Bantwala: ನೇತ್ರಾವತಿ ನದಿ ನೀರು ಏರಿಕೆ; ಆಲಡ್ಕ ಭಾಗದಲ್ಲಿ ಪ್ರವಾಹದ ಸ್ಥಿತಿ
ಕೆಲವೊಂದು ಮನೆಗಳ ಸ್ಥಳಾಂತರ
Team Udayavani, Jul 23, 2023, 2:26 PM IST
ಬಂಟ್ವಾಳ: ನಿರಂತರ ಮಳೆಯ ಪರಿಣಾಮ ನೇತ್ರಾವತಿ ನದಿ ನೀರಿನ ಮಟ್ಟ ಗಣನೀಯ ಏರಿಕೆಯಾಗಿ ಪ್ರವಾಹದ ಸ್ಥಿತಿ ಉಂಟಾಗಿದ್ದು, ಈ ಬಾರಿಯ ಮೊದಲ ಮುಳುಗಡೆ ಎಂಬಂತೆ ಪಾಣೆಮಂಗಳೂರಿನ ಆಲಡ್ಕ ಭಾಗದಲ್ಲಿ ಕೆಲವೊಂದು ಮನೆಗಳ ಸುತ್ತ ನೀರು ಆವರಿಸಿದ್ದು, ಮನೆ ಮಂದಿ ಸೊತ್ತುಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ.
ಪ್ರಸ್ತುತ ಬಂಟ್ವಾಳದಲ್ಲಿ ನೀರಿನ ಮಟ್ಟ 7.5 ಮೀ. ದಾಟಿದ್ದು, ಪಾಣೆಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಡಿಕೆ ತೋಟಗಳು, ಮೈದಾನಗಳಿಗೆ ಪ್ರವಾಹದ ನೀರು ಆವರಿಸಿದೆ. ಇನ್ನು ಒಂದು ಮೀಟರ್ ಏರಿಕೆಯಾದರೆ ಪ್ರವಾಹದ ಅಪಾಯದ ಮಟ್ಟವನ್ನು ತಲುಪಲಿದೆ.
ಈಗಾಗಲೇ ಪಾಣೆಮಂಗಳೂರಿನ ಶಾರದಾ ಹೈಸ್ಕೂಲ್, ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ತಾಲೂಕು ಆಡಳಿತ ಅವರ ಸ್ಥಳಾಂತರ ವ್ಯವಸ್ಥೆಗಳನ್ನು ಕೈಗೊಂಡಿದೆ.