Mangaluru; ಹುಡುಗಿ ವಿಚಾರದಲ್ಲಿ ಕಾಲೇಜು ವಿದ್ಯಾರ್ಥಿಗಳಿಬ್ಬರ ಮಾರಾಮಾರಿ
Team Udayavani, Mar 21, 2024, 11:54 PM IST
ಮಂಗಳೂರು: ನಗರದ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಹುಡುಗಿ ವಿಚಾರದಲ್ಲಿ ಹೊಡೆದಾಡಿದ್ದು, ಒಬ್ಬ ಯುವಕನಿಗೆ ಮುಖದಲ್ಲಿ ರಕ್ತ ಒಸರುವ ರೀತಿ ಹೊಡೆಯಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ನೀರುಮಾರ್ಗ ಬಳಿಯ ಪಾಲ್ದನೆಯಲ್ಲಿ ಘಟನೆ ನಡೆದಿದೆ. ನಗರದ ಬಜ್ಜೋಡಿ ನಿವಾಸಿ ಯುವಕ ತಾನು ಪ್ರೀತಿಸುತ್ತಿದ್ದ ಹುಡುಗಿಯಲ್ಲಿ ಪದೇ ಪದೇ ಹಣ ಕೇಳಿ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ಯುವತಿ ತನ್ನ ನೀರುಮಾರ್ಗದ ಗೆಳೆಯನಿಗೆ ವಿಷಯ ತಿಳಿಸಿದ್ದಳು. ಇದನ್ನರಿತ ಯುವಕ ಬಜ್ಜೋಡಿಯಿಂದ ಐದಾರು ಮಂದಿ ಯುವಕರ ಜೊತೆಗೆ ಕಾರಿನಲ್ಲಿ ನೀರುಮಾರ್ಗಕ್ಕೆ ತೆರಳಿ, ಆಕೆಯ ಗೆಳೆಯನನ್ನು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಅವರ ನಡುವೆ ಹೊಡೆದಾಟ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಡುಗರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಒಬ್ಬ ಯುವಕ ಕಳೆದ ವರ್ಷ ಡಿಗ್ರಿ ಪೂರೈಸಿದ್ದರೆ, ಹಲ್ಲೆ ನಡೆಸಿದ ಯುವಕ ಈ ಸಲ ಅಂತಿಮ ಪದವಿಯಲ್ಲಿದ್ದಾನೆ ಎಂದು ತಿಳಿದು ಬಂದಿದೆ. ಎರಡೂ ಕಡೆಯ ಕುಟುಂಬಸ್ಥರು ಕಂಕನಾಡಿ ಗ್ರಾಮಾಂತರ ಠಾಣೆಗೆ ಬಂದು ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಮಾಡಿದ್ದಾರೆ. ಪೊಲೀಸರು ಮುಚ್ಚಳಿಕೆ ಬರೆಸಿ ಕಳಿಸಿಕೊಟ್ಟಿದ್ದಾರೆ.