ರೈಲಿನಲ್ಲಿ ಅನ್ಯಧರ್ಮೀಯ ಯುವಕರ ಜತೆ ಹಿಂದೂ ಯುವತಿಯರ ಪ್ರಯಾಣ: ಆರೋಪ
Team Udayavani, Sep 17, 2022, 7:17 AM IST
ಪುತ್ತೂರು: ಅನ್ಯ ಧರ್ಮೀಯ ಯುವಕರು ಹಾಗೂ ಹಿಂದೂ ಯುವತಿಯರು ರೈಲಿನಲ್ಲಿ ಜತೆಯಾಗಿ ಪ್ರಯಾಣಿಸುತ್ತಿರುವ ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಪುತ್ತೂರು ರೈಲು ನಿಲ್ದಾಣದಲ್ಲಿ ಗುಂಪು ಸೇರಿದ ಘಟನೆ ಸೆ. 16ರಂದು ನಡೆದಿದೆ.
ಮಧ್ಯಾಹ್ನದ ವೇಳೆ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುವ ರೈಲಿನ ಒಂದೇ ಬೋಗಿಯಲ್ಲಿ ಹಿಂದೂ ಯುವತಿಯರು ಮತ್ತು ಮುಸ್ಲಿಂ ಯುವಕರು ಪ್ರಯಾಣಿಸುತ್ತಿದ್ದ ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಪುತ್ತೂರು ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ನಗರ ಠಾಣಾ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ ಯುವಕರೊಂದಿಗೆ ಪಯಣಿಸುತ್ತಿದ್ದ ಯುವತಿಯರು ಕಾಣಿಯೂರಿನಲ್ಲಿ ರೈಲಿನಿಂದ ಇಳಿದು ಹೋಗಿದ್ದರು ಎನ್ನಲಾಗಿದೆ.
ಭಿನ್ನಧರ್ಮೀಯ ಯುವಕ-ಯುವತಿ ಅಸಭ್ಯ ವರ್ತನೆ; ಹಿಂಜಾವೇ ಆಕ್ಷೇಪ
ಪುತ್ತೂರು: ಗೃಹೋಪಯೋಗಿ ವಸ್ತುಗಳನ್ನು ಮನೆ-ಮನೆಗೆ ಮಾರಾಟ ಮಾಡುತ್ತಿದ್ದ ಅನ್ಯಕೋಮಿನ ಯುವಕ ಮತ್ತು ಹಿಂದೂ ಯುವತಿ ನಡುವಿನ ಅಸಭ್ಯ ವರ್ತನೆಯ ಕುರಿತು ಹಿಂದೂ ಸಂಘಟನೆಯು ನೀಡಿದ ಮಾಹಿತಿಯಂತೆ ಪುತ್ತೂರು ಪೊಲೀಸರು ಇಬ್ಬರನ್ನು ವಿಚಾರಣೆಗೊಳಪಡಿಸಿದ ಘಟನೆ ಸೆ. 16ರಂದು ನಡೆದಿದೆ.
ಅವರು ಕುಂದಾಪುರ ಮೂಲದ ಮತ್ತು ಪುತ್ತೂರಿನ ಸ್ಥಳೀಯ ಸಂಸ್ಥೆಯೊಂದರಲ್ಲಿ ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡುವ ತಂಡದಲ್ಲಿದ್ದು, ಪುತ್ತೂರು ಪಡೀಲ್ನ ಪಿಜಿಯಲ್ಲಿ ವಾಸ್ತವ್ಯ ಹೊಂದಿದ್ದರು.
ಈ ತಂಡದ ಪೈಕಿ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕ ತೆಂಕಿಲ ರಸ್ತೆಯಲ್ಲಿ ಹೋಂ ಪ್ರೊಡಕ್ಟ್ ಮಾರಾಟ ಮಾಡಲು ಹೋಗುತ್ತಿದ್ದ ಸಂದರ್ಭ ಅವರ ವರ್ತನೆ ಸರಿಯಿಲ್ಲ ಎನ್ನುವ ಆರೋಪ ವ್ಯಕ್ತವಾಗಿದ್ದು, ಇದನ್ನು ಆಕ್ಷೇಪಿಸಿ ಸಂಘಟನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.