JDS ದೇಶದ ಒಳಿತಿಗೆ ಎನ್ಡಿಎ ಜತೆ ಸೇರ್ಪಡೆ: ಕುಮಾರಸ್ವಾಮಿ
Team Udayavani, Dec 10, 2023, 11:06 PM IST
ಬಂಟ್ವಾಳ: ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲ ಸಂಘಟನೆಗಳು ಜತೆಯಾಗಿ ಕೆಲಸ ಮಾಡಬೇ ಕಿದ್ದು, ಹೀಗಾಗಿ ನಾವು ಎನ್ಡಿಎ ಜತೆ ಕೆಲಸ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಯಾವ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ ಎಂಬುದನ್ನು ವಿವರವಾಗಿ ತಿಳಿಸಲಿದ್ದೇವೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಹಿರಿಯ ನಾಯಕ ಎಚ್. ಡಿ.ಕುಮಾರಸ್ವಾಮಿ ಹೇಳಿದರು.
ಶನಿವಾರ ರಾತ್ರಿ ಕಲ್ಲಡ್ಕದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ಪಾಲ್ಗೊಂಡ ಬಳಿಕ ಅವರು ಪತ್ರ ಕರ್ತರ ಜತೆ ಮಾತನಾಡಿದರು. ಹಿಂದೆ ನಾವು ಜತೆಯಾಗಿ ಸರಕಾರ ಮಾಡಿದ ಸಂದರ್ಭದಿಂದಲೂ ಬಿಜೆಪಿ ನಾಯಕರ ಜತೆ ಉತ್ತಮ ಸಂಬಂಧ, ವಿಶ್ವಾಸವನ್ನು ಇಟ್ಟುಕೊಂಡಿದ್ದು, ಅದಕ್ಕೆ ಎಲ್ಲೂ ಕೂಡ ಕೊರತೆಯಾಗಿಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿಕೆಗಳನ್ನು ನೀಡಿದ್ದು, ಅದನ್ನು ಎಲ್ಲಾ ರಾಜಕೀಯ ನಾಯಕರು ಮಾಡುತ್ತಿದ್ದಾರೆ. ಟೀಕೆಗಳು ಸಾಮಾನ್ಯವಾಗಿದ್ದು, ಅದನ್ನು ಸಮಚಿತ್ತದಿಂದ ತೆಗೆದುಕೊಳ್ಳಬೇಕು ಎಂದರು.
ಆರ್ಎಸ್ಎಸ್ ಒಂದು ರೀತಿಯಲ್ಲಿ ಕೆಲಸ ಮಾಡು ತ್ತಿದ್ದು, ನಾವು ಒಂದು ರೀತಿ ಕೆಲಸ ಮಾಡುತ್ತಿದ್ದೇವೆ. ನಾಡಿನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿ ಒಳ್ಳೆದಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಡಾ| ಪ್ರಭಾಕರ ಭಟ್ ಅವರ ಶ್ರೀರಾಮ ವಿದ್ಯಾಸಂಸ್ಥೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದು ಇಲ್ಲಿಗೆ ಭೇಟಿ ನೀಡಿದ ಬಳಿಕವೇ ಗೊತ್ತಾಗಿದ್ದು, ಹಿಂದೆ ಕೆಲವರು ತಪ್ಪು ಅಭಿಪ್ರಾಯಗಳನ್ನು ನೀಡಿದ್ದರು. ದೈಹಿಕ, ಮಾನಸಿಕ ಬೆಳವಣಿ ಗೆಯ ಜತೆಗೆ ಉತ್ತಮ ಬದುಕಿನ ವಾತಾವರಣ ನೀಡುವ ಕಾರ್ಯ ಶ್ರೀರಾಮ ಶಾಲೆಯಲ್ಲಿ ನಡೆಯುತ್ತಿದೆ ಎಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಯುವ ಜೆಡಿಎಸ್ ದ.ಕ.ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಜತೆಗಿದ್ದರು.