ರಾ.ಹೆ. ಕಾಮಗಾರಿ: ಚರಂಡಿ ಮುಚ್ಚಿದ್ದರಿಂದ ಸಮಸ್ಯೆ
Team Udayavani, Jun 15, 2018, 2:39 PM IST
ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಬೃಹತ್ ತೋಡು, ಚರಂಡಿಗಳನ್ನು ಮುಚ್ಚಿದ್ದರಿಂದ ಮಳೆ ಬಂದ ಸಂದರ್ಭ ನೂರಾರು ಸಮಸ್ಯೆಗಳು ಎದುರಾಗುತ್ತಿವೆ.
ನೀರಕಟ್ಟೆ ಎಂಬಲ್ಲಿ ಬೃಹತ್ ತೋಡನ್ನು ಕಾಮಗಾರಿ ಗುತ್ತಿಗೆ ಕಂಪೆನಿ ರಸ್ತೆ ನಿರ್ಮಾಣಕ್ಕಾಗಿ ಮಣ್ಣು ಹಾಕಿ ಮುಚ್ಚಿದ್ದು, ನೀರು ಹೋಗಲು ಬೇರೆ ಸಂಪರ್ಕ ಕಲ್ಪಿಸಿರಲಿಲ್ಲ. ಚರಂಡಿ ನಿರ್ಮಾಣ ಆರಂಭವಾಗಿ, ಸ್ಲ್ಯಾಬ್ ಅಳವಡಿಸಲಾಗಿತ್ತು. ಭಾರೀ ಪ್ರಮಾಣದಲ್ಲಿ ನೀರು ಬಂದು ಮಣ್ಣು, ಅಪೂರ್ಣ ಸ್ಥಿತಿಯಲ್ಲಿದ್ದ ಕಾಂಕ್ರೀಟ್ ಚರಂಡಿ ಕೊಚ್ಚಿ ಹೋಗಿದೆ. ಇಲ್ಲಿನ ತಿಮ್ಮಪ್ಪ ಗೌಡ ಎಂಬವರ ಮನೆ ಕಡೆ ನೀರನೊಂದಿಗೆ ಮಣ್ಣು ನುಗ್ಗುತ್ತಿದ್ದು, ಮನೆ ಅಪಾಯದಲ್ಲಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರಿಗೆ ಮಳೆಗಾಲದಲ್ಲಿ ಸಮಸ್ಯೆಯನ್ನು ತಂದೊಡ್ಡಿದ ಚತುಷ್ಪಥ ಕಾಮಗಾರಿಯ ಗುತ್ತಿಗೆದಾರ ಕಂಪೆನಿ ಜನಾಕ್ರೋಶಕ್ಕೆ ತುತ್ತಾಗಿದೆ.
ಮೊಗ್ರು ಗ್ರಾಮದ ದಂಬೆತ್ತಿಮಾರು ಜನಾರ್ದನ ಪೂಜಾರಿ ಅವರ ಮನೆ ಮೇಲೆ ಧರೆ ಕುಸಿದು ಭಾಗಶಃ ಹಾನಿ ಸಂಭವಿಸಿದೆ. ವಿದ್ಯುತ್ ಕಂಬ ಮುರಿದಿದೆ. ಗ್ರಾಮಕರಣಿಕ ರಫೀಕ್ ಭೇಟಿ ನೀಡಿ, ಪರಿಶೀಲಿಸಿದ್ದಾರೆ.