ಮಡಪ್ಪಾಡಿಗೆ ಬೇಕಿದೆ ಆಡಳಿತದ ಶ್ರೀರಕ್ಷೆ
ಸುಳ್ಯ ತಾಲೂಕಿನ ಎರಡನೇ ಕುಗ್ರಾಮ ಎಂಬ ಕಳಂಕ ಕಳಚಲಿ
Team Udayavani, Aug 9, 2022, 1:01 PM IST
ಗುತ್ತಿಗಾರು: ಎತ್ತ ನೋಡಿದರೂ ಬರೀ ಕಾಡು, ಕೆಲವೇ ಕೆಲವು ಮನೆ ಗಳಿರುವ ಪುಟ್ಟ ಗ್ರಾಮ ಮಡಪ್ಪಾಡಿ. ತಾಲೂಕು ಕೇಂದ್ರ ಸುಳ್ಯದಿಂದ 27 ಕಿ.ಮೀ. ದೂರದಲ್ಲಿರುವ ಈ ಗ್ರಾಮ ಅಭಿವೃದ್ಧಿಯತ್ತ ಸಾಗುತ್ತಿದೆ.
1980ರಲ್ಲಿ “ಉದಯವಾಣಿ’ ಆಯೋಜಿಸಿದ್ದ ಕುಗ್ರಾಮ ಗುರುತಿಸಿ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಎರಡನೇ ಕುಗ್ರಾಮ ಎಂದು ಗುರುತಿ ಸಲ್ಪಟ್ಟಿದ್ದ ಮಡಪ್ಪಾಡಿ ಅನಂತರದಲ್ಲಿ ಆ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಶ್ರಮ ಪಡುತ್ತಿದೆ.
ಮಡಪ್ಪಾಡಿಯ ಮತ್ತೂಂದು ವಿಶೇಷತೆಯೆಂದರೆ ಈ ಗ್ರಾಮದಲ್ಲಿ ಜನಸಂಖ್ಯೆಯ ಬೆಳವಣಿಗೆ ಕಡಿಮೆ. 1980ರಲ್ಲಿ ಇಲ್ಲಿನ ಜನಸಂಖ್ಯೆ 1600ರಷ್ಟಿದ್ದು ಇತ್ತೀಚೆಗಿನ ಗಣತಿಯ ಪ್ರಕಾರ 1,727 ಇದೆ. ಈ ಬೆಳವಣಿಗೆ ದರ ಉಳಿದ ಗ್ರಾಮಗಳಿಗೆ ಹೋಲಿಸಿದಲ್ಲಿ ತೀರಾ ಕಡಿಮೆ.
ಕೇವಲ 2.5 ಸಾವಿರ ಎಕ್ರೆ ಕೃಷಿಭೂಮಿ
ಮಡಪ್ಪಾಡಿ ಗ್ರಾಮದ ಒಟ್ಟು ವಿಸ್ತೀರ್ಣ 13.5 ಸಾವಿರ ಎಕ್ರೆ. ಇದರಲ್ಲಿ 11 ಸಾವಿರ ಎಕ್ರೆಯಷ್ಟು ಮೀಸಲು ಅರಣ್ಯ ಹಬ್ಬಿಕೊಂಡಿದೆ. ಕೇವಲ 2.5 ಸಾವಿರ ಎಕ್ರೆಗಳಷ್ಟು ಮಾತ್ರ ಕೃಷಿ ಭೂಮಿ ಇದ್ದು, ಇದೇ ಭೂಮಿಯನ್ನು ಜನ ಅವಲಂಬಿಸಿಕೊಂಡು ಕೃಷಿಜೀವನ ನಡೆಸುತ್ತಿದ್ದಾರೆ.
ಅಭಿವೃದ್ಧಿಗೊಳ್ಳಬೇಕಿದೆ ಸಂಪರ್ಕ ರಸ್ತೆ
ಮಡಪ್ಪಾಡಿಯನ್ನು ಹಾದು ಹೋಗುವ ಎಲಿಮಲೆ-ಸೇವಾಜೆ-ಮಡಪ್ಪಾಡಿ- ಕಂದ್ರಪ್ಪಾಡಿ- ಗುತ್ತಿಗಾರು ಸಂಪರ್ಕ ರಸ್ತೆ ಐದು ಗ್ರಾಮಗಳ ಸಂಪರ್ಕದ ಕೊಂಡಿ. ಈ ರಸ್ತೆಯ ಕೆಲವು ಭಾಗ ಅಭಿವೃದ್ಧಿಗೊಂಡಿದ್ದರೂ ಪೂರ್ತಿ ಅಭಿವೃದ್ಧಿಯಾಗಿಲ್ಲ. ಸಂಪೂರ್ಣ ಅಭಿವೃದ್ಧಿಯಾದರೆ ವ್ಯಾವಹಾರಿಕವಾಗಿ ಹೊರ ಊರಿಗೆ ತೆರಳುವವರಿಗೆ ಅನು ಕೂಲವಾಗುತ್ತದೆ. ಈಗ ಮಡಪ್ಪಾಡಿಗೆ ಒಂದೆರಡು ಬಸ್ ಸಂಪರ್ಕ ಮಾತ್ರ ಇದೆ. ರಸ್ತೆ ಅಭಿವೃದ್ಧಿಯಾದರೆ ಬಸ್ ಓಡಾಟ ಹೆಚ್ಚಿ ಗ್ರಾಮದ ಅಭಿವೃದ್ಧಿಗೆ ಸಹಾಯಕ ವಾಗಲಿದೆ. 80ರ ದಶಕದಲ್ಲಿ ಸಾವಿರ ಆಳುಗಳ ಶ್ರಮದಲ್ಲಿ ಈ ರಸ್ತೆಯನ್ನು ಗ್ರಾಮಸ್ಥರೇ ಅಭಿವೃದ್ಧಿ ಮಾಡಿದ್ದು ಆಗಿನ ಕಾಲದಲ್ಲಿ ಬಸ್ ಸಂಪರ್ಕಕ್ಕೆ ನಾಂದಿಯಾಗಿತ್ತು ಎಂದು ಹಿರಿಯ ಗ್ರಾಮಸ್ಥರು ಈಗ ನೆನಪಿಸಿಕೊಳ್ಳುತ್ತಾರೆ. ಗ್ರಾಮದಲ್ಲಿ ಒಂದು ಪ್ರಾಥಮಿಕ ಶಾಲೆ, 2 ಕಿರಿಯ ಪ್ರಾಥಮಿಕ ಶಾಲೆ ಇದೆ.
ನೆಟ್ವರ್ಕ್ ತಲೆನೋವು
ಮಡಪ್ಪಾಡಿ ಗ್ರಾಮವು ತೀರಾ ಗುಡ್ಡಗಾಡು ಪ್ರದೇಶಗಳಿಂದ ಕೂಡಿದ್ದು ಗ್ರಾಮದ ಬಹುತೇಕ ಭಾಗಗಳಲ್ಲಿ ನೆಟ್ವರ್ಕ್ ಸಮಸ್ಯೆ ಹೇಳತೀರದು. ಹಾಡಿಕಲ್ಲು, ಕಡ್ಯ ಭಾಗಗಳಲ್ಲಿ 80 ಮನೆಗಳಿದ್ದು ಇಲ್ಲಿ ಮೊಬೈಲ್ ಸಂಪರ್ಕಕ್ಕಾಗಿ ಲಿಂಕ್ ಟವರ್ ಸ್ಥಾಪಿಸಲು ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದಲ್ಲದೆ ಇಲ್ಲಿನ ಪ್ರತೀ ತೋಟಗಳಿಗೂ ಕಾಡು ಪ್ರಾಣಿಗಳ ಹಾವಳಿ ಇದ್ದು ಕೃಷಿ ನಾಶವಾಗುತ್ತಿದೆ. ಕೆಲವೆಡೆ ಆನೆ ಕಂದಕ ಮಾಡಿದ್ದರೂ ಪೂರ್ಣಪ್ರಮಾಣದಲ್ಲಿ ಅದು ಪ್ರಯೋಜನಕ್ಕೆ ಬರುತ್ತಿಲ್ಲ.
ಕಡ್ಯದಲ್ಲಿ ಇತ್ತೀಚೆಗಷ್ಟೇ ಒಂದು ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ. ಈ ಭಾಗದಲ್ಲಿ ಕೋಟೆಗುಡ್ಡೆ ಪ್ರದೇಶದ ರಸ್ತೆ ಅಭಿವೃದ್ಧಿಯಾದರೆ ಜನರಿಗೆ ಮತ್ತಷ್ಟು ಖುಷಿಯಾಗಲಿದೆ.
ಹಳದಿ ರೋಗ
ಗ್ರಾಮದಲ್ಲಿ ಅಡಿಕೆಗೆ ಬಾಧಿಸಿದ ಹಳದಿ ರೋಗದಿಂದಾಗಿ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ. ಅವರಿಗೆ ಸೂಕ್ತ ಪರಿಹಾರ ದೊರಕಬೇಕಿದೆ. ಈ ಗ್ರಾಮವು ಸುಳ್ಯ ಠಾಣೆ ವ್ಯಾಪ್ತಿಗೆ ಬರುತ್ತಿದ್ದು ಇದನ್ನು ಸುಬ್ರಹ್ಮಣ್ಯ ಠಾಣೆಗೆ ಸೇರಿಸಬೇಕೆಂಬ ಆಗ್ರಹವಿದೆ. ಒಟ್ಟಾರೆ ಪುಟ್ಟ ಗ್ರಾಮ ಮಡಪ್ಪಾಡಿ ಅಭಿವೃದ್ಧಿಗೆ ತೆರೆದುಕೊಳ್ಳಲು ಜನಪ್ರತಿನಿಧಿಗಳು, ಸರಕಾರ ಪೂರಕವಾಗಿ ಸ್ಪಂದಿಸಬೇಕಿದೆ.
ದೇಗುಲ, ಮಸೀದಿ, ಚರ್ಚ್ ಇಲ್ಲ
ಮಡಪ್ಪಾಡಿ ಗ್ರಾಮದಲ್ಲಿ ದೇವಸ್ಥಾನ, ಮಸೀದಿ, ಚರ್ಚ್ಗಳಿಲ್ಲ. ಗ್ರಾಮದಲ್ಲಿ ಬಹುಮುಖ್ಯವಾಗಿ ಆರಾಧಿಸಿಕೊಂಡು ಬರುತ್ತಿರುವ ಮಡಪ್ಪಾಡಿ ಉಳ್ಳಾಕುಲು ದೈವಸ್ಥಾನ ಹೊರತುಪಡಿಸಿದರೆ ಗ್ರಾಮದೇವರಾಗಿ ಇಲ್ಲಿಯ ಜನ ಗುತ್ತಿಗಾರು ಗ್ರಾಮದಲ್ಲಿರುವ ವಳಲಂಬೆ ಶಂಖಪಾಲ ಸುಬ್ರಹ್ಮಣ್ಯನನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಗ್ರಾಮದ ಕಡ್ಯ ಎಂಬಲ್ಲಿ ಮಂಜುನಾಥ ಸ್ವಾಮಿಯ ಸನ್ನಿಧಿ ಇದೆ ಎಂದು ಹೇಳಲಾಗುತ್ತಿದ್ದರೂ ಯಾವುದೇ ಪೂರಕ ಕುರುಹುಗಳಾಗಲಿ, ದಾಖಲೆಗಳಾಗಲಿ ಲಭ್ಯವಿಲ್ಲ.
ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ: ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಗ್ರಾಮದಲ್ಲಿ ನೆಟ್ವರ್ಕ್, ರಸ್ತೆ, ಸಂಚಾರ, ವಿದ್ಯುತ್ ಸಮಸ್ಯೆ ಇದ್ದು ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆ ಪರಿಹರಿಸಲು ಕ್ರಮ ವಹಿಸುತ್ತಿದ್ದೇವೆ. ಗ್ರಾಮದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. –ಮಿತ್ರದೇವ ಮಡಪ್ಪಾಡಿ, ಗ್ರಾ.ಪಂ. ಅಧ್ಯಕ್ಷರು, ಮಡಪ್ಪಾಡಿ
ಗ್ರಾಮದ ಅಗತ್ಯಕ್ಕೆ ನೆರವು: ಮಡಪ್ಪಾಡಿಯಲ್ಲಿ ಕಳೆದ 8 ವರ್ಷಗಳಿಂದ 12 ಮಂದಿಯ ಮಹಾತ್ಮಾಗಾಂಧಿ ಗ್ರಾಮಸೇವಾ ತಂಡ ತನ್ನ ಶ್ರಮದಾನದ ಮೂಲಕ ಗಮನ ಸೆಳೆದಿದೆ. ತಂಡದ ವತಿಯಿಂದ 235 ಶ್ರಮದಾನ ಸೇವೆ ನಡೆಸಿ ಗ್ರಾಮದ ಅಗತ್ಯಕ್ಕೆ ನೆರವಾಗುತ್ತಿದೆ –ಎಂ. ಡಿ. ವಿಜಯಕುಮಾರ್, ಮಹಾತ್ಮಾಗಾಂಧಿ ಗ್ರಾಮಸೇವಾ ತಂಡದ ಸದಸ್ಯ
-ಕೃಷ್ಣಪ್ರಸಾದ್ ಕೋಲ್ಚಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ