ನಿಷ್ಕಂಳಂಕ ಸೇವಾ ಕಾರ್ಯದಿಂದ ಕ್ಷೇತ್ರ ಪಾವನ
Team Udayavani, Mar 23, 2019, 6:59 AM IST
ಸುಳ್ಯಪದವು : ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು ನಗರ ಪ್ರದೇಶದಷ್ಟೆ ಅಚ್ಚುಕಟ್ಟು ಹಾಗೂ ಅದ್ದೂರಿಯಾಗಿ ನಡೆಯುತ್ತಿರುವುದು ಸಂತಸದ ವಿಚಾರ. ಶುದ್ಧ ಮನಸ್ಸಿನ ನಿಷ್ಕಳಂಕ ಸೇವಾ ಕಾರ್ಯಗಳಿಂದ ಕ್ಷೇತ್ರ ಪಾವನವಾಗಲು ಸಾಧ್ಯ ಎಂದು ಪ್ರಭಾಕರ ನಾಯಕ್ ಇಂದಾಜೆ ಹೇಳಿದರು.
ಅವರು ಸುಳ್ಯಪದವು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಕಲಶಾಭಿಷೇಕದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನ ಸಾರ್ಥಕ
ಬದಿಯಡ್ಕ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚಾಲು ಮಾತನಾಡಿ, ಆಧುನಿಕತೆಯಿಂದ ದೇಶದ ಸಂಸ್ಕೃತಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಒಳ್ಳೆಯ ಸತ್ಕರ್ಮಗಳಲ್ಲಿ ತೊಡಗಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಅವಿಭಕ್ತ ಕುಟುಂಬ ಇರುವಾಗ ಕುಟುಂಬ ಒಗ್ಗಟ್ಟಿನಿಂದ ಇರುತ್ತಿದ್ದು, ಧರ್ಮದ ರಕ್ಷಣೆಯಾಗುತ್ತಿತ್ತು. ಸ್ವಾರ್ಥಿಗಳ ಸಂಖ್ಯೆ ಹೆಚ್ಚುತ್ತಿದಂತೆ ಸಮಾಜ ಬೆಳವಣಿಗೆ ಕುಂಠಿತಗೊಳ್ಳುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಎಲ್ಲರಿಗೂ ಮಾದರಿ
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಘುನಾಥ ರೈ ನುಳಿಯಾಲು ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಆಧಾತ್ಮಿಕ ಚಿಂತನೆಗಳು ಹೆಚ್ಚುತ್ತಿರುವುದರಿಂದ ಧರ್ಮ ಉಳಿದುಕೊಂಡಿದೆ. ತುಳುನಾಡಿನ ಸಂಸ್ಕೃತಿ ಆಳವಾಗಿ ಬೇರೂರಿದೆ. ಆರಾಧನೆ, ಆಚಾರ ವಿಚಾರಗಳು ಎಲ್ಲರಿಗೂ ಮಾದರಿಯಾಗಿದೆ ಅದನ್ನು ಉಳಿಸುವ ಕಾರ್ಯ ಆಗಬೇಕಾಗಿದೆ ಎಂದು ಹೇಳಿದರು.
ಕಲಶಾಭಿಷೇಕ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು, ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಮಂಗಳೂರು ಉದ್ಯಮಿ ಮಧುಸೂದನ ಅಯ್ಯರ್, ದರ್ಬೆತ್ತಡ್ಕ ಶ್ರೀ ನಾಗಬೆರ್ಮೆರ್ ಕೋಟಿ ಚೆನ್ನಯರ ಸನ್ನಿಧಾನದ ಮುಖ್ಯಸ್ಥ ಜಯರಾಮ ಪೂಜಾರಿ, ಪಾಪೆಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಮುಖ್ಯಸ್ಥ ಎಂ.ಎಸ್.ಮುಕುಂದ, ಕಿನ್ನಿಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಗಿರಿಯಪ್ಪ ಪೂಜಾರಿ ಉಪಸ್ಥಿತರಿದ್ದರು.
ಚಂದ್ರಶೇಖರ್, ರಾಜೇಶ್ ಎಂ., ಗೋಪಾಲಕೃಷ್ಣ ಬಿ., ಸುಧಾ ಎಸ್., ಪದ್ಮನಾಭ, ಚಂದ್ರಶೇಖರ್ ಕನ್ನಡ್ಕ, ಪ್ರಕಾಶ್ ಮರದಮೂಲೆ, ಶಿವಪ್ಪ ನಾಯ್ಕ ಅತಿಥಿಗಳನ್ನು ಗೌರವಿಸಿದರು. ವಿದ್ಯಾರ್ಥಿನಿ ವಿನೀಷಾ ಮತ್ತು ತಂಡದವರು ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಮಣ್ಣ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಎಂ. ವಂದಿಸಿದರು. ಶಶಿಧರ ಕಿನ್ನಿಮಜಲು ಮತ್ತು ಸುಂದರ್ ಕನ್ನಡ್ಕ ಕಾರ್ಯಕ್ರಮ ನಿರ್ವಹಿಸಿದರು.
ಸಾಧಕರಿಗೆ ಗೌರವ
ಸಾಧಕರಾದ ಭಾಗ್ಯಶ್ರೀ ಕೆ.ಎಚ್., ಅರ್ಪಿತಾ ರೈ, ಚೈತ್ರಿಕಾ, ಬಿ.ಜಿ. ಸಿಂಧೂ, ಸೃಜನಾ, ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ, ಸತ್ಯನಾರಾಯಣ ಭಟ್, ದೈವಜ್ಞರಾದ ಶಶಿಧರ್ ಮಾಂಗಾಡ್, ನಾಗರಾಜ ಮೇಸ್ತ್ರ ಮತ್ತು ಬಳಗ, ಸದಾನಂದ ಆಚಾರ್ಯ ಮತ್ತು ಬಳಗವನ್ನು ಗೌರವಿಸಲಾಯಿತು.