ಜಾತ್ರೆಯಲ್ಲಿ ಪೊಳಲಿ ಚೆಂಡಿನ ವಿಶೇಷ
Team Udayavani, Mar 13, 2019, 7:16 AM IST
ಪೊಳಲಿ: ಸಾವಿರ ಸೀಮೆಗೆ ಒಳಪಟ್ಟ ಸುಮಾರು 16 ಮಾಗಣೆಗಳನ್ನು ಒಳಗೊಂಡ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯ ಒಂದು ತಿಂಗಳ ಜಾತ್ರೆಯು ವಿಶೇಷವಾಗಿದ್ದು, ಈ ಸಂದರ್ಭದ ಪೊಳಲಿ ಚೆಂಡು ಲೋಕ ಪ್ರಸಿದ್ಧವಾಗಿದೆ. ಪೊಳಲಿ ವಾರ್ಷಿಕ ಜಾತ್ರೆಯಲ್ಲಿ ಅವಭೃಥಕ್ಕಿಂತ ಏಳು ದಿವಸ ಹಿಂದೆ ಒಟ್ಟು ಐದು ದಿನಗಳ ಕಾಲ ಪೊಳಲಿ ಚೆಂಡು ನಡೆಯುತ್ತದೆ. ಇದಕ್ಕೆ ಚರ್ಮದ ಚೆಂಡನ್ನು ಬಳಸಲಾಗುತ್ತಿದ್ದು, ಇದನ್ನು ಮಿಜಾರಿನ ಕೋಬ್ಲಿರ್ ಕುಟುಂಬ ತಯಾರಿಸುತ್ತದೆ. ಅದನ್ನು ಮಿಜಾರಿನಿಂದ ಪೊಳಲಿಗೆ ತರುವ ಜವಾಬ್ದಾರಿಯನ್ನು ಕಡಪು ಕರಿಯದ ಎಣ್ಣೆ ತೆಗೆಯುವ ಕುಟುಂಬವು ನಿರ್ವಹಿಸುತ್ತದೆ.
ಸುಲ್ತಾನ್ ಕಟ್ಟೆ
ಕ್ರಿ.ಶ. 1686ರಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮ ಪೊಳಲಿ ಚೆಂಡು ಉತ್ಸವವನ್ನು ನೋಡಿ ಆಕರ್ಷಿತಳಾಗಿ ಮೂರು ದಿನಗಳ ಕಾಲ ನಡೆಯುತ್ತಿದ್ದ ಈ ಉತ್ಸವವನ್ನು ಐದು ದಿನಗಳ ಕಾಲ ನಡೆಸುವಂತೆ ಆದೇಶಿಸುತ್ತಾಳೆ. ಕ್ರಮೇಣ ಟಿಪ್ಪು ಸುಲ್ತಾನ್ ಈ ಚೆಂಡು ಉತ್ಸವವನ್ನು ತಾನು ಹಾಗೂ ಇತರರೆಲ್ಲರೂ ಸುಲಭವಾಗಿ ವೀಕ್ಷಿಸುವ ಸಲುವಾಗಿ ದೇವಾಲಯದ ಉತ್ತರ ಭಾಗದ ಎತ್ತರವಾದ ಪ್ರದೇಶದಲ್ಲಿ ನಡೆಯುವಂತೆ ಮಾಡುತ್ತಾನೆ. ಈ ಕಟ್ಟೆಯನ್ನು ಈಗಲೂ ಸುಲ್ತಾನ್ ಕಟ್ಟೆ ಎಂದು ಕರೆಯಲಾಗುತ್ತದೆ.
ದೇಶ-ವಿದೇಶಗಳಿಂದ ಭಕ್ತರು
ಬೃಹತ್ ಗಾತ್ರದ ಚರ್ಮದ ಚೆಂಡಿನ ಮೂಲಕ ನಡೆಯುವ ಈ ಪೊಳಲಿಯ ಚೆಂಡಾಟವನ್ನು ನೋಡಲು ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಕೊನೆಯ 5 ದಿನಗಳ ಕಾಲ ನಡೆಯುವ ಚೆಂಡಾಟವು ಸುತ್ತಲಿನ ಊರುಗಳ ಯುವಕರ ಮಧ್ಯೆ ಶಕ್ತಿ ಪ್ರದರ್ಶನಕ್ಕೆ ವೇದಿಕೆಯೂ ಹೌದು.
ಒಳ್ಳೆಯತನಕ್ಕೆ ಜಯ
ಆರಂಭದಲ್ಲಿ ಮಳಲಿ ಬಳ್ಳಾಲ್ ಮೈದಾನದಲ್ಲಿ ಚೆಂಡನ್ನು ತಂದು ಇಡಲಾಗುತ್ತದೆ. ಪಾಮ್ ಎಲೆಯಿಂದ ತಯಾರಿಸಲಾದ ಛತ್ರಿ ಹಾಗೂ ಚೆಂಡನ್ನು ಸಂಜೆ ದೇವಸ್ಥಾನದ ಗೋಪುರದ ಮೇಲಿಟ್ಟು ದೇವಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದ ಬಳಿಕ ಚೆಂಡನ್ನು ಆಟಕ್ಕೆ ತೆಗೆಯಲಾಗುತ್ತದೆ. ಈ ಆಟವು ಮುಖ್ಯವಾಗಿ ಅಮ್ಮುಂಜೆ ಮಣೇಲ್ ಗ್ರಾಮಗಳ ಮಧ್ಯೆ ನಡೆಯುತ್ತಿದ್ದು, ಆಟದಲ್ಲಿ ಸುಮಾರು 500 ಮಂದಿ ಭಾಗವಹಿಸುತ್ತಾರೆ. ಐತಿಹಾಸಿಕವಾಗಿ ಈ ಪೊಳಲಿ ಚೆಂಡು ಆಟದ ಮೂಲ ಉದ್ದೇಶ ಯಾವಾಗಲೂ ಕೆಟ್ಟತನದ ವಿರುದ್ಧ ಒಳ್ಳೆಯತನ ವಿಜಯಿಯಾಗುವುದಾಗಿದೆ.