ಅಪಾಯವಾದರೆ ಅಧಿಕಾರಿಗಳೇ ಹೊಣೆ
Team Udayavani, Jan 17, 2019, 9:15 AM IST
ಸುಳ್ಯ: ಅಮಪರಪಟ್ನೂರು ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ವಿತರಿಸಲು ಸಂಗ್ರಹಿಸಲಾದ ಅಕ್ಕಿಯಲ್ಲಿ ಹುಳು ಸೇರಿಕೊಂಡಿದೆ. ವಿಷಯುಕ್ತ ಆಹಾರ ಸೇವಿಸಲಾಗದೆ ಆ ಶಾಲೆಯ ಮಕ್ಕಳು ಹಿಂಸೆ ಅನುಭವಿಸುತ್ತಿದ್ದಾರೆ. ಮಕ್ಕಳು ವಿಷಕಾರಿ ಆಹಾರ ಸೇವಿಸಿ ಅನಾರೋಗ್ಯಕ್ಕೆ ಒಳಗಾದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರಾ ಹೊಣೆಗಾರರು ಎಂದು ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದರು.
ಸುಳ್ಯ ತಾ.ಪಂ. ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ಬುಧವಾರ ಮಾಸಿಕ ಪ್ರಗತಿ ಪರಿಶೀಲನ ಸಭೆ ನಡೆಯಿತು.
ಆಮರಪಟ್ನೂರು ಶಾಲೆಯ ಬಿಸಿಯೂಟ ಅಕ್ಕಿಯಲ್ಲಿ ಹುಳು ಸೇರಿದ ವಿಷಯವನ್ನು ಪ್ರಸ್ತಾವಿಸಿದ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಅಮರಪಟ್ನೂರು ಪ್ರಾಥಮಿಕ ಶಾಲೆಯಲ್ಲಿ 2.50 ಕ್ವಿಂಟಲ್ ಅಕ್ಕಿ ಹೆಚ್ಚುವರಿ ದಾಸ್ತಾನಾಗಿರುವ ಕುರಿತು ಮಾಹಿತಿ ಇದೆ. ಇದು ಎಲ್ಲಿಂದ ಬಂತು? ಇದರ ಹಿಂದೆ ಸಾಕಷ್ಟು ಅನುಮಾನಗಳು ಬರುತ್ತಿವೆ. ಅಲ್ಲಿ ದಾಸ್ತಾನು ಕೊಠಡಿಯಲ್ಲಿ ಸಂಗ್ರಹಿಸಲಾದ ಅಕ್ಕಿಯಲ್ಲಿ ಹುಳ ಹುಪ್ಪಟೆಗಳು ಸೇರಿ ಮಕ್ಕಳು ಅಹಾರ ಸೇವಿಸದಂತೆ ಆಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಬಿಸಿಯೂಟ ಅಧಿಕಾರಿಗಳೂ ಉತ್ತರಿಸಬೇಕೆಂದರು. ಆದರೆ, ಸಮರ್ಪಕ ಉತ್ತರ ದೊರಕಲಿಲ್ಲ.
ವರದಿ ಸಲ್ಲಿಸಿ
ಶಾಲಾ ದಾಸ್ತಾನು ಕೊಠಡಿಯಲ್ಲಿ ಹೆಚ್ಚು ವರಿ ಅಕ್ಕಿ ಸಂಗ್ರಹವಾದದ್ದು ಹೇಗೆ? ಅಲ್ಲಿ ಅಕ್ಕಿ ಮುಗಿಯದೇ ಇದ್ದಲ್ಲಿ ಮಕ್ಕಳಿಗೆ ಬಿಸಿ ಯೂಟ ನೀಡಲಿಲ್ಲ ಎಂದರ್ಥ. ಸರಕಾರಿ ಶಾಲೆ ಉಳಿಸಿ ಅನ್ನುತ್ತೀರಿ. ನೀವೇ ಈ ರೀತಿ ಅಸಡ್ಡೆ ಮಾಡುತ್ತೀರಿ. ಅಲ್ಲಿ ಏನು ನಡೆದಿದೆ ಇತ್ಯಾದಿಗಳ ಕುರಿತು ಕೂಲಂಕಷ
ತನಿಖೆ ನಡೆಸಿ ತಾ.ಪಂ.ಗೆ ವರದಿ ……ಸಲ್ಲಿಸುವಂತೆ ಅಧಿಕಾರಿ ಗಳಿಗೆ ಸೂಚಿಸಿದರು. ತಾವು ನೀಡಿದ ವರದಿ ಆಧರಿಸಿ ಸತ್ಯಾಸತ್ಯತೆ ತಿಳಿದು ಮುಂದಿನ ತನಿಖೆಗೆ ಬರೆಯ ಲಾಗುವುದು ಎಂದರು.
ಮಂಗ ಸತ್ತರೆ ಮಾಹಿತಿ ಕೊಡಿ
ತಾ| ಆರೋಗ್ಯಾಧಿಕಾರಿ ಡಾ| ಸುಬ್ರ ಹ್ಮಣ್ಯ ಅವರು ಸಭೆಯಲ್ಲಿ ಮಾತನಾಡಿ, ಮಲೆನಾಡು ಭಾಗದ ಶಿವಮೊಗ್ಗದಲ್ಲಿ ಕ್ಯಾಸ ನೂರು ಕಾಡಿನ ಮಂಗಗಳಿಂದ ಮಂಗನ ಕಾಯಿಲೆ ಲಕ್ಷಣಗಳು ಕಂಡು ಬಂದಿವೆ. ಈ ಭಾಗದಲ್ಲಿ ಇದುವರೆಗೆ ಪತ್ತೆಯಾಗಿಲ್ಲ. ಈ ಕುರಿತು ಅರೋಗ್ಯ ಇಲಾಖೆಯ ವಿವಿಧ ವಿಭಾಗಗಳ ಕಾರ್ಯಕರ್ತೆಯರು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ರೋಗಗ್ರಸ್ತ ಮಂಗಗಳು ಸತ್ತಿರುವುದು ಕಂಡರೆ ಆರೋಗ್ಯ ಇಲಾಖೆಗೆ ಅಥವಾ ಅರಣ್ಯಾಧಿಕಾರಿ ಹಾಗೂ ವನ್ಯಜೀವಿ ವಿಭಾಗದ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿದರು.
ತಾ|ನಲ್ಲಿ 10 ಅಂಬೇಡ್ಕರ್ ಭವನಗಳಿಗೆ ಸ್ಥಳ ಗುರುತಿಸುವ ಕಾರ್ಯ ಬಹುತೇಕ ಮುಕ್ತಾಯಗೊಂಡಿದ್ದು, ಬಾಕಿ ಇರುವ ಕಡೆ ಪಹಣಿ ಪತ್ರ ವಿತರಣೆಗೆ ಇರುವ ಅಡ್ಡಿ ನಿವಾರಿಸಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ತಾ.ಪಂ. ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಲೋಕೋಪಯೋಗಿ, ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೆಎಫ್ಡಿಸಿ ಇಲಾಖೆಗಳ ಈ ಹಿಂದಿನ ಸಭೆಯ ಅನಂತರದ ಪ್ರಗತಿ ಪರಿಶೀಲನೆಯನ್ನು ನಡೆಸಲಾಯಿತು.
ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್. ರೈ, ಕಾರ್ಯನಿರ್ವಾಹಣಾಧಿಕಾರಿ ಮಧುಕುಮಾರ್, ಕೆಡಿಪಿ ಸದಸ್ಯರು ಉಪಸ್ಥಿತರಿದ್ದರು.
ಸಂಪರ್ಕ ವಿಳಂಬ
ಪ್ರಧಾನಮಂತ್ರಿ ಗ್ಯಾಸ್ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಇನ್ನೂ ಫಲಾನುಭವಿಗಳಿಗೆ ತಲುಪಿಲ್ಲ. ಇದಕ್ಕೆ ಉತ್ತರಿಸುವಂತೆ ಆಹಾರ ನಿರೀಕ್ಷಕರ ಬಳಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದರು. ಅಧಿಕಾರಿಗಳು ಉತ್ತರಿಸಿ, ಯೋಜನೆಯಲ್ಲಿ ಫಲಾನುಭವಿಗಳ ಅರ್ಜಿಗಳು ನೇರ ಗ್ಯಾಸ್ ಏಜೆನ್ಸಿಯವರ ಬಳಿಗೆ ಹೋಗಿವೆ ಎಂದರು. ಅಡುಗೆ ಅನಿಲ ಸಂಪರ್ಕವನ್ನು ವಿಳಂಬ ಮಾಡದೆ ತತ್ಕ್ಷಣವೇ ಆಯ್ದ ಫಲಾನುಭವಿಗಳಿಗೆ ವಿತರಿಸುವಂತೆ ಅಧ್ಯಕ್ಷರು ಸೂಚನೆ ನೀಡಿದರು.