ಫೆ. 14-16: ಬೊಂಡಾಲ ಯಕ್ಷಗಾನ ಬಯಲಾಟದ ಸುವರ್ಣ ಸಂಭ್ರಮ
ತ್ರಿದಿನ ಯಕ್ಷಗಾನ ವೈಭವ, ಪ್ರಶಸ್ತಿ ಪ್ರದಾನ, ಸಮ್ಮಾನ
Team Udayavani, Feb 9, 2024, 11:29 AM IST
ಬಂಟ್ವಾಳ: ಶಂಭೂರು ಬೊಂಡಾಲ ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ ವತಿಯಿಂದ ಯಕ್ಷಗಾನ ಬಯಲಾಟದ ಸುವರ್ಣ ಸಂಭ್ರಮವು ಫೆ. 14ರಿಂದ 16ರ ವರೆಗೆ ಬೊಂಡಾಲದಲ್ಲಿ ಯಕ್ಷಗಾನ, ಮೇಳಕ್ಕೆ ಆಯುಧ ಸಮರ್ಪಣೆ ಹಾಗೂ ಬೊಂಡಾಲ ಪ್ರಶಸ್ತಿ ಪ್ರದಾನದೊಂದಿಗೆ ನಡೆಯಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಫೆ. 14ರಂದು ಬೆಳಗ್ಗೆ ಗಣಪತಿ ಹವನ, ಮೇಳದ ದೇವರ ಆಗಮನ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಮೇಳಕ್ಕೆ ಸಮರ್ಪಣೆಗೊಳ್ಳಲಿರುವ 2 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಯುಧಗಳ ಮೆರವಣಿಗೆ, ಚೌಕಿ ಪೂಜೆ, “ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಬಯಲಾಟ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೇ|ಮೂ| ಲಕ್ಷ್ಮೀನಾರಾಯಣ ಆಸ್ರಣ್ಣ ಶುಭಾಶಂಸನೆ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ವೇ|ಮೂ| ವಾಸುದೇವ ಆಸ್ರಣ್ಣ, ವೇ|ಮೂ| ವೆಂಕಟರಮಣ ಆಸ್ರಣ್ಣ, ವೇ|ಮೂ| ಹರಿನಾರಾಯಣದಾಸ ಆಸ್ರಣ್ಣ, ವೇ|ಮೂ| ಕಮಲಾದೇವಿ ಪ್ರಸಾದ ಆಸ್ರಣ್ಣ, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ, ಮಂಗ್ಲಿಮಾರ್ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆಗುತ್ತು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗೌರವಾರ್ಪಣೆ
ವಾಸುದೇವ ಕಾರಂತ ನರಿಕೊಂಬು, ದಿ| ರಾಮಚಂದ್ರ ರಾವ್ ನರಿಕೊಂಬು ಮನೆಯವರು, ಪದ್ಮನಾಭ ಮಯ್ಯ ಏಲಬೆ, ಮೇಳದ ಕಲಾವಿದರು, ಬಯಲಾಟ ಪ್ರಾರಂಭಿಸಿದ ಹಿರಿಯರ ಮನೆಯವರು, ಸಮಿತಿ ಸದಸ್ಯರು ಹಾಗೂ ಸಂಘ-ಸಂಸ್ಥೆಗಳಿಗೆ ಗೌರವಾರ್ಪಣೆ ನಡೆಯಲಿದೆ. ಫೆ. 15ರಂದು ಸಂಜೆ ಮೇಳದ ದೇವರ ಮೆರವಣಿಗೆ, ಯಕ್ಷಗಾನ “ಶ್ರೀ ದೇವಿ ಲಲಿತೋಪಾಖ್ಯಾನ’, ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಸಂಸ್ಮರಣೆ ಹಾಗೂ ಬೊಂಡಾಲ ಪ್ರಶಸ್ತಿ-2024 ಪ್ರದಾನ ಸಮಾರಂಭದಲ್ಲಿ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ವೇ|ಮೂ| ಅನಂತಪದ್ಮನಾಭ ಆಸ್ರಣ್ಣ ಶುಭಾಶಂಸನೆಗೈಯಲಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನಸಭಾ ಧ್ಯಕ್ಷ ಯು.ಟಿ. ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ನರಿಕೊಂಬು ಶ್ರೀ ನಾಲ್ಕೈತ್ತಾಯ ಪಂಜುರ್ಲಿ ನೇಮೋತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಾಲ್ ಭಾಗವಹಿಸಲಿದ್ದಾರೆ.
ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಹಾಗೂ ಸಾಲಿಗ್ರಾಮ ಮೇಳದ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರನ್ನು ಸಮ್ಮಾನಿಸಲಾಗುವುದು. ಕಟೀಲು ಮೇಳದ ಕಲಾವಿದ ಮೋಹನ ಕುಮಾರ್ ಅಮ್ಮುಂಜೆ ಅವರಿಗೆ ಬೊಂಡಾಲ ಪ್ರಶಸ್ತಿ- 2024 ಪ್ರದಾನ ಮಾಡಲಾಗುವುದು. ಫೆ. 16ರಂದು ಸಂಜೆ ಮೇಳದ ದೇವರ ಮೆರವಣಿಗೆ, “ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.
ಸಮಿತಿಯ ಪ್ರಮುಖರಾದ ಬಿ. ಸೀತಾರಾಮ ಶೆಟ್ಟಿ ಮಂಗಳೂರು, ಪದ್ಮನಾಭ ಮಯ್ಯ ಏಲಬೆ, ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ, ಸುನಾದರಾಜ್ ಶೆಟ್ಟಿ ಬೊಂಡಾಲ ಅಂತರಗುತ್ತು ಪತ್ರಿಕಾ ಗೋಷ್ಠಿಯಲ್ಲಿದ್ದರು.