ಮೋಂತಿಮಾರು: ಯುವಕ ಆತ್ಮಹತ್ಯೆ
Team Udayavani, Feb 12, 2024, 12:34 AM IST
ಬಂಟ್ವಾಳ: ಮಂಚಿ ಗ್ರಾಮದ ಮೋಂತಿಮಾರಿನಲ್ಲಿ ಮನೆಯ ಕೋಣೆಯಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ. 10ರಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಮೋಂತಿಮಾರು ನಿವಾಸಿ ಆದರ್ಶ ಪ್ರಭು (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಅವರು ಫೆ. 9ರ ರಾತ್ರಿ 9.30ರ ತನಕ ಓದಿಕೊಂಡಿದ್ದು, ಬಳಿಕ ಮಲಗಲು ಕೋಣೆಗೆ ಹೋಗಿದ್ದರು. ಮರುದಿನ ಬೆಳಗ್ಗೆ 5ಕ್ಕೆ ಯುವಕನ ತಾಯಿ ಬಾಗಿಲು ಬಡಿದು ಎಬ್ಬಿಸಲು ಪ್ರಯತ್ನಿಸಿದಾಗ ಬಾಗಿಲು ತೆರೆಯಲಿಲ್ಲ. ಹೀಗಾಗಿ ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಆದರ್ಶ ಪ್ರಭು ಅವರು ಪುತ್ತೂರಿನ ಕಾಲೇಜಿನಲ್ಲಿ ಬಿಎಸ್ಸಿ ಪದವಿ ವ್ಯಾಸಂಗ ಮಾಡಿ ಅಂತಿಮ ಪರೀಕ್ಷೆಯಲ್ಲಿ ಕೆಮೆಸ್ಟ್ರಿ ವಿಷಯದಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆ ಮನೆಯಲ್ಲಿ ಇದ್ದು ಪರೀಕ್ಷೆಗೆ ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲಿ ಅನುತ್ತೀರ್ಣಗೊಂಡಿದ್ದರು. ಬಳಿಕ 2ನೇ ಪ್ರಯತ್ನದಲ್ಲಿ ಜ. 18ರಂದು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.