ಮಂಗನ ಕಾಯಿಲೆ: ಕೀಟಶಾಸ್ತ್ರಜ್ಞರಿಂದ ಉಣ್ಣಿ ಸಂಗ್ರಹ
Team Udayavani, Jan 24, 2019, 5:45 AM IST
ಕಡಬ: ವಾರದ ಹಿಂದೆ ಮಂಗನ ಶವ ಪತ್ತೆಯಾಗಿದ್ದ ರಾಮಕುಂಜ ಗ್ರಾ.ಪಂ. ವ್ಯಾಪ್ತಿಯ ಹಳೆನೇರೆಂಕಿ ಗ್ರಾಮದ ಕದ್ರಕ್ಕೆ ಮಂಗಳೂರಿನ ಕೀಟಶಾಸ್ತ್ರಜ್ಞರು ಭೇಟಿ ನೀಡಿ ಮಂಗ ಸತ್ತು ಬಿದ್ದಿದ್ದ ಪ್ರದೇಶದಲ್ಲಿ ಕಂಡು ಬಂದ ಉಣ್ಣಿಗಳನ್ನು ಸಂಗ್ರಹಿಸಿ ಕೊಂಡೊಯ್ದಿದ್ದಾರೆ.
ಹಳೆನೇರೇಂಕಿ ಗ್ರಾಮದ ಕದ್ರ ನಿವಾಸಿ ಆದಂ ಅವರ ತೋಟದಲ್ಲಿ ಜ. 16ರಂದು ಮಂಗನ ಶವ ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಇಲಾಖಾಧಿಕಾರಿಗಳ ತಂಡ ಹಾಗೂ ಉಜಿರೆಯ ಕ್ಯಾಸನೂರು ಕಾಡಿನ ಕಾಯಿಲೆ ಕ್ಷೇತ್ರ ಘಟಕದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತಪಾಸಣೆಗಾಗಿ ಮಂಗನ ಅಂಗಾಂಗಗಳನ್ನು ಶಿವಮೊಗ್ಗದ ಮಂಗನ ಕಾಯಿಲೆ ತಪಾಸಣ ಕೇಂದ್ರಕ್ಕೆ ರವಾನಿಸಿತ್ತು. ಜ. 22ರಂದು ಮಂಗಳೂರಿನ ಕೀಟ ಶಾಸ್ತ್ರಜ್ಞರ ತಂಡ ಮಂಜುಳಾ ಅವರ ನೇತೃತ್ವದಲ್ಲಿ ಭೇಟಿ ನೀಡಿ ಮಂಗ ಸತ್ತು ಬಿದ್ದ ಪ್ರದೇಶದ ಉಣ್ಣಿಗಳನ್ನು ಸಂಗ್ರಹಿಸಿದ್ದು, ತಪಾಸಣೆಗಾಗಿ ಶಿವಮೊಗ್ಗದಲ್ಲಿರುವ ಮಂಗನ ಕಾಯಿಲೆ ತಪಾಸಣ ಕೇಂದ್ರಕ್ಕೆ ರವಾನಿಸಿದೆ. ಕೊೖಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಕೃಷ್ಣಾನಂದ, ಪ್ರಯೋಗಾಲಯ ತಂತ್ರಜ್ಞ ಎಸ್. ರಾಜ್ ಉಪಸ್ಥಿತರಿದ್ದರು.