ಭ್ರಷ್ಟಾಚಾರಕ್ಕೆ ಎಡೆ ನೀಡಬೇಡಿ
Team Udayavani, Mar 7, 2019, 9:26 AM IST
ಪುತ್ತೂರು: ಸರಕಾರದ ಸೌಲಭ್ಯ ಪ್ರತಿಯೊಬ್ಬರಿಗೂ ಸಿಗಬೇಕು. ಈ ಸೌಲಭ್ಯ ಪಡೆದುಕೊಳ್ಳಲು ಭ್ರಷ್ಟಾಚಾರಕ್ಕೆ ಎಡೆ ನೀಡಬೇಡಿ. ಸಮಸ್ಯೆ ಆದಾಗ ಜನ ಪ್ರತಿನಿಧಿಗಳ ಗಮನಕ್ಕೆ ತನ್ನಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಪುತ್ತೂರು ಮತ್ತು ಉಪ್ಪಿನಂಗಡಿ ಹೋಬಳಿ ಮಟ್ಟದ 94 ಸಿ ಮತ್ತು 94 ಸಿಸಿ ಹಕ್ಕುಪತ್ರವನ್ನು ಮಾ. 6ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಸಭಾ ಭವನದಲ್ಲಿ ವಿತರಿಸಿ ಮಾತನಾಡಿದರು.
ಪ್ರತಿಯೊಬ್ಬರ ಮನೆ ಬಾಗಿಲಿಗೆ ಸರಕಾರದ ಸೌಲಭ್ಯ ಸಿಗಬೇಕು ಎನ್ನುವುದು ಸರಕಾರದ ಆಶಯ. ಇದೇ ಹಿನ್ನೆಲೆಯಲ್ಲಿ 94 ಸಿ, 94 ಸಿಸಿ ಹಕ್ಕುಪತ್ರ ನೀಡಲಾಗುತ್ತಿದೆ. ಹಕ್ಕುಪತ್ರ ಪಡೆದುಕೊಂಡ ಮನೆಯಲ್ಲಿ ನೀವೇ ವಾಸ್ತವ್ಯ ಹೊಂದಿರಬೇಕು. ಇದನ್ನು ಮಾರಾಟ ಮಾಡಲು ಮುಂದಾಗಬೇಡಿ ಎಂದು ಕಿವಿಮಾತು ಹೇಳಿದರು. ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸದಸ್ಯರಾದ ಮೀನಾಕ್ಷಿ ಮಂಜುನಾಥ್, ಸಾಜ ರಾಧಾಕೃಷ್ಣ ಆಳ್ವ, ತಹಶೀಲ್ದಾರ್ ಡಾ| ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ಶ್ರೀಧರ್ ಕೋಡಿಜಾಲು ಸ್ವಾಗತಿಸಿ, ವಂದಿಸಿದರು.
ಹಕ್ಕುಪತ್ರ ವಿತರಣೆ
ಪುತ್ತೂರು ಮತ್ತು ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ 46 ಮಂದಿಗೆ 94 ಸಿಸಿ, 24 ಮಂದಿಗೆ 94 ಸಿ ಹಕ್ಕುಪತ್ರ ವಿತರಣೆ ಮಾಡಲಾಯಿತು. ಈ ಹಿಂದೆ 8125 ಮಂದಿಗೆ 94 ಸಿ ಮತ್ತು 958 ಮಂದಿಗೆ 94 ಸಿಸಿ ಹಕ್ಕುಪತ್ರ ವಿತರಿಸಲಾಗಿದೆ.