಗಿದೆ. ರಾ.ಹೆ. ಪ್ರಾಧಿಕಾರದವರ ಜತೆಗೂ ಈ ಬಗ್ಗೆ ಮಾತುಕತೆ ನಡೆಸಲಾಗಿದೆ. ಮಳೆ ಮುಗಿದ ಕೂಡಲೇ ಕೆಲಸ ಆರಂಭಿಸಲಾಗುತ್ತದೆ. ಸರ್ವಿಸ್ ರಸ್ತೆ, ಇಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. –ವೇದವ್ಯಾಸ ಕಾಮತ್, ಶಾಸಕರು
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ